Sunday, July 5, 2015

ಓ ಕಟುಕ ದೇವರೇ,,,,ನಿನಗೊಂದು ಕವನ ಸಂದೇಶ!




(ಲವಲವಿಕೆಯಿಂದಿದ್ದ ಗೆಳೆಯನೊಬ್ಬನಿಗೆ ಕರುಳಿನ ಕ್ಯಾನ್ಸರ್ ಎಂದು ತಿಳಿದು ಮನಸ್ಸಿಗೆ ಬಹಳ ನೋವಾಯಿತು, ಅದೇ ಬೇಜಾರಿನಲ್ಲಿ ಆ ದೇವರಿಗೊಂದು ಕವನ ಸಂದೇಶ ಬರೆದೆ, ಅದು ಅವನಿಗೆ ಮುಟ್ಟುತ್ತದೋ ಇಲ್ಲವೋ ಗೊತ್ತಿಲ್ಲ!  ಆ ಗೆಳೆಯ ಗುಣಮುಖನಾಗಲಿ, ಸಾವಿನ ದವಡೆಯಿಂದ ಬಚಾವಾಗಲಿ, ಮತ್ತೆ ಅವನ ಕುಟುಂಬದಲ್ಲಿ ನಗು ಉಕ್ಕಲಿ ಎಂದು ಹಾರೈಸುವೆ. )

ಕಣ್ಣಿಲ್ಲದ ನನ್ನೊಲವಿನ 
ಓ ಕಟುಕ ದೇವರೇ 
ಇದೋ ನಿನಗೊಂದು  
ಕವನ ಸಂದೇಶ!
ಸ್ವಲ್ಪ  ಬಿಡುವಾಗಿ
ಕುಳಿತು ಓದಿಕೋ! 
ನಗಿಸಲಾರೆಯಾದರೆ 
ತೆಪ್ಪಗೆ ಸುಮ್ಮನಿರು 
ನಗಿಸುವವರ ಹೀಗೆ 
ಬೆಂಬಿದ್ದು ಕಾಡದಿರು 
ಕೊಡುವುದಾದರೆ ಕೊಡು 
ಕಷ್ಟಗಳ ದುಷ್ಟ ದುರುಳ 
ರಾಜಕಾರಣಿಗಳ ಕಾಣಿಸದೆ 
ನಿನಗವರ ಕಿರುಕುಳ 
ಸುಳ್ಳಾಗಿಸು ಆ ಮಾತು  
ಸದಾ ಪಾಪಿ ಚಿರಾಯು 
ನಿಜವಾಗಿಸು ಸತ್ಕರ್ಮಿ 
ಈ ಲೋಕದಿ ದೀರ್ಘಾಯು 
ಭೂಮಿಗೆ ಭಾರವಾಗಿವೆ
 ಹಲವು ದಂಡಪಿಂಡಗಳು  
ಕೊಡಬಾರದೇ ಅವರಿಗೆ 
ಅನಿರೀಕ್ಷಿತ ಸಾವು! 
ಹೃದಯವೊಡೆದಿದ್ದರೂ 
ನಿರಾಶೆ ಕವಿದಿದ್ದರೂ 
ನಿತ್ಯ ನಿರಂತರವಾಗಿ  
ಸಂಘರ್ಷದಲಿ ನೊಂದು 
ಬೆಂದರೂ ವಿಧಿಯಿಲ್ಲದೇ 
ಬದುಕುವ ಜೀವಗಳಿವೆ 
ನೂರಾರು ಕಣ್ಮುಂದೆ! 
ನೀನೇಕೆ ಮೂಢನಾದೆ! 
ಕಣ್ಣಿಲ್ಲದ ಕುರುಡನಾದೆ !
ಯಾರಿಗೆ ಕೊಡಬೇಕು ಸಾವು? 
ಯಾರಿಗೆ ನೀಡಬೇಕು ನೋವು? 
ಅರಿಯದ ಮೂಢ ನೀನೇಕಾದೆ !
ಇದನರಿಯದ ನೀನು ನಿಜಕ್ಕೂ 
ಜಗಕೆ ದೈವ ಅದು ಹೇಗಾದೆ?
ಮತಿಯಿದ್ದರೆ ನಿಜಕೂ ನಿನಗೆ 
ನಗಿಸುವ ಮಿತ್ರನ ಉಳಿಸು 
ಕ್ರೂರಿ ದುಷ್ಟರ ಅಳಿಸು 
ನಿನ್ನನೇ ನೀನು ನಿಜದಿ 
ದೈವವೆಂದು ನಿರೂಪಿಸು! 

No comments: