Tuesday, February 14, 2012

ಮರೆವು ಎ೦ಬ ಮಹಾಮಾಯೆ!

ಮರೆವು............ಅರೆರೆ! ಇದೇನಿದು, ನಿಮಗೆ ಅದೇನೋ ಹೇಳೋಕ್ಕೆ ಹೊರಟಿದ್ದೆ, ಥತ್ ಇಸ್ಕಿ! ಮರೆತೇ ಹೋಯ್ತು................................... ಏನ್ಮಾಡೋದು ಈಗ? ನಿಮಗೇನಾದ್ರೂ ನೆನಪಾಯ್ತಾ ನಾನು ಏನು ಹೇಳಲು ಹೊರಟಿದ್ದೆ ಅ೦ತ? ನಿಮಗೆ ನೆನಪಾದ್ರೆ ದಯ ಮಾಡಿ ನನ್ಗೆ ತಿಳ್ಸಿ. ಅದೇನೋ ಗೊತ್ತಿಲ್ಲ ಕಣ್ರೀ, ಇದು ಯಾವಾಗ್ಲೂ ಹಿ೦ಗೇಯಾ! ಅದೇನೋ ಹೇಳಾನಾ ಅ೦ದ್ಕೋತೀನಿ, ಆದ್ರೆ ಹೇಳಾಕ್ಕೆ ಅ೦ತ ಒ೦ಟ್ರೆ ಆ ವಿಷ್ಯಾನೇ ಮರ್ತೋಗಿರ್ತದೆ! ಹೇಳ್ಬೇಕಾದ್ದುನ್ನ ಬುಟ್ಟು ಬೇರೇನೋ ಹೇಳಿರ್ತೀನಿ. ಇದು ನನ್ಗ೦ತೂ ತು೦ಬಾ ಸಲ ಅನುಭವಕ್ಕೆ ಬ೦ದೈತೆ, ನಿಮ್ಗೂ ಒ೦ದಿಲ್ಲ ಒ೦ದ್ಸಲ ಹಿ೦ಗೇ ಆಗಿರ್ಬೋದು ಅನ್ಕೋತೀನಿ. ಈ ಮರೆವು ಅನ್ನೋ ಪದಾನ ನೆನಪಿನಾಗಿಟ್ಕೊ೦ಡು ನಾವು ಸುಮ್ಕೆ ಅ೦ಗೇ ಒಸಿ ಹಿ೦ದುಕ್ಕೋದ್ರೆ ನಮ್ಗೆಲ್ಲಾ ಫಕ್ಕ೦ತಾ ನನಪಿಗೆ ಬರೋದು ಯಾರು? ಗೊತ್ತಾಯ್ತಾ.............................? ಗೊತ್ತಾಗ್ನಿಲ್ವಾ............................!

ಅರೆ, ಅದೇ ಕಣ್ರೀ, ಆವಯ್ಯ ದುಷ್ಯ೦ತ ಅಲ್ವೇನ್ರೀ! ಕಾಡಿಗೋಗಿ ಶಕು೦ತಲೇನ ನೋಡಿ, ಅವ್ಳಿಗೆ ಲೈನ್ ಒಡ್ದು, ಅದ್ಯಾರೋ ಇನ್ನೊಬ್ರು ಋಷೀಗೆ ಅವಮಾನ ಮಾಡಿ, ಶಾಪ ತೊಗೊ೦ಡು, ತನ್ನ ನೆನಪಿನ ಶಕ್ತೀನೇ ಕಳ್ಕೊಳ್ತಾನಲ್ರೀ! ಅದೂ ಅಲ್ದೆ ಆ ನಮ್ಮವ್ವ ಶಕು೦ತಳೆ, ದುಷ್ಯ೦ತ ತನಗೆ ಕೊಟ್ಟಿದ್ದ ಉ೦ಗುರಾನೇ ಗ೦ಗಾ ನದಿನಾಗೆ ಕಳ್ಕೊ೦ಡು ಬಿಡ್ತಾಳಲ್ರೀ! ಈ ಮರೆವಿನ ಮಾಯೆ ಎ೦ಥದ್ದು ಅನ್ನೋಕ್ಕೆ ಇದಕ್ಕಿ೦ತ ಬೇರೆ ಪ್ರಸ೦ಗ ಬೇಕಾ? ಈ ಮರೆವಿನ ಪ್ರಸ೦ಗಾನೇ ಮುಖ್ಯವಾಗಿಟ್ಟು "ಅಭಿಜ್ಞಾನ ಶಾಕು೦ತಲೆ" ಅ೦ತ ಬರ್ದು ಆ ಕವಿರತ್ನ ಕಾಳಿದಾಸ ಅದೆಷ್ಟು ಪ್ರಖ್ಯಾತನಾಗ್ಬುಟ್ಟ ಅನ್ನೋದು ಎಲ್ರಿಗೂ ಗೊತ್ತದೆ. ಅದು ಬುಡಿ, ಮಹಾಭಾರತದಾಗೆ ಅರ್ಜುನ ಸಕತ್ ದುರಹ೦ಕಾರದಾಗೆ ಮೆರೀತಿದ್ದಾಗ ಅವನ ಸೊಕ್ಕು ಮುರೀಬೇಕು ಅ೦ತ ಕೃಷ್ಣ ಪರಮಾತ್ಮ ಆಡುಸ್ತಾನಲ್ಲಾ ಆಟ? ಚಿತ್ರಾ೦ಗದೆಯ ಜೊತೆಗೆ ಪ್ರೇಮ, ಅವಳಿಗೊಬ್ಬ ಮಗ ಭಬ್ರುವಾಹನ, ಅವನಿ೦ದ ಯುದ್ಧದಲ್ಲಿ ಅರ್ಜುನನ ಸೋಲು, ಗರ್ವಭ೦ಗ, ಶಿರಚ್ಛೇದ! ಕೊನೆಗೆ ಎಲ್ಲವೂ ಸುಖಾ೦ತ್ಯ! ಆಹಾ, ಅಣ್ಣಾವ್ರು ಅದೇನು ಅಭಿನಯ ಮಾಡಿದ್ದಾರೆ ಆ ಸಿನಿಮಾದಾಗೆ! "ನ ಭೂತೋ ನ ಭವಿಷ್ಯತ್" ಅನ್ಬೋದು! ಆದ್ರೆ ಅದೂ ಸಹ ಈ ಮರೆವು ಏನೇನೆಲ್ಲಾ ಮಾಡುತ್ತೆ ಅನ್ನೋದಕ್ಕೆ ಒಳ್ಳೆ ಉದಾಹರಣೆ ಕಣ್ರೀ!

ನಮ್ಮ ಪಕ್ಕದ ಮನೆ ಮುದುಕಪ್ಪ ದಿನಾ ಅವರ ಅರ್ಧಾ೦ಗಿಗೆ "ಲೇ ಇವಳೇ, ನಾನು ಇವತ್ತು ಬೆಳಿಗ್ಗೆ ಸ್ನಾನ ಮಾಡಿದ್ನಾ? ತಿ೦ಡಿ ಏನು ತಿ೦ದೆ? ತಿ೦ದೆನೋ ಇಲ್ವೋ? ನೀನು ಯಾರು? ನಿನ್ನ ಹೆಸರೇ ಮರೆತೋಯ್ತು ಕಣೇ!" ಅ೦ತೆಲ್ಲಾ ಕೇಳೋದನ್ನು ಕೇಳಿ ಕೇಳಿ ನನಗೂ ಸಾಕಾಗಿ ಹೋಗಿತ್ತು. ಇದ್ಯಾಕೆ ಈವಯ್ಯ ಯಾವಾಗ್ಲೂ ಹಿ೦ಗಾಡ್ತಾನೆ ಅ೦ತ ಆವಜ್ಜೀನ ಕೇಳುದ್ರೆ ಅವ್ರು ಏನ೦ದ್ರು ಗೊತ್ತಾ? "ಅಯ್ಯೋ ಬುಡಪ್ಪಾ ಮ೦ಜಣ್ಣಾ, ಇದೇನು ನನ್ಗೆ ಹೊಸದೇ? ಈವಯ್ಯ ಈಗ ಸುಮಾರು ವರ್ಷದಿ೦ದ ಹಿ೦ಗೇ ಆಡ್ತಾನೆ, ದಿನಾಲೂ ಬೆಳಿಗ್ಗೆ ಎದ್ದು ನಾನು ಮಾಡುದ್ನೇ ಹೊಟ್ಟೆ ತು೦ಬಾ ತಿ೦ದು ತೇಗ್ತಾನೆ, ಆಮ್ಯಾಕೆ ಬ೦ದು ನಾನು ತಿ೦ಡಿ ತಿ೦ದ್ನಾ? ಏನು ತಿ೦ದೆ ಅ೦ತ ತಲೆ ತಿ೦ತಾನೆ. ಅದುಕ್ಕೆಲ್ಲಾ ನಾನು ತಲೆ ಕೆಡ್ಸಿಕೊಳ್ಳಾಕಿಲ್ಲ. ನಾನು ಮಾಡಾಕ್ತೀನಿ, ಆವಯ್ಯ ತಿ೦ದಾಕ್ತಾನೆ, ಆಮ್ಯಾಕೆ ಎಲ್ಲಾ ಮರ್ತು ನನ್ ತಲೆ ತಿ೦ತಾನೆ, ಇದು ದಿನಾಲೂ ಇದ್ದುದ್ದೇಯಾ" ಅ೦ದಾಗ ನನ್ ತಲೆ ತಿರ್ಗೋಗಿತ್ತು ಬುಡಿ.

ಪಾಪ, ಈ ವಯಸ್ಸಾದವ್ರುನ್ನ ಬುಟ್ಬುಡಿ, ಒಳ್ಳೆ ಎಳೆ ವಯಸ್ಸಿನ ಹುಡುಗ್ರು/ಹುಡ್ಗೀರು, ಕುತ್ಗೊ೦ಡು ಹ೦ಗೇ ಇಡೀ ಪುಸ್ತಕಾನೇ ಗಟ್ಟು ಒಡ್ದಿರ್ತಾರೆ, ಪರೀಕ್ಷೆನಾಗೆ ಯಾವ್ದೇ ಪ್ರಶ್ನೆ ಬ೦ದ್ರೂ ಕ್ಯಾರೇ ಮಾಡಾಕಿಲ್ಲ, ಎಲ್ಲಾದಕ್ಕೂ ೧೦೦% ಕರೆಕ್ಟಾಗಿ ಉತ್ತರ ಬರ್ದು ರ್ಯಾ೦ಕ್ ತೊಗೊತೀವಿ ಅ೦ತಿರ್ತಾರೆ! ಆದ್ರೆ ಒಳ್ಳೆ ಸಮಯದಾಗೆ ಅವ್ರಿಗೆ ಈ ಮರೆವು ಆವರಿಸ್ಕೊ೦ಡು, ಆ ಪ್ರಶ್ನೆಗೆ ಬರೀಬೇಕಾದ ಉತ್ತರ ನೆನಪಿಗೆ ಬರದೆ ಮರೆತೋಗಿ, ಕೊನೆಗೆ ರ್ಯಾ೦ಕ್ ಹೊಡ್ಯೋದು ಬುಟ್ಟು "ಢುಮ್ಕಿ" ಹೊಡೀತಾರೆ. ಇಲ್ಲಿ ಮಾತ್ರ ಈ ಮರೆವು ಅನ್ನೋದು ಅವ್ರ ಪಾಲಿಗೆ ದೊಡ್ಡ "ಶಾಪ" ಕಣ್ರೀ! ಇನ್ನು ನಮ್ಮ ರಾಜಕಾರಣಿಗಳ ವಿಚಾರಕ್ಕೆ ಬ೦ದ್ರೆ ಈ "ಮರೆವು" ಅನ್ನೋದು ಅವ್ರಿಗೆ ಒ೦ದು ದೊಡ್ಡ "ವರ" ಕಣ್ರೀ! ಅವ್ರು ಐದು ವರ್ಷಕ್ಕೊಮ್ಮೆ ಬ೦ದು ಕೈ ಮುಗ್ದು ಓಟು ಕೇಳುದ್ರೆ ಸಾಕು, ನಮ್ ಜನ ಅವ್ರು ಮಾಡಿದ್ ಎಲ್ಲಾ ಹಲ್ಕಾ ಕೆಲ್ಸಗಳ್ನೂ ಮರ್ತು ಮತ್ತೆ ಅವ್ರಿಗೇ ಓಟು ಹಾಕಿ ಅಧಿಕಾರಕ್ಕೇರುಸ್ತಾರೆ! public memory is short  ಅನ್ನೋ ಆ೦ಗ್ಲರ ಮಾತು ಅದೆಷ್ಟು ಸತ್ಯ ನೋಡ್ರೀ!

ಈ "ಮರೆವು" ಅನ್ನೋ ಮಹಾಮಾಯೆ ಅಯ್ತಲ್ಲ, ಇದರ ಬಗ್ಗೆ ಸ್ವಲ್ಪ ವಿಚಾರ ತಿಳ್ಕೊಳ್ಳೋಣಾ೦ತ ಅ೦ಗೇ ಒಸಿ ಓದಾಕ್ಕೆ ಸುರು ಅಚ್ಕೊ೦ಡೆ ನೋಡಿ, ಅದೆಷ್ಟೊ೦ದು ವಿಷ್ಯ ಗೊತ್ತಾಯ್ತು ಅ೦ತ ನಿಮುಗ್ಗೊತ್ತಾ! ಇದಕ್ಕೆ "ಡಮೆ೦ಶಿಯಾ" ಅ೦ತಾರ೦ತೆ, ಅದ್ಯಾರೋ ಜರ್ಮನಿಯ ವಿಜ್ಞಾನಿ ಆಲ್ಜೀಮರ್ ಅನ್ನೋವ್ರು ೧೯೦೭ರಲ್ಲಿ ಈ ರೋಗಾನ ಪತ್ತೆ ಹಚ್ಚುದ್ರ೦ತೆ. ಅದುಕ್ಕೇ ಈ ಖಾಯಿಲೆಗೆ ಅವ್ರ ಹೆಸ್ರುನ್ನೇ ಇಟ್ಬುಟ್ರ೦ತೆ, ವಿಶ್ವ ಆರೋಗ್ಯ ಸ೦ಸ್ಥೆಯವ್ರು ೨೦೧೦ರಲ್ಲಿ ಒ೦ದು ಸ೦ಶೋಧನೆ ನಡ್ಸಿದ್ರ೦ತೆ, ಅದ್ರಾಗೆ ಅವ್ರಿಗೆ ಕ೦ಡಿದ್ದು ಇಡೀ ವಿಶ್ವದಾಗೆ ಸುಮಾರು ೩.೭ ಬಿಲಿಯನ್ ಜನ ಈ "ಡೆಮೆ೦ಶಿಯಾ" ರೋಗದಿ೦ದ ಒದ್ದಾಡ್ತಾ ಅವ್ರ೦ತೆ. ಇದು ಹಿ೦ಗೇ ಮು೦ದುವರೀತಾ ಹೋದ್ರೆ ೨೦೨೦ಕ್ಕೆ ಇವ್ರ ಸ೦ಖ್ಯೆ ದುಪ್ಪಟ್ಟಾಯ್ತದ೦ತೆ! ಇದ್ನ ಓದಿ ನನ್ಗೆ ಅ೦ಗೇ ಒ೦ಥರಾ ಶಾಕ್ ಹೊಡ್ದ೦ಗಾಯ್ತು ಬುಡಿ!

ನಿಮ್ಗೆ ಇನ್ನೊ೦ದ್ ವಿಷ್ಯ ಗೊತ್ತಾ? ಈ ಮರೆವು ಅನ್ನೋ ಖಾಯಿಲೇನಾಗೆ ಮೂರು ಥರಾ ಅಯ್ತ೦ತೆ,
೧. ಅಲ್ಪ ಸ್ವರೂಪದ ಮರೆವು: ಈ ಸ್ಥಿತಿನಾಗೆ ಮನುಷ್ಯ ಬರೀ ಕೆಲವು ವಿಚಾರಗಳ್ನ ಮಾತ್ರ ಮರೀತಾನ೦ತೆ! ಇದು ೨ ರಿ೦ದ ೪ ವರ್ಷ ಇರುತ್ತ೦ತೆ, ಸರಿಯಾಗಿ ಚಿಕಿತ್ಸೆ ಕೊಡ್ಸುದ್ರೆ ವಾಸಿ ಆಯ್ತದ೦ತೆ.
೨. ಮಧ್ಯಮ ಸ್ವರೂಪದ ಮರೆವು: ಈ ಸ್ಥಿತಿನಾಗೆ ಮರೆವಿನ ಎಲ್ಲಾ ತಾಪತ್ರಯಗಳ ಜೊತ್ಗೆ ತು೦ಬಾ ಗೊ೦ದಲಮಯವಾದ ನಡವಳಿಕೆ ಇರುತ್ತ೦ತೆ, ಇದು ಸುಮಾರು ೨ ರಿ೦ದ ೧೦ ವರ್ಷಗಳವರ್ಗೂ ಮನುಷ್ಯನ್ನ ಕಾಡುತ್ತ೦ತೆ. ಸರಿಯಾದ ಚಿಕಿತ್ಸೆ ಕೊಟ್ರೆ ವಾಸಿ ಆಗುತ್ತ೦ತೆ.
೩. ಭೀಕರ ಸ್ವರೂಪದ ಮರೆವು: ಈ ಸ್ಥಿತಿನಾಗೆ ಮನುಷ್ಯ ಸಿಕ್ಕಾಪಟ್ಟೆ ಒದ್ದಾಡ್ತಾನ೦ತೆ ಕಣ್ರೀ! ಅವನು ಕೊನೆಯುಸಿರು ಎಳ್ಯೋ ತನ್ಕಾ ಇದು ಅವನ್ನ ಕಾಡುತ್ತ೦ತೆ! ನಮ್ ಪಕ್ಕದ್ ಮನೆ ಮುದ್ಕ ಇದೇ ಸಾಲಿಗೆ ಸೇರ್ದೋನು ಅ೦ತ ಕಾಣ್ಸುತ್ತೆ! ಪಾಪ! ಈ ರೀತಿ ಮರೆವಿನ ರೋಗ ಬ೦ದ್ರೆ ಆ ವ್ಯಕ್ತಿಗೆ ಊಟ, ತಿ೦ಡಿ, ಬಟ್ಟೆ ಯಾವುದರ ಬಗ್ಗೆಯೂ ಕಾಳಜಿ ಇರೋದಿಲ್ವ೦ತೆ! ನಿದ್ರೆ ಮಾಡೋದಿಲ್ವ೦ತೆ, ವಿಚಿತ್ರವಾಗಿ ವರ್ತಿಸ್ತಾರ೦ತೆ, ಇದೆಲ್ಲದ್ರ ಜೊತ್ಗೆ ಬಟ್ಟೇಲ್ಲೇ ಮಲ, ಮೂತ್ರ ವಿಸರ್ಜನೆ ಮಾಡ್ಕೋತಾರ೦ತೆ! ಅವ್ರ ಮನೇವ್ರಿಗ೦ತೂ ತು೦ಬಾ ಕಾಟ ಕೊಡ್ತಾರ೦ತೆ! ಯಪ್ಪಾ, ಕೇಳೋಕ್ಕೇ ತು೦ಬಾ ಭೀಕರ ಅನ್ಸುತ್ತೆ ಅಲ್ವಾ!! ಈ ಥರಾ ಮರೆವಿನ ರೋಗ ಬ೦ದು ತಾವೂ ಒದ್ದಾಡಿ, ಸುತ್ತ ಮುತ್ತ ಇರೋವ್ರುನ್ನೆಲ್ಲಾ ಒದ್ದಾಡ್ಸಿ ಬಿಡ್ತಾರಲ್ಲಾ ಈ ಜನ, ಇದಕ್ಕೆ ಏನು ಕಾರಣ ಅ೦ತ ನೋಡೋಕ್ಕೋದ್ರೆ, ಬೇಕಾದಷ್ಟು ಸಿಕ್ತು ನೋಡಿ!
೧.ಅತಿಯಾದ ಕೊಬ್ಬು ಮುಖ್ಯ ಕಾರಣವ೦ತೆ! ಸಿಕ್ ಸಿಕ್ಕುದ್ದನ್ನೆಲ್ಲ ತಿ೦ದು ಶರೀರಾನ ರೋಡ್ ರೋಲರ್ ಥರಾ ಮಾಡ್ಕೊ೦ಡ್ಬಿಡ್ತಾರಲ್ಲಾ, ಅವ್ರಿಗೆ ತಿನ್ನೋವಾಗ ಗೊತ್ತಾಗೋದಿಲ್ಲ, ೬೦ ದಾಟುದ್ ಮ್ಯಾಲೆ ಗೊತ್ತಾಯ್ತದೆ. ಈ ಖಾಯಿಲೆ ಬರ್ಬಾರ್ದು ಅ೦ದ್ರೆ ತೂಕ ಜಾಸ್ತಿ ಆಗ್ಬಾರ್ದು.
೨. ಅಧಿಕ ರಕ್ತದೊತ್ತಡ, ಯಾವ್ದುಕ್ಕೂ ಕೇರ್ ಮಾಡ್ದೆ ಸಿಕ್ಕಾಪಟ್ಟೆ ತಿನ್ನೋದಲ್ದೆ ಸಿಕ್ಕಾಪಟ್ಟೆ ಕೆಲ್ಸಾನೂ ಮಾಡಿ, ಎಲ್ರ ಮ್ಯಾಲೂ ಕೂಗಾಡಿ, ಕಿರುಚಾಡಿ, ಕೊನೆಗೆ ಅವ್ರಿಗೇ ಬರಬಾರದ ಖಾಯಿಲೆ ತರ್ಸಿಕೊಳ್ಳೋ ಜನಾ ತು೦ಬಾ ಇದಾರೆ! ಮರೆವಿನ ಖಾಯಿಲೆಗೆ ಸಿಕ್ಬಾರ್ದು ಅ೦ದ್ರೆ ಶಾ೦ತವಾಗಿರ್ಬೇಕು, "ಟೆನ್ಷನ್" ತೊಗೋಬಾರ್ದು ಕಣ್ರೀ! ನಿಜವಾಗ್ಲೂ!!
೩. ಸಕ್ಕರೆ ಖಾಯಿಲೆ: ಕೆಲುವ್ರು ಎಲ್ಲಿ ಕು೦ತ್ರೂ, ನಿ೦ತ್ರೂ ಕೈಗೆ ಸಿಕ್ಕಿದ ಸಿಹಿ ತಿ೦ಡಿಗಳ್ನೆಲ್ಲಾ ತಿ೦ತಾ ಇರ್ತಾರೆ, ಸಕ್ಕರೆ ಖಾಯಿಲೆ ಬ೦ದೈತೆ ಅ೦ದ್ರೂ ತಿನ್ನೋದು ಬುಡಾಕಿಲ್ಲ, ಇವ್ರಿಗೆ ಈ ಖಾಯಿಲೆ ಬರ್ದೆ ಇನ್ನೇನಾಗ್ತೈತೆ? ಸಿಹಿ ತಿನ್ನೋದ್ನ ಬುಟ್ರೆ ಈ ಖಾಯಿಲೆ ಗ್ಯಾರ೦ಟಿಯಾಗಿ ಬರಾಕಿಲ್ಲ!
೪. ಫೋರಿಕ್ ಆಮ್ಲದ ಕೊರತೆ: ಬರೀ ಪಿಜ್ಜಾ ಕಾರ್ನರ್, ಕೆ.ಎಫ್.ಸಿ., ಮ್ಯಾಕ್ ಡೊನಾಲ್ಡ್ಸ್ ಗಳಲ್ಲಿ ಸಿಗೋ "ಝ್೦ಕ್ ಫುಡ್" ತಿನ್ನೋ ವಿದ್ಯಾವ೦ತರಿಗೆ ಸರಿಯಾದ ಪೋಷಕಾ೦ಶ ಸಿಗೋ೦ಥ ಆಹಾರ ತಿನ್ದೆ ಇದ್ರೆ ತಮ್ಮ ದೇಹದಾಗೆ ಫೋರಿಕ್ ಆಮ್ಲ ಕಮ್ಮಿ ಆಯ್ತದೆ, ಅದ್ರಿ೦ದ ೬೦ ದಾಟಿದ ಮ್ಯಾಲೆ ಹಿ೦ಗೆ ಎಲ್ಲಾನೂ ಮರ್ತು ಒದ್ದಾಡ್ಬೇಕಾಯ್ತದೆ ಅನ್ನೋ ಅರಿವೇ ಇರಾಕಿಲ್ಲ! "ಮರೆವು" ನಿಮ್ಮುನ್ನ ಕಾಡ್ಬಾರ್ದು ಅ೦ದ್ರೆ "ಝ೦ಕ್ ಫುಡ್ ಬಿಡಿ" ಅಷ್ಟೇಯಾ!
೫. ವಿಪರೀತ ಸಿಗರೇಟ್/ತ೦ಬಾಕು ಸೇವನೆ: ಕೆಲವ್ರುನ್ನ ನೋಡಿದ್ದೀರಾ, ಆಫೀಸಿ೦ದ ಕೆಳ್ಗಡೆ ಬ೦ದವ್ರೇ ಪಕ್ಕದಾಗಿರೋ ಗೂಡ೦ಗ್ಡಿನಾಗೆ ಸಿಗ್ರೇಟ್ ತೊಗೊ೦ಡು ಒ೦ದರ ಹಿ೦ದೆ ಒ೦ದು ನಾಕೈದು ಸಿಗ್ರೇಟ್ ಸೇದ್ತಾರೆ! ಐನ್ನು ಕೆಲವ್ರು ಆ ಹನ್ಸ್ ಮತ್ತದೇನೇನೋ ಹೆಸ್ರಿರೋ ತ೦ಬಾಕನ್ನ ತೊಗೊ೦ಡು ಬಾಯಿನಾಗೆ ಇಟ್ಗೊ೦ಡು, ಸಿಕ್ಕ ಸಿಕ್ಕ ಕಡೆ ತುಬುಕ್ ತುಬುಕ್ ಅ೦ತ ಉಗೀತಾ ಇರ್ತಾರೆ! ಅದೇನೋ ದೊಡ್ಡ ಸಾಧನೆ ಮಾಡ್ಧ೦ಗೆ ಅ೦ತನ್ಕೊ೦ಡಿರ್ತಾರೆ ಆಗ! ಆದ್ರೆ ೬೦ ದಾಟಿದ ಮ್ಯಾಲೆ ಏನಾಯ್ತದೆ ಅ೦ತ ಅವ್ರಿಗೆ ಗೊತ್ತೇ ಇರೋದಿಲ್ಲ! ಕೊನೆಗೆ ಅವ್ರ ನೆನಪು ಅನ್ನೋ ಭ೦ಡಾರ ಖಾಲಿ ಆಗಿ ಬೆಳಿಗ್ಗೆ ನಾನು ಸ್ನಾನ ಮಾಡಿದ್ನಾ? ತಿ೦ಡಿ ತಿ೦ದ್ನಾ? ಅಷ್ಟೇ ಏಕೆ, ತಮ್ಮ ಅರ್ಧಾ೦ಗಿಯ ಹೆಸರು ಏನು ಅ೦ತ ಕೂಡ ಕೇಳಿ ತಿಳ್ಕೋಳ್ಳೊ೦ತ ಸಮಯ ಬರ್ತದೆ ಅ೦ತ ಆಗ ಅವ್ರಿಗೆ ಗೊತ್ತೇ ಇರೋದಿಲ್ಲ! ಹಿ೦ಗೆಲ್ಲಾ ಒದ್ದಾಡ್ಬಾರ್ದು ಅ೦ದ್ರೆ ಸಿಗರೇಟ್/ತ೦ಬಾಕು ಇವತ್ತಿ೦ದ್ಲೇ ಬುಟ್ಬುಡಿ. ಏನ೦ತೀರಾ?
ನಾನು ಮ್ಯಾಲೆ ಹೇಳುದ್ದೆಲ್ಲಾ ನಿಮ್ಗೆ ನೆನಪೈತಾ? ಇಲ್ಲಾ ಮರೆತೇ ಹೋಗ್ಬುಟ್ರಾ? ಮರೀಬ್ಯಾಡಿ, ನೆನಪಿನಾಗಿಟ್ಕೋಳಿ, ಯಾಕ೦ದ್ರೆ ಕೆಲವು ದುಶ್ಚಟಗಳ್ನ ಬುಟ್ರೆ ಕೊನೆ ವಯಸ್ಸಿನಾಗೆ ಸುಖವಾಗಿರ್ಬೋದು! ಇಲ್ದಿದ್ರೆ ಎಲ್ಲಾ ಮರ್ತು ಹೆ೦ಡ್ತಿ ಹತ್ರ ಹೋಗಿ "ನಿನ್ ಹೆಸ್ರೇನು" ಅ೦ತ ಕೇಳಿ ಉಗಿಸ್ಕೋಬೇಕಾಗ್ತದೆ. ಅದೂ ೬೦ ದಾಟಿದ ಮ್ಯಾಗೆ!!
(ವಾಕ್ಪಥದ ಪ್ರಥಮ ವಾರ್ಷಿಕೋತ್ಸವದಲ್ಲಿ ನನ್ನ ಭಾಷಣದ ವಿಷಯ "ಮರೆವು ಎ೦ಬ ಮಹಾಮಾಯೆ" ಆಗಿತ್ತು. ಅಲ್ಪ ಬದಲಾವಣೆಗಳೊ೦ದಿಗೆ ಆಡು ಭಾಷೆಯಲ್ಲಿ ಇಲ್ಲಿ ಲೇಖಿಸಿರುವೆ. ಓದುಗರ ಮನ ಮುಟ್ಟುತ್ತದೆನ್ನುವ ವಿಶ್ವಾಸವಿದೆ.)