(ಲವಲವಿಕೆಯಿಂದಿದ್ದ ಗೆಳೆಯನೊಬ್ಬನಿಗೆ ಕರುಳಿನ ಕ್ಯಾನ್ಸರ್ ಎಂದು ತಿಳಿದು ಮನಸ್ಸಿಗೆ ಬಹಳ ನೋವಾಯಿತು, ಅದೇ ಬೇಜಾರಿನಲ್ಲಿ ಆ ದೇವರಿಗೊಂದು ಕವನ ಸಂದೇಶ ಬರೆದೆ, ಅದು ಅವನಿಗೆ ಮುಟ್ಟುತ್ತದೋ ಇಲ್ಲವೋ ಗೊತ್ತಿಲ್ಲ! ಆ ಗೆಳೆಯ ಗುಣಮುಖನಾಗಲಿ, ಸಾವಿನ ದವಡೆಯಿಂದ ಬಚಾವಾಗಲಿ, ಮತ್ತೆ ಅವನ ಕುಟುಂಬದಲ್ಲಿ ನಗು ಉಕ್ಕಲಿ ಎಂದು ಹಾರೈಸುವೆ. )
ಕಣ್ಣಿಲ್ಲದ ನನ್ನೊಲವಿನ
ಓ ಕಟುಕ ದೇವರೇ
ಇದೋ ನಿನಗೊಂದು
ಕವನ ಸಂದೇಶ!
ಸ್ವಲ್ಪ ಬಿಡುವಾಗಿ
ಕುಳಿತು ಓದಿಕೋ!
ನಗಿಸಲಾರೆಯಾದರೆ
ತೆಪ್ಪಗೆ ಸುಮ್ಮನಿರು
ನಗಿಸುವವರ ಹೀಗೆ
ಬೆಂಬಿದ್ದು ಕಾಡದಿರು
ಕೊಡುವುದಾದರೆ ಕೊಡು
ಕಷ್ಟಗಳ ದುಷ್ಟ ದುರುಳ
ರಾಜಕಾರಣಿಗಳ ಕಾಣಿಸದೆ
ನಿನಗವರ ಕಿರುಕುಳ
ಸುಳ್ಳಾಗಿಸು ಆ ಮಾತು
ಸದಾ ಪಾಪಿ ಚಿರಾಯು
ನಿಜವಾಗಿಸು ಸತ್ಕರ್ಮಿ
ಈ ಲೋಕದಿ ದೀರ್ಘಾಯು
ಭೂಮಿಗೆ ಭಾರವಾಗಿವೆ
ಹಲವು ದಂಡಪಿಂಡಗಳು
ಕೊಡಬಾರದೇ ಅವರಿಗೆ
ಅನಿರೀಕ್ಷಿತ ಸಾವು!
ಹೃದಯವೊಡೆದಿದ್ದರೂ
ನಿರಾಶೆ ಕವಿದಿದ್ದರೂ
ನಿತ್ಯ ನಿರಂತರವಾಗಿ
ಸಂಘರ್ಷದಲಿ ನೊಂದು
ಬೆಂದರೂ ವಿಧಿಯಿಲ್ಲದೇ
ಬದುಕುವ ಜೀವಗಳಿವೆ
ನೂರಾರು ಕಣ್ಮುಂದೆ!
ನೀನೇಕೆ ಮೂಢನಾದೆ!
ಕಣ್ಣಿಲ್ಲದ ಕುರುಡನಾದೆ !
ಯಾರಿಗೆ ಕೊಡಬೇಕು ಸಾವು?
ಯಾರಿಗೆ ನೀಡಬೇಕು ನೋವು?
ಅರಿಯದ ಮೂಢ ನೀನೇಕಾದೆ !
ಇದನರಿಯದ ನೀನು ನಿಜಕ್ಕೂ
ಜಗಕೆ ದೈವ ಅದು ಹೇಗಾದೆ?
ಮತಿಯಿದ್ದರೆ ನಿಜಕೂ ನಿನಗೆ
ನಗಿಸುವ ಮಿತ್ರನ ಉಳಿಸು
ಕ್ರೂರಿ ದುಷ್ಟರ ಅಳಿಸು
ನಿನ್ನನೇ ನೀನು ನಿಜದಿ
ದೈವವೆಂದು ನಿರೂಪಿಸು!
No comments:
Post a Comment