Wednesday, June 17, 2009

ಪ್ರೀತಿಯ ಒರತೆ

ಚಿಮ್ಮಿತ್ತು ಪ್ರೀತಿಯ ಒರತೆ ಆ ಒಂದು ದಿನ
ನನ್ನ ಹಿಂದೆ ಅವಳು ಬಂದಾಗ, ಮನೆಯವರನ್ನೆಲ್ಲಾ ಧಿಕ್ಕರಿಸಿ,
ನೆರೆದಿತ್ತು ಭಾವಗಳ ಸಂತೆ , ಮರೆತು ಎಲ್ಲಾ ಚಿಂತೆ ಅವಳು ನನ್ನ ಸೇರಿದಾಗ,

ಆದಿ ಅಂತ್ಯವನರಿಯದೆ ಮಿಡಿದಿತ್ತು ವೀಣೆ ಅಂದು,,

ಆದರೆ ಇಂದು,,

ಸರಿದಿದೆ ತೆರೆ, ತೋರಿದೆ ಜೀವನ
ತನ್ನ ನಿಜರೂಪವ,

ಕುರುಡು ಕಾಂಚಾಣ ಕುಣಿಯುತ್ತಲಿದೆ,,
ಕಾಲಿಗೆ ಬಿದ್ದವರ ತುಳಿಯುತ್ತಲಿದೆ,,
ನಿಸರ್ಗ ಮುನಿದಿದೆ
ಭಾವಗಳು ಅಡಗಿ ಹೋಗಿವೆ,, ಎದೆಯ ಗುಹೆಯಲ್ಲಿ,

ಆದರೂ ಒಂದು ಮಿಣತೆ ದೂರದಲ್ಲಿ ಮಿಂಚುತ್ತಿದೆ,,
ಸಾರುತ್ತಿದೆ ಜಗಕೆ,

ಇಲ್ಲಿ ಮಾನವೀಯತೆ ಬದುಕಿದೆ,
ಪ್ರೀತಿಗಿಲ್ಲಿ ಇನ್ನೂ ಬೆಲೆಯಿದೆ,
ಕೊರಗಬೇಡ ಮನವೆ.

ಹೊಳೆನರಸೀಪುರ ಮಂಜುನಾಥ

ಪ್ರೀತಿಯ ಒರತೆ

ಚಿಮ್ಮಿತ್ತು ಪ್ರೀತಿಯ ಒರತೆ ಆ ಒಂದು ದಿನ
ನನ್ನ ಹಿಂದೆ ಅವಳು ಬಂದಾಗ, ಮನೆಯವರನ್ನೆಲ್ಲಾ ಧಿಕ್ಕರಿಸಿ,
ನೆರೆದಿತ್ತು ಭಾವಗಳ ಸಂತೆ , ಮರೆತು ಎಲ್ಲಾ ಚಿಂತೆ ಅವಳು ನನ್ನ ಸೇರಿದಾಗ,

ಆದಿ ಅಂತ್ಯವನರಿಯದೆ ಮಿಡಿದಿತ್ತು ವೀಣೆ ಅಂದು,,

ಆದರೆ ಇಂದು,,

ಸರಿದಿದೆ ತೆರೆ, ತೋರಿದೆ ಜೀವನ
ತನ್ನ ನಿಜರೂಪವ,

ಕುರುಡು ಕಾಂಚಾಣ ಕುಣಿಯುತ್ತಲಿದೆ,,
ಕಾಲಿಗೆ ಬಿದ್ದವರ ತುಳಿಯುತ್ತಲಿದೆ,,
ನಿಸರ್ಗ ಮುನಿದಿದೆ
ಭಾವಗಳು ಅಡಗಿ ಹೋಗಿವೆ,, ಎದೆಯ ಗುಹೆಯಲ್ಲಿ,

ಆದರೂ ಒಂದು ಮಿಣತೆ ದೂರದಲ್ಲಿ ಮಿಂಚುತ್ತಿದೆ,,
ಸಾರುತ್ತಿದೆ ಜಗಕೆ,

ಇಲ್ಲಿ ಮಾನವೀಯತೆ ಬದುಕಿದೆ,
ಪ್ರೀತಿಗಿಲ್ಲಿ ಇನ್ನೂ ಬೆಲೆಯಿದೆ,
ಕೊರಗಬೇಡ ಮನವೆ.

ಹೊಳೆನರಸೀಪುರ ಮಂಜುನಾಥ

ನಗಬೇಕೋ ಅಳಬೇಕೋ .........

ಇದು ಇಂದು ಬೆಳಿಗ್ಗೆ ಎಂಟರ ಆಸು ಪಾಸಿನಲ್ಲಿ ನಡೆದ ಸ್ವಾರಸ್ಯಕರ ಘಟನೆ..

ಇಂದು, ಭಾನುವಾರ, ಭಾರತೀಯರೆಲ್ಲ ನೆಮ್ಮದಿಯ ನಿದ್ದೆ ಮಾಡಿ ತಡವಾಗಿ ಏಳುವ ದಿನ, ಆದರೆ ನಮಗೆ ದುಬೈನಲ್ಲಿ ವಾರದ ಮೊದಲನೆಯ ಕೆಲಸದ ದಿನ. ಬೆಳಿಗ್ಗೆ ಬೇಗನೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ಧರ್ಮಸ್ಥಳದ ಮಂಜುನಾಥನಿಗೂ ತಾಯಿ ಕಬ್ಬಾಳಮ್ಮನಿಗೂ ನಮಸ್ಕರಿಸಿ, ಇಂದು ನನಗೆ ಅಜ್ಮಾನಿನ ಕಾಂಟ್ರಾಕ್ಟ್ ಸಿಗುವಂತೆ ಮಾಡಿ ಎಂದು ಬೇಡಿಕೊಂಡು ನನ್ನ ಕಾರು ನಿಲ್ಲಿಸಿದ್ದ ಜಾಗಕ್ಕೆ ಬರುತ್ತಿದ್ದೆ. ದುಬೈನಲ್ಲಿ ಕಾರು ಕೊಳ್ಳುವುದು ಸುಲಭ, ಆದರೆ ಅದಕ್ಕೆ ಪಾರ್ಕಿಂಗ್ ಜಾಗ ಹುಡುಕುವುದು ತುಂಬಾ ಕಷ್ಟದ ಕೆಲಸ.

ನಾನಿರುವ ಫ್ಲಾಟಿನ ಹತ್ತಿರ, ಕರಾಮಾದಲ್ಲಿ ಒಂದು ಸುಂದರ ಪಾರ್ಕ್ ಇದೆ. ಅಲ್ಲಿ ಸಾಕಷ್ಟು ಪಾರ್ಕಿಂಗ್ ಜಾಗ ಲಭ್ಯ. ಯಾವಾಗಲೂ ನನ್ನ ಕಾರನ್ನು ಅಲ್ಲೇ ನಿಲ್ಲಿಸುತ್ತೇನೆ. ರಸ್ತೆ ದಾಟಲು ಒಂದು ಸುಂದರ ಫುಟ್ ಬ್ರಿಡ್ಜ್ ನಿರ್ಮಿಸಿದ್ದಾರೆ. ಅದನ್ನು ಬೆಳಿಗ್ಗೆ ಸಂಜೆ ಹತ್ತಿ ಇಳಿಯುವುದೇ ಒಂದು ಸುಂದರ ಅನುಭವ. ಎಂದಿನಂತೆ ಇಂದೂ ಸಹಾ ನಾನು ನನಗೆ ಸಿಗಲಿರುವ ಕಾಂಟ್ರಾಕ್ಟಿನ ಬಗ್ಗೆ ಯೋಚಿಸುತ್ತಾ, ಮನಸ್ಸಿನಲ್ಲಿ ಅದೆಂಥೆಂಥದೋ ಮಂಡಕ್ಕಿಗಳನ್ನೆಲ್ಲ ತಿನ್ನುತ್ತ ಫುಟ್ ಬ್ರಿಡ್ಜಿನ ಒಂದು ಪಕ್ಕದಲ್ಲಿ ನಡೆದು ಬರುತ್ತಿರುವಾಗ ಧಡಾರೆಂದು ಹಿಂಬದಿಯಲ್ಲಿ ಸದ್ದಾಯಿತು.

ಏನಾಯಿತೆಂದು ನೋಡುವ ಮೊದಲೇ ನನ್ನ ದೇಹ ಗಾಳಿಯಲ್ಲಿ ಹಾರಿತ್ತು, ದಪ್ಪಗಿನ ಅಕ್ಕಿ ಮೂಟೆಯೊಂದು ಜೋರಾಗಿ ಬಂದು ನನ್ನನ್ನು ಹಿಂದಿನಿಂದ ಝಾಡಿಸಿದಂತೆ ಅನುಭವವಾಯಿತು. ಕೈಯಲ್ಲಿ ಹಿಡಿದಿದ್ದ ಬ್ಯಾಗು ಅದೆಲ್ಲಿ ಹೋಯಿತೋ, ನನ್ನ ಕನ್ನಡಕ ಎಲ್ಲಿ ಬಿತ್ತೋ, ಜೇಬಲ್ಲಿದ್ದ ಮೊಬೈಲ್ ಫೋನ್ ನನಗಿಂತಾ ವೇಗವಾಗಿ ಗಾಳಿಯಲ್ಲಿ ಹಾರಿ ಹೋಗಿ ಅದೆಲ್ಲಿ ಬಿತ್ತೋ, ದೇವರೇ ಬಲ್ಲ. ಒಂದು, ಎರಡು, ಮೂರು, ನಾಲ್ಕು ಸುತ್ತು ಆ ಅಕ್ಕಿ ಮೂಟೆಯ ಜೊತೆ ಉರುಳಿ ಬಿದ್ದದ್ದೇ ಗೊತ್ತು. ಅಯ್ಯೋ ದೇವರೇ, ಇದೇನಾಯ್ತು ಎಂದು ಸಾವರಿಸಿಕೊಂಡು ಕಣ್ಣು ಬಿಟ್ಟಾಗ ನನ್ನೆದುರಿನಲ್ಲಿ ದಪ್ಪ ಅಕ್ಕಿ ಮೂಟೆಯಂಥ ಒಬ್ಬ ಸಣ್ಣ ಪ್ರಾಯದ ಹುಡುಗ ಗಡಗಡನೆ ನಡುಗುತ್ತ ನಿಂತಿದ್ದ. ಅದಾಗ ತಾನೆ ಚಿಗುರು ಮೀಸೆ ಬರುತ್ತಿದ್ದ ಅವನ ಮುಖದಲ್ಲಿ ಅತೀವ ಭಯ, ತಪ್ಪಿತಸ್ಥನೆಂಬ ಭಾವನೆ ಎದ್ದು ಕಾಣುತ್ತಿತು. ( ಇಲ್ಲಿ ಒಂದು ಮಾತು, ದುಬೈನಲ್ಲಿ ಎಲ್ಲ ಹುಡುಗ ಹುಡುಗಿಯರು ಎಳೆ ಪ್ರಾಯದಲ್ಲಿಯೆ ಸಾಮಾನ್ಯವಾಗಿ ನೂರು ಕೆ.ಜಿ ಯ ಹತ್ತಿರ ಮುಟ್ಟಿರುತ್ತಾರೆ. ಏಕೆಂದರೆ, ಅವರು ತಿನ್ನುವ ಅಸಾಮಾನ್ಯವಾದ ಕೆ ಎಫ್ ಸಿ ಯ ಕಬಾಬುಗಳು, ಮ್ಯಕ್ ಡೊನಾಲ್ದ್ಸ್ ನ ಬರ್ಗರ್ ಗಳು ಅವರಿಗೆ ಅಪಾರವಾದ ತೂಕವನ್ನು ತಂದು ಕೊಟ್ಟು ಅವರನ್ನು ಇನ್ನಿಲ್ಲದಂತೆ ದಪ್ಪಗೆ ಮಾಡಿ ಬಿಡುತ್ತವೆ. ರಾಗಿ ಮುದ್ದೆ - ಸೊಪ್ಪಿನ ಸಾರು ತಿಂದು ಬಂದ ನನ್ನಂಥವರ ಮೇಲೆ ಅವರು ಬಿದ್ದರೆ, ಪರಿಣಾಮ ನೀವೇ ಊಹಿಸಿ.)

ಫುಟ್ ಬ್ರಿಡ್ಜಿನ ಮೇಲೆ ಅಂಗಾತ ಬಿದ್ದಿದ್ದ ನಾನು ಏಳುವ ಮೊದಲೇ ಒಬ್ಬ ಮಧ್ಯ ವಯಸ್ಕ ಮಹಿಳೆ ನನ್ನ ಕನ್ನಡಕ, ಬ್ಯಾಗು, ಮೊಬೈಲ್ಗಳನ್ನು ಹುಡುಕಿ ತಂದು ನಾನು ಮೇಲೇಳಲು ಸಹಾಯ ಹಸ್ತ ನೀಡಿದರು. ನಾನು ಕೋಪದಿಂದ ಆ ಧಡಿಯ ಹುಡುಗನನ್ನು ದುರುಗುಟ್ಟಿ ನೋಡುವುದನ್ನು ಕಂಡು ಆಕೆ ಸ್ಸಾರಿ, ಪ್ಲೀಸ್, ಯೆಸ್ತೆರ್ಡೇ ಓನ್ಲಿ ಹಿ ಬಾಟ್ ದ ಸೈಕಲ್, ಹಿ ಡೋಂಟ್ ನೋ ಹೌ ಟು ಹ್ಯಾಂಡಲ್, ಸ್ಸಾರಿ ಪ್ಲೀಸ್ ಎಂದು ಒದರತೊಡಗಿದರು. ನನಗೋ ಎರಡೂ ಕೈ ಕಾಲುಗಳಲ್ಲಿ ಭಯಂಕರ ನೋವಾಗತೊಡಗಿತು. ಏನು ಹೇಳಬೇಕೆಂದು ತೋಚದೆ ಸುಮ್ಮನೆ ನಿಂತೆ. ಈ ಮಹಾತಾಯಿ ತನ್ನ ವಕ್ರ ತುಂಡ ಮಹಾಕಾಯನಾದ ಮಗನ ದೇಹವನ್ನು ಕರಗಿಸಲು ನಿನ್ನೆಯಷ್ಟೆ ಅವನಿಗೆ ಹೊಸ ಸೈಕಲ್ ಕೊಡಿಸಿದ್ದರಂತೆ. ಅದರ ಪ್ರಯೋಗ ಇಂದು ನನ್ನ ಮೇಲೇ ಆಗಬೇಕೇ??

ಆಕೆ ಆ ಹುಡುಗನನ್ನು ತೆಲುಗಿನಲ್ಲಿ ಬೈದು ನನ್ನ ಕ್ಷಮೆ ಕೇಳುವಂತೆ ಹೇಳುತ್ತಿದ್ದರು. ಆಗ ಗೊತ್ತಾಯಿತು, ಅವರೂ ನಮ್ಮವರೇ, ನಮ್ಮ ಪಕ್ಕದ "ನೈಬರ್ರೇ" ಅಂತ. ಸರಿಯಮ್ಮ, ನಿನ್ನ ಅಕ್ಕಿ ಮೂಟೆಯಂಥ ಮಗನನ್ನು ಮೊದಲು ಸಣ್ಣಗೆ ಮಾಡು, ಇಲ್ಲದಿದ್ದರೆ ನನ್ನಂಥ ಸಣ್ಣ ಪ್ರಾಣಿಗಳು ಅನ್ಯಾಯವಾಗಿ ಕೈ ಕಾಲು ಮುರಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿ ನನ್ನ ಕಾರಿನತ್ತ ನಡೆದೆ.

ಸಂಜೆ ಮನೆಗೆ ಬಂದು ಕೈ ಕಾಲುಗಳಿಗೆಲ್ಲಾ ಚೆನ್ನಾಗಿ "ಮೂವ್" ತಿಕ್ಕಿ ಈ ಪ್ರಸಂಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಹೇಳಿ, ಸಂಪದಿಗರೇ, ಇಂಥ ಅಕ್ಕಿ ಮೂಟೆಗಳು ಅನಿರೀಕ್ಷಿತವಾಗಿ ಮೈ ಮೇಲೆ ಬಿದ್ದಾಗ, ಅಳಬೇಕೋ, ನಗಬೇಕೋ ??

ನೆನಪಿನಾಳದಿಂದ....2,.....ಅಪ್ಪನ ಸಿಂಗಲ್ ನಂಬರ್ ಲಾಟರಿ ಖಯಾಲಿಯ ಕಥೆ.

1985 ರಿಂದ 2005 ರ ಸಮಯದಲ್ಲಿ ನಮ್ಮ ಘನ ಕರ್ನಾಟಕ ರಾಜ್ಯದಲ್ಲಿ ಎಲ್ಲಿ ನೋಡಿದರೂ ಸಿಂಗಲ್ ನಂಬರ್ ಲಾಟರಿ ಟಿಕೆಟ್ ಗಳ ಭರ್ಜರಿ ಮಾರಾಟ, ಎಲ್ಲೆಲ್ಲಿ ನೋಡಿದರಲ್ಲಿ ಜಾಹೀರಾತುಗಳು, ಅದೇನು ಮೋಡಿ,, ಅದೇನು ಕಥೆ. ಈಗ ನೆನಪಿಸಿಕೊಂಡರೆ ಮೈ ಜುಮ್ಮೆನ್ನಿಸುತ್ತದೆ, ಅದೆಷ್ಟು ಕುಟುಂಬಗಳು ಆ ದಿನಗಳಲ್ಲಿ ತಮ್ಮ ನೆಮ್ಮದಿಯನ್ನು ಕಳೆದುಕೊಂಡವೋ ? ಅದೆಷ್ಟು ಬಾಳಿ ಬದುಕಬೇಕಾದ ಜೀವಗಳು ಕಣ್ಮುಚ್ಚಿಕೊಂಡವೋ, ದೇವರಿಗೇ ಗೊತ್ತು. ಅಂಥ ಸಮಯದಲ್ಲಿ ನನ್ನ ಅಪ್ಪನದೂ ಒಂದು ದೊಡ್ಡ ಕಥೆ. ಪ್ರತಿ ದಿನ ಸಿಂಗಲ್ ನಂಬರ್ ಲಾಟರಿ ಆಡಿದ್ದೂ ಆಡಿದ್ದೇ, ಕನುಸು ಕಂಡಿದ್ದೂ ಕಂಡಿದ್ದೇ!! ಸರ್ವಗ್ನ್ಯನ ಒಂದು ವಚನವನ್ನು ಆ ಸಮಯದಲ್ಲಿ ಹೀಗೆ ಬದಲಿಸಲಾಗಿತ್ತು, " ಸಿಂಗಲ್ ನಂಬರ್ ಲಾಟರಿ ಆಡಿ, ಇದ್ದುದೆಲ್ಲವ ನೀಗಿ, ಸಾಲಗಾರನಾಗಿ ಬರುವವನ, ಸದ್ದಡಗಿ ಸಂತಾನವೆದ್ದು ಹೋಗುವುದು, ಸರ್ವಗ್ನ್ಯ"

ಸಿಕ್ಕಿಂ, ಹರ್ಯಾಣ, ಭೂತಾನ್ ಮೊದಲಾದ ಹೊರ ರಾಜ್ಯಗಳ ಲಾಟರಿ ಟಿಕೆಟ್ ಗಳು ಅತಿ ಹೆಚ್ಚು ಬಹುಮಾನದ ಆಸೆ ಹುಟ್ಟಿಸಿ ಬಹುತೇಕ ಜನರ ಇಡೀ ದಿನದ ವರಮಾನವನ್ನೇ ಕಬಳಿಸಿ ಹಾಕುತ್ತಿದ್ದವು. ಆ ಮೋಹದ ಜಾಲಕ್ಕೆ ನನ್ನ ಅಪ್ಪನೂ ಸಿಲುಕಿದರು. ಅವರು ನಡೆಸುತ್ತಿದ್ದ ಸಣ್ಣ ಹೋಟೆಲಿನಲ್ಲಿ ಬರುತ್ತಿದ್ದ ಆದಾಯವನ್ನೆಲ್ಲ ಜೈ ದುರ್ಗಿ, ಮಹಾಲಕ್ಷ್ಮಿ, ಲಾಭಲಕ್ಷ್ಮಿ ಮುಂತಾದ ಲಕ್ಷ್ಮಿಯರು ಸ್ವಾಹಾ ಮಾಡಿ ಸಂಜೆಯಾದರೆ ಸಾಕು, ಅಪ್ಪನ ಪಿತ್ತ ನೆತ್ತಿಗೇರಿ ಲಾಟರಿಯಲ್ಲಿ ಸೋತ ಸೋಲಿನ ಸೇಡನ್ನು ಎಳೆ ವಯಸ್ಸಿನ ನನ್ನ ಮೇಲೋ, ಇಲ್ಲ, ಮೈಸೂರಿನ ಸಾಧು ಪ್ರಾಣಿಯಾದ ಅಮ್ಮನ ಮೇಲೋ ತೀರಿಸಿಕೊಳ್ಳತೊಡಗಿದರು. ಇದು ಹೀಗೇ ಮುಂದುವರೆದು ಅಪ್ಪ ಸಿಕ್ಕ ಸಿಕ್ಕವರಲ್ಲಿ ಸಾಲ ಮಾಡತೊಡಗಿದರು. ಅವರಿಗೆ ಲಾಟರಿಯಲ್ಲಿ "ಜಯಲಕ್ಷ್ಮಿ" ಒಲಿಯಲೇ ಇಲ್ಲ, ಅವರು ಮಾಡಿದ ಸಾಲಕ್ಕೆ ದಾದಿಯ ಕೆಲಸ ಮಾಡುತ್ತಿದ್ದ ಅಮ್ಮ, ತನ್ನ ಸಂಬಳದ ಹಣದಿಂದ ಬಡ್ಡಿ ಕಟ್ಟುವ ಪರಿಸ್ಥಿತಿ ಬಂದೊದಗಿತು. ಮನೆ ಎಂಬ ಮನೆಯೇ ನರಕವಾಗಿ ಹೋಯಿತು.

ಅಪ್ಪನ ಲಕ್ಕಿ ನಂಬರ್ ಗಳಾದ 05, 09 ತಿಪಟೂರಿನ ಯಾವುದೇ ಅಂಗಡಿಯಲ್ಲಿದ್ದರೂ ಬಿಡುತ್ತಿರಲಿಲ್ಲ. ಯಾರಾದರೂ ಒಬ್ಬ ಶಿಷ್ಯನನ್ನು ಕಳುಹಿಸಿ ಇದ್ದಬದ್ದ ಟಿಕೆಟ್ ಗಳನ್ನೆಲ್ಲ ಖರೀದಿಸುತ್ತಿದ್ದರು. ಸಂಜೆ ಫಲಿತಾಂಶ ಬಂದಾಗ, ಅವರ ನಂಬರ್ ಗೆದ್ದಿದ್ದರೆ, ಆಹಾ, ಪ್ರಪಂಚವನ್ನೇ ಗೆದ್ದಂತೆ ಸಂತೋಷ ಪಡುತ್ತಿದ್ದರು. ಆಕಸ್ಮಾತ್ ಸೋತಿದ್ದರೆ, ಗೋವಿಂದಾ,,,,,,,, ಗೋವಿಂದ,, ಅವರ ಕಣ್ಮುಂದೆ ಬರಲು ಎಲ್ಲರೂ ಹೆದರುತ್ತಿದ್ದರು. ಅದು ಯಾವ ಮಟ್ಟಕ್ಕೆ ಹೋಯಿತೆಂದರೆ, ಸಂಜೆ 5 ಘಂಟೆಗೆ ಆ ದರಿದ್ರ ಲಾಟರಿ ಫಲಿತಾಂಶ ಬರುವ ಸಮಯಕ್ಕೆ ಸರಿಯಾಗಿ, ಅಪ್ಪಿತಪ್ಪಿಯೂ ಯಾವ ಗಿರಾಕಿಯೂ ಅಪ್ಪನ ಹೋಟೆಲ್ ಕಡೆ ತಲೆ ಹಾಕುತ್ತಿರಲಿಲ್ಲ. ಅರ್ಧ ಟೀ ಕುಡಿಯುವ ಗಿರಾಕಿ ಹೋಟೆಲಿಗೆ ಬಂದರೆ, ಮುಗಿಯಿತು ಅವನ ಕಥೆ, ಅಪ್ಪನ ಲಾಟರಿ ಪ್ರವರ, ಅವರ " ಭರ್ಜರಿ ಕ್ಯಾಲ್ಕುಲೇಷನ್ಸ್" ಗಳ ಕಥೆಯನ್ನೆಲ್ಲಾ ಕೇಳುವ ಘೋರ ಶಿಕ್ಷೆಗೆ ಒಳಗಾಗಬೇಕಿತ್ತು.

ಈ ಕಥೆ ಎಲ್ಲಾ ಕಡೆ ಹರಡಿ ಕೊನೆಗೆ ಹೋಟೆಲಿನ ವ್ಯಾಪಾರವೇ ಬಿದ್ದು ಹೋಯಿತು. ಈಗ ಅಪ್ಪ ಎಲ್ಲರ ಕಣ್ಣಿಗೆ ಒಬ್ಬ "ಭಯೋತ್ಪಾದಕ" ನಂತೆ ಕಾಣುತ್ತಿದ್ದರು. ಅವರನ್ನು ಕಂಡರೆ ಸಾಕು, ಅವರ ಆಪ್ತ ಮಿತ್ರರೂ ಸಹ ಕದ್ದು ಬೇರೆ ದಾರಿಯಿಂದ ಹೋಗಲು ಶುರುವಿಟ್ಟರು. ಈಗ ಅಪ್ಪ ಅಕ್ಷರಶ: ಏಕಾಂಗಿಯಾಗಿದ್ದರು. ಅವರಿಗೆ ಸಿಕ್ಕಿದ್ದು ಈಗ ಅವರ ಸಾಲಕ್ಕೆ ಬಡ್ಡಿ ಕಟ್ಟಲು ಅಮ್ಮ, ಅವರ ಸಿಟ್ಟು, ಸೆಡವುಗಳಿಗೆಲ್ಲ "ಒದೆ" ತಿಂದು ಅವರನ್ನು ಸಮಾಧಾನಿಸಲು ಬಡಪಾಯಿ ನಾನು! ಜೀವನ ನಿಜವಾಗಲೂ ನನಗೆ, ನನ್ನ ಅಮ್ಮನಿಗೆ ನುಂಗಲಾರದ ಬಿಸಿ ತುಪ್ಪವಾಗಿ ಹೋಗಿತ್ತು. ಆಗಲೇ ಅಪ್ಪ ನನ್ನನ್ನು ಒಂದು ದಿನ ವಿನಾ ಕಾರಣ ಎಲ್ಲರೆದುರು ತದುಕಿ ಮನೆ ಬಿಟ್ಟು ಓಡಿ ಹೋಗುವಂತೆ ಮಾಡಿದ್ದು, ಹೇಗೋ ಹತ್ತನೆ ತರಗತಿಯ ಫಲಿತಾಂಶ ಬಂದ ನಂತರ ಹಿಂತಿರುಗಿ ಬಂದ ನಾನು ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೊಮಾ ಮಾಡುವೆನೆಂದಾಗ, ಕೇವಲ ಮೂರು ಸಾವಿರ ರೂಪಾಯಿ ಕಟ್ಟಲು ನಿರಾಕರಿಸಿ, ನನ್ನ ಭವಿಷ್ಯಕ್ಕೆ ಕಲ್ಲು ಹಾಕಿದ್ದು. ಅಮ್ಮ ಮೊದಲೇ ಸಾಧು ಪ್ರಾಣಿ, ಅವರಲ್ಲಿ ಗಂಡನಿಗೆ ಎದುರಾಡುವುದಿರಲಿ, ಗಟ್ಟಿಯಾಗಿ ಮಾತಾಡಲೂ ಶಕ್ತಿಯಿರಲಿಲ್ಲ. ಅಮ್ಮನೂ ಸಹಾ ನಿಸ್ಸಹಾಯಕತೆಯಿಂದ ಕೈ ಚೆಲ್ಲಿದರು.

ಆಗ ಮತ್ತೆ ನಾನು ಓಡಿದೆ ನೋಡಿ, ಮನೆ ಬಿಟ್ಟು, ತಿಪಟೂರಿನಿಂದ, ಸೀದಾ ಹೋಗಿದ್ದು, ಹೊಳೆ ನರಸೀಪುರಕ್ಕೆ, ಚಿಕ್ಕಪ್ಪನ ಮನೆಗೆ. ಆಗ ನನಗೆ ಆಶ್ರಯ ನೀಡಿ ಕಾಲೇಜಿಗೆ ಸೇರಿಸಿ, ಓದಿ ಪದವೀಧರನಾಗಲು ಪ್ರೇರೇಪಿಸಿದ್ದು ಅದೇ ನನ್ನ ಚಿಕ್ಕಪ್ಪ. ಆಕಸ್ಮಾತ್, ಅಂದು ಅವರು ನನ್ನ ಕೈ ಹಿಡಿಯದೆ ಇದ್ದಿದ್ದರೆ, ನಾನು ಇಂದು ಯಾವುದೋ ಒಂದು ಹೋಟೆಲಿನಲ್ಲಿ ಮಾಣಿಯಾಗಿಯೇ ನನ್ನ ಜೀವನ ಕಳೆಯಬೇಕಾಗಿರುತ್ತಿತ್ತು.

ಹೇಮಾವತಿ ನದಿಯ ದಡ ನನ್ನ ಅಚ್ಚು ಮೆಚ್ಚಿನ ತಾಣವಾಯಿತು, ಸಂಜೆಯ ಹೆಚ್ಚು ಹೊತ್ತನ್ನು ನಾನು ಅಲ್ಲಿಯೇ ಕಳೆಯುತ್ತಿದ್ದೆ. ನನ್ನ ಮುಂದಿನ ಜೀವನ ಹೇಗಿರಬೇಕು, ಇಂಥ ಪರಿಸ್ಥಿತಿಯಲ್ಲಿ ಹೇಗೆ ನನ್ನ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತುಂಬ ದೀರ್ಘವಾಗಿ ಯೋಚಿಸುತ್ತಿದ್ದ್ದೆ. ಹಲವಾರು ತಾಕಲಾಟಗಳ ನಡುವೆಯೂ ತಾಯಿ ಹೇಮಾವತಿ, ತನ್ನ ಮಡಿಲಲ್ಲಿ ನೊಂದಿದ್ದ ನನ್ನ ಮನಕ್ಕೆ ತಂಪನ್ನೆರೆದು, ಒಂದು ಸುಂದರ ಭವಿಷ್ಯ ರೂಪಿಸುವ ಛಲಕ್ಕೆ ನನ್ನನ್ನು ಸಿದ್ಧಗೊಳಿಸಿದಳು. ತಾಯಿ ಹೇಮಾವತಿಗೆ ನನ್ನ ನಮನ. ಆ ದಿನದ ಧ್ರುಡ ನಿರ್ಧಾರದ ಫಲವೇ ಇಂದು ನಾನು ದುಬೈನಲ್ಲಿ ಕುಳಿತು ಕೆಲಸ ಮಾಡುವುದಕ್ಕೆ ಕಾರಣವೆನ್ನಬಹುದು.

ಪ್ರೀತಿಯಿಂದ,,

' ನೆನಪಿನಾಳದಿಂದ..ಅಪ್ಪನಿಂದ ಒದೆ ತಿಂದು ಮನೆ ಬಿಟ್ಟು ಓಡಿ ಹೋದ ಪ್ರಸಂಗ.

ಇದು 1984ರಲ್ಲಿ ನಾವು ತಿಪಟೂರಿನಲ್ಲಿದ್ದಾಗ ನಡೆದ ಪ್ರಸಂಗ, ಸಂಪದ ಓದುಗರೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ. ಅಮ್ಮ ಮೈಸೂರಿನವರು, ತುಂಬಾ ಸಾಧು ಸ್ವಭಾವ, ಅಪ್ಪನನ್ನು ಕಂಡರೆ ತುಂಬಾ ಪ್ರೀತಿ ಹಾಗೂ ಗೌರವ, ಮೈಸೂರಿನ ವಿಶೇಷಣವಾದ "ಏನೂಂದ್ರೆ" ಅನ್ನದೆ ಅಪ್ಪನೊಡನೆ ಮಾತೇ ಇಲ್ಲ. ಆಗ ಸರ್ಕಾರಿ ಆಸ್ಪತ್ರೆಯ ದಾದಿಯ ಕೆಲಸದಲ್ಲಿದ್ದರು. ಅಪ್ಪ ಸ್ವಭಾವತಹ ಮುಂಗೋಪಿ ಹಾಗೂ ಸದಾ ಸಿಡುಕು ಬುದ್ಧಿ, ಒಂದು ಸಣ್ಣ ಹೋಟೆಲ್ ನಡೆಸುತ್ತಿದ್ದರು. ನಾನಾಗ ತಿಪಟೂರಿನ ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಹತ್ತನೆ ತರಗತಿಯಲ್ಲಿ ಓದುತ್ತಿದ್ದೆ. ಬೆಳಿಗ್ಗೆ ಬೇಗನೆ ಎದ್ದು ಅಪ್ಪನೊಂದಿಗೆ ಹೋಟೆಲಿಗೆ ಬಂದು ಅವರ ಕೆಲಸದಲ್ಲಿ ಸಹಾಯ ಮಾಡಿ ನಂತರ ತಿಂಡಿ ತಿಂದು ಸ್ಕೂಲಿಗೆ ಹೋಗಬೇಕಿತ್ತು. ಸಂಜೆ ಮತ್ತೆ ಬಂದು ಅವರ ಸಣ್ಣ ಪುಟ್ಟ ಕೆಲಸಗಳನ್ನು ಮುಗಿಸಿ ಕೊಟ್ಟು ಸಂಜೆ "ಸ್ಪೆಷಲ್ ಕ್ಲಾಸಿಗೆ" ಹೋಗಬೇಕಿತ್ತು. ಹೀಗೆ ನನ್ನ ವಿದ್ಯಾಭ್ಯಾಸ ಸಾಗಿತ್ತು. ಅಪ್ಪನ ಹೋಟೆಲಿನಲ್ಲಿ ಕೆಲವು ಬಡ ಮೇಷ್ಟ್ರುಗಳು ಲೆಕ್ಕ ಬರೆಸಿ ತಿಂಗಳೆಲ್ಲಾ ಊಟ - ತಿಂಡಿ ಮಾಡಿ ಸಂಬಳ ಬಂದಾಗ ಲೆಕ್ಕ ಚುಕ್ತಾ ಮಾಡುತ್ತಿದ್ದರು.

ಅಂಥ ಮೇಷ್ಟ್ರುಗಳಲ್ಲಿ ಒಬ್ಬರು, ಗುಂಡಣ್ಣ ಮೇಷ್ಟ್ರು, ನಾನು ಹತ್ತನೆ ತರಗತಿಯ ಪರೀಕ್ಷೆ ಮುಗಿಸಿ ಬಂದು ಅಪ್ಪನೊಂದಿಗೆ ಮಾತಾಡುವಾಗ ಬಂದವರು ಹೇಳಿದರು, "ನಿನ್ನ ದಾಖಲಾತಿ ಸಂಖ್ಯೆ ಕೊಡು, ನಾನು ಮೌಲ್ಯಮಾಪನಕ್ಕೆ ಹೋಗುತ್ತಿದ್ದೇನೆ, ನಿನಗೆ ಹೆಚ್ಚು ಅಂಕ ಹಾಕಿಸುತ್ತೇನೆ " ಅದಕ್ಕೆ ನಾನು ಹೇಳಿದೆ, " ನಾನು ಚೆನ್ನಾಗಿ ಓದಿ ಪರೀಕ್ಷೆ ಬರೆದಿದ್ದೇನೆ, ಆ ರೀತಿ ಪುಕ್ಕಟೆ ಹೆಚ್ಚು ಅಂಕಗಳು ನನಗೆ ಬೇಕಾಗಿಲ್ಲ". ಆಗ ಅಪ್ಪ ನನಗೆ ಸುಮ್ಮನೆ ಹೆಚ್ಚು ಮಾತಾಡದೆ ನನ್ನ ದಾಖಲಾತಿ ಸಂಖ್ಯೆಯನ್ನು ಕೊಡುವಂತೆ ಹೇಳಿದರು. ಅದಕ್ಕೆ ನಾನು ನಿರಾಕರಿಸಿದೆ. ಹಿಂದೆಯೇ ಬಿದ್ದವು ನೋಡಿ ಅಪ್ಪನ ಕೈಯಿಂದ ದಬದಬ ಒದೆಗಳು, ನನಗೆ ಏನು ಮಾಡಬೇಕೆಂದು ದಿಕ್ಕೇ ತೋಚಲಿಲ್ಲ, ಚೆನ್ನಾಗಿ ಓದಿ ಪರೀಕ್ಷೆ ಬರೆದಿದ್ದ ಹಾಗೂ ಖಂಡಿತ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗುವ ಭರವಸೆಯಿಂದಿದ್ದ ನನಗೆ ಆ ಒದೆಗಳು ಅನಿರೀಕ್ಷಿತ,

ಆ ಸಮಯದಲ್ಲಿ ಹೋಟೆಲಿನಲ್ಲಿದ್ದ ನಾಲ್ಕಾರು ಜನರ ಮುಂದೆ ಬಿದ್ದ ಒದೆಗಳು ನನ್ನ ಪುಟ್ಟ ಮನಸ್ಸಿಗೆ ಆರದ ಗಾಯವನ್ನೇ ಮಾಡಿ ಬಿಟ್ಟಿದ್ದವು. ಆ ಒದೆಗಳು ನನ್ನ ಸ್ವಾಭಿಮಾನಕ್ಕೆ, ಏನನ್ನಾದರೂ ಸಾಧಿಸಬಲ್ಲೆನೆಂಬ ಭರವಸೆಯ ಬುಡಕ್ಕೆ ಬಿದ್ದ ಕೊಡಲಿ ಪೆಟ್ಟುಗಳಾಗಿದ್ದವು. ಆದರೆ ಅದು ಸಿಡುಕು ಬುದ್ಧಿಯ ಅಪ್ಪನಿಗೆ ಅರ್ಥವಾಗಿರಲಿಲ್ಲ. ಆ ಕ್ಷಣವೇ ನಿರ್ಧರಿಸಿದ್ದು ನಾನು, "ಇಂಥ ಅಪ್ಪನೊಂದಿಗೆ ಇರಬಾರದು", ಅಳುತ್ತಾ ಮನೆಗೆ ಬಂದು ಒಂದು ಬ್ಯಾಗಿಗೆ ಎರಡು ಬಟ್ಟೆಗಳನ್ನು ಹಾಕಿಕೊಂಡು ಬಟ್ಟೆ ಒಗೆಯುತ್ತಿದ್ದ ಅಮ್ಮನಿಗೆ ಹೊರಗಿನಿಂದಲೇ ಹೋಗಿ ಬರುತ್ತೇನೆಂದು ಹೇಳಿ ದೂರದ ದಾವಣಗೆರೆಗೆ ಹೋಗಿ ಬಿಟ್ಟೆ. ಗೊತ್ತಿದ್ದದ್ದು ಆಗ ಹೋಟೆಲ್ ಕೆಲಸ ಮಾತ್ರ, ಒಂದು ಹೋಟೆಲಿನಲ್ಲಿ ಮಾಣಿಯ ಕೆಲಸಕ್ಕೆ ಸೇರಿಕೊಂಡು ಅಲ್ಲೇ ಇದ್ದು ಬಿಟ್ಟೆ.

ಕೆಲ ದಿನಗಳು ಕಳೆದ ನಂತರ ಹತ್ತನೇ ತರಗತಿಯ ಫಲಿತಾಂಶ ಪ್ರಕಟವಾಯಿತು. ದಾವಣಗೆರೆಯಿಂದ ತಿಪಟೂರಿಗೆ ಬಂದು ಸೀದಾ ಶಾಲೆಯ ಬಳಿ ಹೋದೆ, ನನ್ನ ಫಲಿತಾಂಶ ನೋಡಿದೆ, ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದೆ, ಆನಂದದಿಂದ ಕಣ್ಗಳು ಒದ್ದೆಯಾದವು. ಅಂದು ಮುಖ್ಯೋಪ್ೞ್ಧ್ಯಾಯರಾಗಿದ್ದ ಜಿ. ಆರ್. ಮಹಲಿಂಗಯ್ಯನವರು ನನ್ನನ್ನು ಕರೆದು ಅಭಿನಂದಿಸಿ ಅಂಕಪಟ್ಟಿಯನ್ನು ಕೈಗಿತ್ತು ಶುಭ ಹಾರೈಸಿದ್ದರು. ಅಂಕಪಟ್ಟಿಯೊಡನೆ ಸೀದಾ ಮನೆಗೆ ಬಂದೆ, ಅಲ್ಲಿ ಇಲ್ಲಿ ನನಗಾಗಿ ಹುಡುಕಾಡಿ ಅಪ್ಪ ಅಮ್ಮ ಸೋತಿದ್ದರು, ಅಮ್ಮ ಕೊಂಚ ಸೊರಗಿದ್ದರು, ಅಮ್ಮನಿಗೆ ಹೇಳಿದೆ, "ನಾನು ಪ್ರಥಮ ದರ್ಜೆಯಲ್ಲಿ ಹತ್ತನೆ ತರಗತಿಯಲ್ಲಿ ಉತ್ತೀರ್ಣನಾಗಿದ್ದೇನೆ, ನೋಡಮ್ಮ, ಆ ದಿನಾ ವಿನಾ ಕಾರಣ ಅಪ್ಪ ನನ್ನನ್ನು ಎಲ್ಲರ ಮುಂದೆ ಹೊಡೆದರು". ಅಮ್ಮ ಕಣ್ಣಲ್ಲಿ ನೀರು ತುಂಬಿಕೊಂಡು ನನ್ನನ್ನು ಸಂತೈಸಿದರು, ನಿನ್ನಪ್ಪ ಮುಂಗೋಪಿ, ಅವರನ್ನು ಕ್ಶಮಿಸಿಬಿಡು ಎಂದರು. ಸಂಜೆ ಮನೆಗೆ ಬಂದ ಅಪ್ಪ ನನ್ನನ್ನು ಸಿಟ್ಟಿನಿಂದ ಕೆಕ್ಕರಿಸಿ ನೋಡಿ ಇಷ್ಟು ದಿನ ಎಲ್ಲಿ ಹಾಳಾಗಿ ಹೋಗಿದ್ದೆ ಎಂದು ಹೊಡೆಯಲು ಬಂದರು, ಅಮ್ಮನ ಸೀರೆಯ ಹಿಂದೆ ಅಡಗಿ ಅಂಕಪಟ್ಟಿ ತೋರಿಸಿದೆ, ಅಂಕಪಟ್ಟಿ ನೋಡಿದ ಅಪ್ಪನ ಕಣ್ಣಲ್ಲೂ ಕಂಬನಿ ತುಂಬಿ ಹರಿಯಿತು. ನಿನ್ನ ಭರವಸೆಯ ಮಾತನ್ನು ಅಂದು ಅರ್ಥ ಮಾಡಿಕೊಳ್ಳದೆ ಅನ್ಯಾಯವಾಗಿ ನಿನ್ನನ್ನು ಹೊಡೆದು ಮನೆ ಬಿಟ್ಟು ಹೋಗುವಂತೆ ಮಾಡಿ ಬಿಟ್ಟೆನಲ್ಲ, ನನ್ನನ್ನು ಕ್ಶಮಿಸು ಮಗನೇ ಎಂದಾಗ ನಾನು ಪಟ್ಟ ಕಷ್ಟಗಳೆಲ್ಲ ನನಗೆ ಮರೆತೇ ಹೋಯಿತು.

ಅಂದು ನನಗೆ ಅರ್ಥವಾಗದಿದ್ದ ಆ ಅಪ್ಪ ಇಂದಿಗೂ ನನಗೆ ಅರ್ಥವಾಗಿಯೇ ಇಲ್ಲ, ಅಮ್ಮ ಈಗಿಲ್ಲ, ಅಪ್ಪ ಕಲ್ಲು ಗುಂಡಿನಂತೆ ದೂರವೇ ಉಳಿದು ಹೋದರು. 25 ವರ್ಷಗಳ ನಂತರ ದುಬೈನಲ್ಲಿ ಕುಳಿತು ಆ ಪ್ರಸಂಗವನ್ನು ನೆನಪಿಸಿಕೊಂಡಾಗ ಕಣ್ಗಳು ಒದ್ದೆಯಾದವು.

ಪ್ರೀತಿಯಿಂದ..
ಹೊಳೆ ನರಸೀಪುರ ಮಂಜುನಾಥ