Thursday, June 16, 2016

ಏನೇ ತಿಮ್ಮಿ ಈಗ ನಿಂಗೇನ್ ಕಮ್ಮಿ


ಏನೇ ತಿಮ್ಮಿ ಈಗ ನಿಂಗೇನ್ ಕಮ್ಮಿ 
ಏನೇ ತಿಮ್ಮಿ ಈಗ ನಿಂಗೇನ್ ಕಮ್ಮಿ!

ಬಾ ಅಂದಾಗ ನೀ ಬರಾಕಿಲ್ಲಾ 
ಬ್ಯಾಡಂದಾಗ ನೀ ಬರ್ತೀಯಲ್ಲಾ!

ಯಾಕೀಂಗಾಡ್ತೀ ಯಾಕಿಂಗ್ಮಾಡ್ತಿ 
ನಿನ್ ಬುದ್ಧೀಗಿಂದು ಅದೇನಾಗೈತಿ!

ಉಣ್ಣೋ ಟೈಮ್ನಾಗ್ ಮುನುಸ್ಕೊಂತಿ 
ಮಲ್ಗೋ  ಟೈಮ್ನಾಗ್ ಮುದುರ್ಕೊಂತಿ! 

ಯಾಕೇ ತಿಮ್ಮಿ ಅದ್ಯಾಕ್   ನೀನಿಂಗಾಡ್ತಿ 
ನೊರೆ ಹಾಲ್ನಾಗ್ ಹುಳಿ ಯಾಕ್ ಹಿಂಡ್ತಿ!!!

ಏನೇ ತಿಮ್ಮಿ ಯಾಕೇ ತಿಮ್ಮಿ ನಿಂಗೇನ್ ಕಮ್ಮಿ 
ಏನೇ ತಿಮ್ಮಿ ಒಸಿ ನಕ್ರೆ ನಿಂಗೇನಾಯ್ತದಮ್ಮಿ!! 

(ಚಿತ್ರ: ಅಂತರ್ಜಾಲದಿಂದ) 

Sunday, June 5, 2016

ಹೀಗೊಬ್ಬನಿದ್ದ ಅಪ್ಪ - ಭಾಗ ೨.



ಅವನ ಮನಸ್ಸು ಅಂದು ಕೊಂಚ ಗಲಿಬಿಲಿಗೊಳಗಾಗಿತ್ತು.  ಮಾಡುತ್ತಿದ್ದ ಕೆಲಸಗಳಲ್ಲಿ ತಪ್ಪುಗಳಾಗುತ್ತಿದ್ದವು, ಮೇಲಧಿಕಾರಿಗಳಿಗೆ ಸಿದ್ಧಪದಿಸಬೇಕಿದ್ದ ವರದಿಗಳಲ್ಲಿ ಹಲವಾರು ತಪ್ಪುಗಳಾಗಿದ್ದವು, ಕೈಕೆಳಗಿನ ಕೆಲವರು ಬೇಕೆಂದೇ ತಪ್ಪು ಮಾಡಿ ಇವನಿಗೆ ಬೈಗುಳ ಕೇಳುವಂತಾಗಿತ್ತು.  ಹೇಗೋ ಎಲ್ಲವನ್ನೂ ಸರಿದೂಗಿಸಿ ಒಂದು ಹಂತಕ್ಕೆ ತರುವಷ್ಟರಲ್ಲಿ ಮಧ್ಯಾಹ್ನವಾಗಿತ್ತು, ಧುಮುಧುಮನೆ ಉರಿಯುತ್ತಿದ್ದ ಸಿಡುಕು ಮೂತಿಯ ಬಾಸ್ ಅಪ್ಪಣೆ ಪಡೆದು ಊಟಕ್ಕೆಂದು  ಬಂದವನಿಗೆ ಸಿಕ್ಕಿದ್ದು  ತಿಳಿಸಾರು, ಅನ್ನ, ಕೊಂಚ ಮಜ್ಜಿಗೆ!  ನಮ್ಮ ಹಣೆಬರಹಕ್ಕೆ ಇಷ್ಟಾದರೂ ದೊರಕಿತಲ್ಲ ಎಂದು ಸಮಾಧಾನದಿಂದ ಅದನ್ನೇ ತಿಂದು  ಮತ್ತೆ ಕಛೇರಿಗೆ ಬಂದಿದ್ದ.  

ಉರಿಮೂತಿಯ ಬಾಸ್ ಕೊಂಚ ಬಿಡುವಾಗುವುದನ್ನೇ ಕಾಯುತ್ತಿದ್ದವನು ನಾಲ್ಕು ಘಂಟೆಗೆ ಸರಿಯಾಗಿ ಅವನ ಕಛೇರಿಯೊಳಕ್ಕೆ ಕಾಲಿಟ್ಟಿದ್ದ.  ಏಕೆ ಬಂದಿದ್ದು ಎಂದು ಪ್ರಶ್ನಾರ್ಥಕವಾಗಿ ನೋಡಿದವನಿಗೆ ತಲೆ ಕೆರೆಯುತ್ತಾ ದೈನೇಪಿ ಭಾವದಲ್ಲಿ ನಿನ್ನೆ ನಿಮ್ಮಲ್ಲಿ ಕೊಂಚ ಹಣ ಕೇಳಿದ್ದೆನಲ್ಲ ಸರ್, ಅದಕ್ಕೇ ಬಂದೆ ಎಂದು ಮೈಯ್ಯನ್ನು ಹಿಡಿ ಮಾಡಿಕೊಂಡು ನಿಂತಿದ್ದ.  ತನ್ನ ಪರ್ಸಿನಿಂದ ಐದುನೂರರ ನೋಟೊಂದನ್ನು ತೆಗೆದು ಟೇಬಲ್ ಮೇಲೆ ಬಿಸಾಡಿದ ಬಾಸ್ ಸಂಬಳ ಬಂದ ತಕ್ಷಣ ಹಿಂದಿರುಗಿಸಬೇಕು ಎಂದಿದ್ದ.  ಬಹಳ ವಿನಮ್ರತೆಯಿಂದ ಆ ನೋಟನ್ನೆತ್ತಿಕೊಂಡು ತುಂಬಾ ಧನ್ಯವಾದಗಳು ಸರ್, ಸಂಬಳ ಬಂದ ತಕ್ಷಣ ಹಿಂದಿರುಗಿಸುವೆ ಎಂದು ತನ್ನ ಜಾಗಕ್ಕೆ ಹಿಂದಿರುಗಿದ್ದ. 

ಸರಿಯಾಗಿ ನಾಲ್ಕೂ ಮುಕ್ಕಾಲಿಗೆ ಅವನ ಟೇಬಲ್ ಮೇಲಿದ್ದ ದೂರವಾಣಿ ರಿಂಗಣಿಸಿತ್ತು, ಅತ್ತಲಿಂದ ಅವನ ಅರ್ಧಾಂಗಿ ನಾನು ಮಕ್ಕಳೊಡನೆ ಹೊರಟಿದ್ದೀನಿ, ಶಿವಾಜಿನಗರದ ಬಸ್ ನಿಲ್ದಾಣದಲ್ಲಿ ವಿನುತಾ ಹೋಟೆಲ್ ಮುಂದೆ ಕಾಯುತ್ತಿರುತ್ತೇನೆ ಎಂದಿದ್ದಳು.  ಸರಿ, ನಾನು ಆರೂಕಾಲಿಗೆ ಬರುತ್ತೇನೆ ಎಂದು ಫೋನ್ ಇಟ್ಟಿದ್ದ.  ಮಗಳು ಓದುತ್ತಿದ್ದ ಶಾಲೆಯಲ್ಲಿ ವಾರ್ಷಿಕೋತ್ಸವದ ಸಂಭ್ರಮ, ಓದಿನಲ್ಲಿ, ಇತರ ಚಟುವಟಿಕೆಗಳಲ್ಲಿ ಸದಾ ಮುಂದಿದ್ದ ಮಗಳು ವಾರ್ಷಿಕೋತ್ಸವದ ಕೆಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಳು.  ಆ ಪುಟಾಣಿಯ ಆಸೆಯಂತೆ ಅವಳಿಗೆ ಬೇಕಾದ ಬಣ್ಣ ಬಣ್ಣದ ಬಟ್ಟೆ, ಕೈ ಬಳೆ, ಕಾಲು ಚೀಲ, ಚಪ್ಪಲಿ ಇತ್ಯಾದಿಗಳನ್ನು ಕೊಡಿಸಲು ಶಿವಾಜಿನಗರಕ್ಕೆ ಬರಲು ಹೇಳಿದ್ದ.  ದಿನಸಿ ಅಂಗಡಿಯ ಕರಿಗೌಡನಿಗೆ  ಐವತ್ತು ರೂಪಾಯಿ ಸಾಲ ಕೊಡುವಂತೆ ಹೇಳಿ ಬಂದಿದ್ದ, ಅದನ್ನು ಪಡೆದುಕೊಂಡ ಹೆಂಡತಿ ಬಸ್ ಹಿಡಿದು ಮಕ್ಕಳೊಡನೆ ಶಿವಾಜಿನಗರಕ್ಕೆ ಬಂದಿದ್ದಳು.  ತನ್ನ ಕೆಲಸಗಳನ್ನೆಲ್ಲ ಮುಗಿಸಿ, ಜನರಿಂದ ತುಂಬಿದ್ದ ಬಸ್ಸಿನಲ್ಲಿ ವಾಲಾಡುತ್ತಾ ಶಿವಾಜಿನಗರಕ್ಕೆ ಬಂದು ಇಳಿಯುವುದರಲ್ಲಿ ಆರೂ ಮುಕ್ಕಾಲಾಗಿ ಹೋಗಿತ್ತು.  

ಅತ್ತಿತ್ತ ನೋಡುತ್ತಾ ಚಡಪಡಿಸುತ್ತಾ ವಿನುತಾ ಹೋಟೆಲ್ಲಿನ ಮುಂದಿದ್ದ ಮರದ ಕೆಳಗೆ ನಿಂತಿದ್ದ ಅರ್ಧಾಂಗಿಯೆಡೆಗೆ ಬಂದವನಿಗೆ ಯಾಕಿಷ್ಟು ತಡ ಎಂದು ಸಿಡುಕಿದವಳ ಮಾತಿಗೆ ಉತ್ತರ ಕೊಡುವಷ್ಟು ವ್ಯವಧಾನವಿರಲಿಲ್ಲ.  ಅವಳ ಕೈಯ್ಯಲ್ಲಿದ್ದ ಪುಟ್ಟ ಮಗನನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡು ಸೇಂಟ್ ಮೇರೀಸ್ ಚರ್ಚಿನ ಕಡೆಗೆ ನಡೆಯತೊಡಗಿದ.  ಅವನ ಹಿಂದೆಯೇ ಓಡಿದ ಮಗಳು ಅಪ್ಪಾ, ನನ್ನ ಗೆಳತಿಯರೆಲ್ಲಾ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಕಿಡ್ಸ್ ಕೆಂಪಿನಲ್ಲೇ ಬಟ್ಟೆಗಳನ್ನು ತಂದಿದ್ದಾರೆ, ನಾವೂ ಅಲ್ಲಿಗೇ ಹೋಗೋಣ ಎಂದಿದ್ದಳು.  ಅಲ್ಲಿಗಿಂತಾ ಚೆನ್ನಾಗಿರುವ ಬಟ್ಟೆಗಳನ್ನು ಕೊಡಿಸುತ್ತೇನೆ ಬಾ ಮಗಳೆ, ನಾಳೆ ನಿನಗೆ ಪ್ರಥಮ ಬಹುಮಾನ ಬರೋದು ಗ್ಯಾರಂಟಿ ಎಂದು ಸಮಾಧಾನಿಸಿದ್ದ.  ಒಲ್ಲದ ಮನಸ್ಸಿನಿಂದಲೇ ಜೊತೆಗೆ ಬಂದ ಮಗಳನ್ನು ಕರೆದೊಯ್ದು ಚರ್ಚಿನ ಮುಂಭಾಗದ ರಸ್ತೆಯ ಕೋಣೆಯಲ್ಲಿದ್ದ ಫುಟ್ಪಾತಿನಲ್ಲಿದ್ದ ಅಂಗಡಿಗಳಲ್ಲಿ ಮಗಳು ಕೇಳಿದ್ದ ಬಣ್ಣ ಬಣ್ಣದ ಬಟ್ಟೆಗಳು, ಬಳೆಗಳು, ಕಾಲುಚೀಲ, ಟೊಪ್ಪಿ ಎಲ್ಲಾ ಕೊಡಿಸಿದ್ದ.  ಮುಗ್ಧನಗೆ ನಗುತ್ತಿದ್ದ ಪುಟ್ಟ ಮಗನಿಗೊಂದು ಶರ್ಟು ಖರೀದಿಸಿದ್ದ.  

ಹಿಂದಿರುಗಿ ಬರುವಾಗ ಸೇಂಟ್ ಮೇರಿ ಚರ್ಚಿನೊಳಕ್ಕೆ ಹೋಗಿ ಹೆಂಡತಿ ಮಕ್ಕಳೊಡನೆ ಒಳ್ಳೆಯದು ಮಾಡು ತಾಯಿ ಎಂದು ಪ್ರಾರ್ಥಿಸಿ  ಬಂದಿದ್ದ.   ಕುಳಿತಿದ್ದ ಅಜ್ಜಿಯ ಬುಟ್ಟಿಯಿಂದ  ಎರಡು ಮೊಳ ಮಲ್ಲಿಗೆ ಹೂವು ಖರೀದಿಸಿ ಹೆಂಡತಿಗೆ ಮುಡಿಸಿದ್ದ.  ಪಕ್ಕದಲ್ಲೇ ಇದ್ದ ಸರ್ದಾರ್ಜಿ ಅಂಗಡಿಯಲ್ಲಿ ಕಡಿಮೆಬೆಲೆಯಲ್ಲಿ ತನಗೆಂದು ಒಂದು ಜೋಡಿ ಶೂಗಳನ್ನು ಖರೀದಿಸಿ, ತನ್ನ ಕಿತ್ತು ಹೋಗಿದ್ದ ಹಳೆಯ ಶೂಗಳನ್ನು ಅಲ್ಲೇ ಬಿಸಾಡಿ  ಶೂಗಳನ್ನು ಧರಿಸಿ ಸಂಭ್ರಮಿಸಿದ್ದ.  ಹಾಗೆಯೇ ರಸೆಲ್ ಮಾರ್ಕೆಟ್ ಮುಂಭಾಗಕ್ಕೆ ಬಂದಾಗ ಅಲ್ಲಿನ ಹೋಟೆಲ್ಲುಗಳಲ್ಲಿ ಕೆಂಡದ ಮೇಲೆ ಬೇಯುತ್ತಿದ್ದ ದನದ ಮಾಂಸದ ಘಮ್ಮೆನ್ನುವ ವಾಸನೆಗೆ ಮನಸೋತು ಮಗಳು ಅಪ್ಪಾ, ಕಬಾಬ್ ಕೊಡಿಸಪ್ಪಾ ಎಂದಾಗ ಇದು ಬೇಡ ಮಗಳೆ, ದನದ ಮಾಂಸ, ಎಂದಿದ್ದವನು ಅನತಿ ದೂರದಲ್ಲಿದ್ದ ಕೋಳಿ ಮಾಂಸದ ಹೋಟೆಲ್ಲಿಗೆ ಕರೆದೊಯ್ದು ಎರಡು ಪ್ಲೇಟ್ ಕಬಾಬ್ ತರಿಸಿ ಮಗಳಿಗೂ, ಮಗನಿಗೂ  ಹೆಂಡತಿಗೂ ತಿನ್ನಿಸಿ, ಅವರ ಜೊತೆಗೆ ತಾನೂ ಒಂದರ್ಧ ಪೀಸು ತಿಂದು ಅಲ್ಲಿಂದ ಸೀದಾ ಬಸ್ ನಿಲ್ದಾಣಕ್ಕೆ ಬಂದು ಬಸ್ ಹತ್ತಿದ್ದ.  ಜನರಿಂದ ತುಂಬಿದ್ದ ಬಸ್ಸಿನಲ್ಲಿ ಹೇಗೋ ಸೀಟು ಗಿಟ್ಟಿಸಿ, ಹೆಂಡತಿ ಮಕ್ಕಳನ್ನು ಕೂರಿಸಿ, ತಾನು ಕೊನೆಯ ನಿಲ್ದಾಣದವರೆಗೂ ನಿಂತೇ ಪಯಣಿಸಿದ್ದ. 

ಮರುದಿನ ಎಂದಿನಂತೆ ನಾಲ್ಕೂವರೆಗೆಲ್ಲ ಎದ್ದು ತನ್ನ ಕೆಲಸಕ್ಕೆ ಹೊರಟು ಬಂದಿದ್ದ.  ಬಾಸ್ ಅನುಮತಿ ಕೊಟ್ಟಲ್ಲಿ ಶಾಲೆಯ ಕಾರ್ಯಕ್ರಮಕ್ಕೆ ಬರುವೆನೆಂದು ಹೇಳಿದ್ದ.  ಆದರೆ ಕಛೇರಿಯಲ್ಲಿದ್ದ ಕೆಲಸದ ಒತ್ತಡದಲ್ಲಿ ಅನುಮತಿ ಕೇಳಲಾಗಲೇ ಇರಲಿಲ್ಲ, ಶಾಲೆಯ ಕಾರ್ಯಕ್ರಮಕ್ಕೆ ಹೋಗಲೂ ಆಗಿರಲಿಲ್ಲ.  ಮತ್ತೆ ಅವನು ಮನೆಗೆ ಹಿಂದಿರುಗುವಾಗ ಅಂದು ಮಗಳು ಮಲಗದೇ ಇವನಿಗಾಗಿ ಕಾದು ಕುಳಿತಿದ್ದಳು.  ಶಾಲೆಯಲ್ಲಿ ಕೊಟ್ಟ ಬಹುಮಾನಗಳನ್ನು ತನ್ನ ಮುಂದಿಟ್ಟುಕೊಂಡು ಅರಳುಗಣ್ಣುಗಳಿಂದ ತುಟಿ ಉಬ್ಬಿಸಿ ತನ್ನ ನಾಟ್ಯದ ಬಗ್ಗೆ, ತಾನು ಗೆದ್ದ ಸ್ಪರ್ಧೆಗಳ ಬಗ್ಗೆ  ಅವಳು ವರ್ಣಿಸುತ್ತಿದ್ದರೆ ಅವನಿಗೆ ಸ್ವರ್ಗ ಮೂರೇ ಗೇಣಿನಲ್ಲಿದ್ದಂತ್ತಿತ್ತು. ಕೈಕಾಲು ತೊಳೆದು ಬಂದವನು ಊಟಕ್ಕೆ ಕುಳಿತಾಗ ಅವನ ತೊಡೆಯ ಮೇಲೆ ತಲೆಯಿಟ್ಟು ತನ್ನ ಶಾಲೆಯ ವೈಭವವನ್ನು ವರ್ಣಿಸುತ್ತಿದ್ದ ಮಗಳು ಅದ್ಯಾವಾಗಲೋ ನಿದ್ದೆಗೆ ಜಾರಿದ್ದಳು.  ನಿಧಾನವಾಗಿ ಅವಳನ್ನು ಎತ್ತಿ ಹಾಸಿಗೆಯ ಮೇಲೆ ಮಲಗಿಸಿ ಅವಳ ಕೆನ್ನೆಗೊಂದು ಮುತ್ತನ್ನಿಟ್ಟಿದ್ದ.   ಮಗಳ ಯಶಸ್ಸಿನ ಬಗ್ಗೆ ಖುಷಿಯಾಗಿದ್ದ ಅರ್ಧಾಂಗಿಯೂ ಅಂದು ಅವನೊಡನೆ ತುಂಬಾ  ಒಲವಿನಿಂದಿದ್ದಳು. 

 (ಮುಂದುವರೆಯುವುದು,,,,,,,,)

Wednesday, June 1, 2016

ಪೊಲೀಸರೆಂದರೆ ಮನುಷ್ಯರಲ್ಲವೇ,,,,,,,,,,,,,,,,,,,,,???





ಬರುವ ಜೂನ್ ತಿಂಗಳ ನಾಲ್ಕರಂದು ಕರ್ನಾಟಕದ ಪೊಲೀಸರು ಮುಷ್ಕರ ನಡೆಸಲಿದ್ದಾರೆ ಎನ್ನುವುದು ಇಡೀ ದೇಶದ ಪೊಲೀಸ್ ವ್ಯವಸ್ಥೆಯಲ್ಲಿ ಒಂದು ಸಂಚಲನವನ್ನು ಸೃಷ್ಟಿಸಿದೆಸದಾ ಸಮವಸ್ತ್ರ ಧರಿಸಿ ಶಿಸ್ತಿನ ಸಿಪಾಯಿಗಳಂತಿದ್ದು, ಸಮಾಜದ ಸ್ವಾಸ್ಥ್ಯ ಕಾಪಾಡುವ ಪೊಲೀಸರ ಮುಷ್ಕರಕ್ಕೆ ಅವರದ್ದೇ ಆದ ಕಾರಣಗಳಿವೆವೇತನ ತಾರತಮ್ಯ, ಭಡ್ತಿ ತಡೆ, ಮೇಲಧಿಕಾರಿಗಳ ಕಿರುಕುಳ, ರಾಜಕಾರಣಿಗಳ ಒತ್ತಡ, ಅಪರಾಧಿಗಳಿಂದ ಸದಾ ಪ್ರಾಣ ಬೆದರಿಕೆ, ಸಂಸಾರದ ಆಗುಹೋಗುಗಳಿಗೆ ಸಮಯದ ಅಭಾವ, ಕೌಟುಂಬಿಕ ಕಲಹಗಳು, ಅನಾರೋಗ್ಯಕರ ವಾತಾವರಣದಲ್ಲಿ  ನಿರ್ವಹಿಸುವ ಸಂಚಾರ ಪೊಲೀಸರಿಗಂತೂ ಸದಾ ತಮ್ಮ ಆರೋಗ್ಯದ ಚಿಂತೆ, ಹೀಗೆ ಹತ್ತು ಹಲವಾರು ಪ್ರಬಲ ಕಾರಣಗಳಿಂದಲೇ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸುಮಾರು ಐವತ್ತು ಸಾವಿರಕ್ಕಿಂತ ಹೆಚ್ಚು ಪೊಲೀಸರು ಸಾಮೂಹಿಕ ರಜೆಯ ಮೇಲೆ ತೆರಳುತ್ತಿದ್ದಾರೆಪೊಲೀಸರು ತುಂಬಾ ಶಿಸ್ತಿನವರು, ಹಾಗೆಲ್ಲಾ ಮುಷ್ಕರ ಮಾಡುವುದಿಲ್ಲ ಎಂದು ಹುಸಿ ನಗುತ್ತಿದ್ದಾರೆ ಸನ್ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರುಹಾಗೊಮ್ಮೆ ಮುಷ್ಕರದಲ್ಲಿ ಭಾಗಿಯಾದರೆ ಎಸ್ಮಾ(ಅವಶ್ಯಕ ಸೇವೆಗಳ) ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಅನ್ನುತ್ತಾರೆ ಹಿರಿಯ ಅಧಿಕಾರಿಗಳು ಹಾಗೂ ಗೃಹಮಂತ್ರಿಗಳು.   ಹಿನ್ನೆಲೆಯಲ್ಲಿ ಪೊಲೀಸರೊಂದಿಗಿನ ನನ್ನ ಒಡನಾಟದ ಕೆಲವು ನೆನಪುಗಳು.

ನಾನಾಗ ಆರನೆಯ ತರಗತಿಯಲ್ಲಿ ಓದುತ್ತಿದ್ದೆ, ಅಪ್ಪನ ಹೋಟೆಲ್ಲಿಗೆ ಒಬ್ಬರು ವಯಸ್ಕ ಪೊಲೀಸ್ ಪೇದೆ ಖಾಯಂ ಗಿರಾಕಿಯಾಗಿದ್ದರುಅಪ್ಪ ಮಾಡುತ್ತಿದ್ದ "ಕೇಟೀ" ಅವರಿಗೆ ತುಂಬಾ ಇಷ್ಟ.   ಬೆಳಿಗ್ಗೆ ಮತ್ತು ಸಂಜೆ ಅಪ್ಪನ ಹೋಟೆಲ್ಲಿಗೆ ಬಂದು "ಕೇಟೀ" ಕುಡಿಯುತ್ತಾ ಲೋಕಾಭಿರಾಮವಾಗಿ ಮಾತನಾಡುತ್ತಾ ಕುಳಿತುಕೊಳ್ಳುತ್ತಿದ್ದರುಅದಾಗಲೇ ನಿವೃತ್ತಿಯ ಅಂಚಿನಲ್ಲಿದ್ದ ಅವರು ತಮ್ಮ ಕೆಲಸದ ಅವಧಿಯ ಬಹು ಭಾಗವನ್ನು ತಮ್ಮ ಮೇಲಧಿಕಾರಿಯ ಮನೆಕೆಲಸದಲ್ಲಿಯೇ  ಕಳೆಯುತ್ತಿದ್ದರಂತೆಬೆಳಿಗ್ಗೆಯೇ ಅವರ ಹೋಗಿ ಅವರ ಮಕ್ಕಳನ್ನು ಶಾಲೆಗೆ ಬಿಡುವುದು, ನಂತರ ಬಂದು ಮನೆಯವರ ಬಟ್ಟೆಗಳನ್ನು ಒಗೆದು  ,ನಂತರ ಮಾಡಿ ಸಾಹೇಬರಿಗೆ ಊಟ ತೆಗೆದುಕೊಂಡು ಠಾಣೆಗೆ ಹೋಗುತ್ತಿದ್ದರಂತೆಊಟದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೆ ಸಾಹೇಬರು ಎಲ್ಲರೆದುರಿಗೆ ಅವರ ವಯಸ್ಸಿಗೂ ಬೆಲೆ ಕೊಡದೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದರಂತೆ!  "ಕೇಟೀ" ಕುಡಿಯುತ್ತಾ  ಅವರು ಕಥೆಗಳನ್ನೆಲ್ಲಾ ಅಪ್ಪನೊಡನೆ ಹಂಚಿಕೊಳ್ಳುತ್ತಿದ್ದರೆ ನಾನು ಮೂಕನಂತೆ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದೆತಾತ, ನೀವು ಅವರಿಗೆ ಡಿಶುಂ ಡಿಶುಂ ಅಂತ ಹೊಡೀಬೇಕು ತಾನೇ ಅಂತ ನಾನು ಕೇಳಿದರೆ ನನ್ನ ಗಲ್ಲ ನೇವರಿಸಿ ಸುಮ್ಮನಾಗುತ್ತಿದ್ದರುಬಹುಶಃ ನನ್ನ ಜೀವನದಲ್ಲಿ ನಾನೆಂದಿಗೂ ಮರೆಯಲಾಗದ  ಪೊಲೀಸಪ್ಪ ಅವರು!

ಅಮ್ಮನಿಗೆ ತಿಪಟೂರಿಗೆ ವರ್ಗವಾದಾಗ ಅಪ್ಪ ಅಲ್ಲಿನ ತರಕಾರಿ ಮಾರ್ಕೆಟ್ ಪಕ್ಕದಲ್ಲಿ ಒಂದು ಸಣ್ಣ ಹೋಟೆಲ್ ಆರಂಭಿಸಿದ್ದರುಪಕ್ಕದಲ್ಲಿದ್ದ ತಾಲ್ಲೂಕು ಕಚೇರಿ, ಪೊಲೀಸ್ ಠಾಣೆ ಹಾಗೂ ಇತರ ಸರ್ಕಾರಿ ಕಚೇರಿಗಳಿಗೆ ಅಪ್ಪನ ಹೋಟೆಲ್ಲಿನಿಂದ ಟೀ  ಸರಬರಾಜಾಗುತ್ತಿತ್ತು. ಆಗ ಅಲ್ಲಿದ್ದ ಪ್ರತಿಯೊಬ್ಬ  ಪೊಲೀಸ್ ಪೇದೆಯಿಂದ ಹಿರಿಯ ಅಧಿಕಾರಿಗಳವರೆಗೂ ಎಲ್ಲರೂ ಪರಿಚಿತರಾಗಿದ್ದರುಆಗ ಹೊಸದಾಗಿ ಬಿಡುಗಡೆಯಾಗಿದ್ದ ಬಿ.ಎಸ.. ಸೈಕಲ್ಲನ್ನು ಕೊಂಡಿದ್ದ ಪೇದೆಯೊಬ್ಬರು  ನಾನು ಕೇಳಿದಾಗೆಲ್ಲಾ  ತುಳಿಯಲು ಕೊಡುತ್ತಿದ್ದರುಟೀ ಕೊಡಲು ಠಾಣೆಗೆ ಹೋದಾಗ ಅಲ್ಲಿದ್ದ ಬಂದೂಕುಗಳನ್ನು ನನ್ನ ಕೈಗಳಿಂದ ಮುಟ್ಟಿ ಸಂಭ್ರಮಿಸುತ್ತಿದ್ದೆಗತ್ತಿನಿಂದ ನಡೆದು ಬರುವ ಹಿರಿಯ ಅಧಿಕಾರಿಗಳಿಗೆ ಪೇದೆಗಳೆಲ್ಲಾ ಠಕ್ಕೆಂದು ಸೆಲ್ಯೂಟ್ ಹೊಡೆಯುವಾಗ  ನಾನೂ ಸಹ ಅವರಂತೆಯೇ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಕಾಣುತ್ತಿದ್ದೆಒಮ್ಮೊಮ್ಮೆ ಠಾಣೆಯಲ್ಲಿ  ಅಧಿಕಾರಿಗಳ ಅಟ್ಟಹಾಸಕ್ಕೆ ಪೇದೆಗಳು ನಡುಗುತ್ತಿದ್ದರು, ಎದುರು ಮಾತನಾಡಲಾಗದೆ ಭಯಭೀತರಾಗಿ ತಲೆಬಗ್ಗಿಸಿ ನಿಲ್ಲುತ್ತಿದ್ದರು, ಆಗೆಲ್ಲಾ  ಯಾವುದೇ ಕಾರಣಕ್ಕೂ ಪೊಲೀಸ್ ಪೇದೆಯ ಕೆಲಸಕ್ಕೆ ಮಾತ್ರ ಸೇರಲೇಬಾರದು ಅಂದುಕೊಳ್ಳುತ್ತಿದ್ದೆ

ಕಾಲೇಜು ದಿನಗಳಲ್ಲಿ ಕಂಡ ಪ್ರಭಾಕರ್ ಎಂಬ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ದರ್ಪ, ನೇರ ನಡವಳಿಕೆ, ಗತ್ತಿನ ಮಾತುಗಳಿಂದ ಇಂದಿಗೂ  ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆವೈದ್ಯನೊಬ್ಬ  ಹೆಂಡತಿಗೆ ವಿಷದ ಇಂಜೆಕ್ಷನ್ ಕೊಟ್ಟು ಕೊಂದಾಗ, ಅವನನ್ನು ಬಂಧಿಸಿ ಮೆರವಣಿಗೆ ಮಾಡಿ ಜೈಲಿಗಟ್ಟಿದ್ದ ಅವರ ಖದರ್  ಇಂದಿಗೂ ಚಿರನೂತನಆದರೆ ಆಗ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರ ಪ್ರಭಾವದಿಂದ ವೈದ್ಯರು ಜೈಲಿನಿಂದ ಹೊರಬಂದಿದ್ದಲ್ಲದೆ ಮತ್ತೊಂದು ಮದುವೆಯನ್ನೂ  ಮಾಡಿಕೊಂಡಿದ್ದರು

ನಮ್ಮ ಜೊತೆಗೆ ಕಾಲೇಜಿನಲ್ಲಿ ಓದುತ್ತಿದ್ದ ಗೆಳೆಯನೊಬ್ಬ ಮನೆಯಲ್ಲಿ ಪೋಷಕರು ಅವನಿಗೆ ಒಂದು "ಲೂನಾ" ಕೊಡಿಸಲಿಲ್ಲ ಎನ್ನುವ ಕಾರಣಕ್ಕಾಗಿ ಮಹಾಲಕ್ಷ್ಮಿ ಎಕ್ಸ್ಪ್ರೆಸ್ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಆಗ ಅವನ ಮೃತಶರೀರವನ್ನು ಕಾವಲು ಕಾಯ್ದು, ಅಲ್ಲಿಂದ ಆಸ್ಪತ್ರೆಗೆ ಸಾಗಿಸಿ, ಶವಪರೀಕ್ಷೆಯ ನಂತರ ಪೋಷಕರಿಗೊಪ್ಪಿಸಿ, ಅಪಾರ ದುಃಖದಲ್ಲಿದ ಅವರನ್ನು ಸಮಾಧಾನಪಡಿಸುತ್ತಿದ್ದ ಪೊಲೀಸರನ್ನು ಕಂಡು  ನಮಗೆ ಅವರ ಬಗ್ಗೆ ಹೆಮ್ಮೆ ಎನ್ನಿಸಿತ್ತು.

ವಿ.ಪಿ.ಸಿಂಗ್ ಅವರು ಪ್ರಧಾನಮಂತ್ರಿಯಾಗಿದ್ದಾಗ ನಡೆದ ಮಂಡಲ್ ವರದಿ ವಿರೋಧಿ ಚಳುವಳಿಯಲ್ಲಿ ನನಗೆ ಪೊಲೀಸರ ಲಾಠಿಯ ಪರಿಚಯವಾಗಿತ್ತುವಿದ್ಯಾರ್ಥಿ ಸಂಘದ ಮುಖಂಡನಾಗಿ ಮೀಸಲಾತಿ ವಿರೋಧಿ ಚಳುವಳಿಯ ಮುಂಚೂಣಿಯಲ್ಲಿದ್ದ ನನಗೆ ಸಾಕಷ್ಟು ಏಟುಗಳು ಬಿದ್ದಿದ್ದವಲ್ಲದೆ ಜೈಲಿನ ದರ್ಶನವೂ ಆಗಿತ್ತುಮೊದಲ ಬಾರಿಗೆ ಪೊಲೀಸರ ಕ್ರೌರ್ಯದ ಪರಿಚಯವಾಗಿ ಅವರ ಮೇಲಿದ್ದ ಗೌರವ ಕಡಿಮೆಯಾಗಿತ್ತು.   ಆದರೆ ಆಗ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ನಡೆದ ಸಂಘರ್ಷದಲ್ಲಿ ಹಲವಾರು ಪೊಲೀಸರು ಗಾಯಗೊಂಡಿದ್ದರು.

ಪದವಿ ಮುಗಿಸಿ ಉದ್ಯೋಗನಿಮಿತ್ತ ಬೆಂಗಳೂರಿಗೆ ಬಂದು ನೆಲೆಸಿದಾಗ ನನ್ನ ಹಾಗೂ ಪೊಲೀಸರ ನಡುವಿನ ಸಂಪರ್ಕ ತುಂಬಾ ಹೆಚ್ಚಾಯಿತುಪೊಲೀಸ್ ಇಲಾಖೆ ಸೇರಬೇಕೆಂದಿದ್ದ ನನಗೆ  ಅಲ್ಲಿ ಉದ್ಯೋಗ ದೊರಕದೆ ಖಾಸಗಿ ಭದ್ರತಾ ಸಂಸ್ಥೆಯಲ್ಲಿ ಮೇಲ್ವಿಚಾರಕನಾಗಿ ಸೇರಿಕೊಂಡಿದ್ದೆಗಸ್ತು ಬರುವ ಪೊಲೀಸರೆಲ್ಲ ನನಗೆ ಮಿತ್ರರಾಗಿದ್ದರುನನ್ನ ಉದ್ಯೋಗಕ್ಕೆ ಸಂಬಂಧಿಸಿದಂತೆ ಹಲವಾರು ಕಳ್ಳತನ, ಅಪಘಾತ ಪ್ರಕರಣಗಳಲ್ಲಿ ಸಂಬಂಧಿತ ಪೊಲೀಸ್ ಠಾಣೆಗಳೊಡನೆ  ನನ್ನ ಸಂಪರ್ಕ ಅವ್ಯಾಹತವಾಗಿತ್ತುಆಗೆಲ್ಲಾ ಪೊಲೀಸರ ಜೀವನದ ಹಲವಾರು ಮಹತ್ವದ ವಿಷಯಗಳು ತಿಳಿದು ಬರುತ್ತಿದ್ದವುಕೆಲವು ಪೊಲೀಸ್ ಪೇದೆಗಳಂತೂ ಹಿರಿಯ ಅಧಿಕಾರಿಗಳ ಕಿರುಕುಳ ತಾಳಲಾಗದೆ ರಾಜಿನಾಮೆ ನೀಡುವ ಮಟ್ಟಕ್ಕೆ ರೋಸಿ ಹೋಗಿದ್ದರುಮತ್ತೆ ಕೆಲವು ಪೇದೆಗಳು ಹಿರಿಯ ಅಧಿಕಾರಿಗಳು ಎಷ್ಟೇ ನಿಯಂತ್ರಿಸಲು ಪ್ರಯತ್ನಿಸಿದರೂ ಯಾರ ಅಂಕೆಗೂ ಸಿಗದೆ  ಸಿಕ್ಕಸಿಕ್ಕವರಿಂದ ಸಾಕಷ್ಟು ಮಾಮೂಲಿ ವಸೂಲಿ ಮಾಡುತ್ತಾ ಬ್ರಹ್ಮಾಂಡ ಭ್ರಷ್ಟರಾಗಿದ್ದರುಕೆಲವು ಪೊಲೀಸರು ತಾವು ಸಂಪಾದಿಸುವ ಲಂಚದ ಹಣದಿಂದಲೇ  ಐಷಾರಾಮಿ ಜೀವನ ನಡೆಸುತ್ತಿದ್ದರೆ ಮತ್ತೆ ಕೆಲವರು ತಮ್ಮಆದರ್ಶಗಳಿಗೆ ಜೋತು ಬಿದ್ದು ತಮಗೆ ಬರುವ ಸಂಬಳದಲ್ಲಿಯೇ ಜೀವನ ನಡೆಸಲು ಹೆಣಗುತ್ತಿದ್ದರು.

ಕೆಲವು ಪೊಲೀಸರ ಮನೆಗಳಲ್ಲಿ ಮಹಾಲಕ್ಷ್ಮಿ ಕಾಲು ಮುರಿದುಕೊಂಡು ಬಿದ್ದಿದ್ದು ಅಲ್ಲಿ ಸುಖ ವೈಭೋಗಗಳು ತಾಂಡವವಾಡುತ್ತಿದ್ದರೆ ಇನ್ನು ಕೆಲವರ ಮನೆಗಳಲ್ಲಿ ದರಿದ್ರಲಕ್ಷ್ಮಿ ತಾಂಡವವಾಡುತ್ತಿದ್ದಳುಸಂಜೆಯಾದರೆ ಕೆಲವರ ಮನೆಯಲ್ಲಿ ಮಲ್ಲಿಗೆಯ ಘಮಲಿನೊಡನೆ ಮೈಸೂರ್ ಪಾಕ್ ಸಂಭ್ರಮವಿದ್ದರೆ ಮತ್ತೆ ಕೆಲವರ ಮನೆಯ ಮುಂದೆ  ಗಂಡ ಹೆಂಡಿರ ಜಗಳ ಹಾದಿರಂಪ ಬೀದಿರಂಪವಾಗಿ ಅವರ ಸಂಸಾರ ನಗೆಪಾಟಲಿಗೀಡಾಗುತ್ತಿತ್ತು.  

ಅದೆಷ್ಟೋ ಸಂದರ್ಭಗಳಲ್ಲಿ ಬೆಳಿಗ್ಗೆ ಕೆಲಸಕ್ಕೆಂದು ಹೋದವರು ಮನೆಗೆ ಜೀವಂತವಾಗಿ ಬರುವ ಗ್ಯಾರಂಟಿಯೇ ಇಲ್ಲದೆ ಯಾವಾಗಲೂ ಅನಿಶ್ಚಿತತೆಯಲ್ಲಿಯೇ ಬದುಕಬೇಕಾದ ಅನಿವಾರ್ಯತೆ ಪೊಲೀಸರ ಕುಟುಂಬದವರಿಗಿದೆಬೆಂಗಳೂರಿನಲ್ಲಿ ಕಾವೇರಿ ನೀರಿನ ಗಲಾಟೆಯಾದಾಗ ಮಾಗಡಿ ರಸ್ತೆಯಲ್ಲಿ  ಒಬ್ಬ ಪೊಲೀಸ್ ಪೇದೆಯ ಕೈಯ್ಯನ್ನೇ ದುಷ್ಕರ್ಮಿಗಳು ಕತ್ತರಿಸಿ ಹಾಕಿದ್ದರು. ಕರ್ತವ್ಯ ನಿರತರಾಗಿದ್ದಾಗ ವೇಗವಾಗಿ ಬಂದ ವಾಹನವೊಂದರಿಂದ ಪಾದಚಾರಿಗಳನ್ನು ಉಳಿಸಲು ಹೋಗಿ ತಮ್ಮ ಪ್ರಾಣವನ್ನೇ ಬಲಿದಾನ ನೀಡಿದ ಗಿರಿಜಾ ಮೀಸೆಯ "ಪೊಲೀಸ್ ತಿಮ್ಮಯ್ಯ" ನವರನ್ನು ಯಾರಾದರೂ ಮರೆಯಲಾದೀತೆ? ಕನ್ನಡಿಗರ ಕಣ್ಮಣಿ ಡಾ. ರಾಜ್ ಕುಮಾರ್ ಅವರ ನಿಧನದ ಸಂದರ್ಭದಲ್ಲಿ ಮಹಾಲಕ್ಷ್ಮಿ ಲೇ ಔಟಿನ ಬಳಿ ಗಲಭೆಯಲ್ಲಿನ ಹಿಂಸಾಚಾರಕ್ಕೆ ಬಲಿಯಾದ ಮಂಜುನಾಥ ಎಂಬ  ಪೊಲೀಸ್ ಅಧಿಕಾರಿಯ ತ್ಯಾಗವನ್ನು ಮರೆಯಲು ಸಾಧ್ಯವೇ?

  ಖದೀಮರ ಗುಂಡೇಟಿಗೆ ಬಲಿಯಾದ ಮಲ್ಲಿಕಾರ್ಜುನ್ ಬಂಡೆ, ನೆಲಮಂಗಲದಲ್ಲಿ ಕಳ್ಳರ ಆಕ್ರಮಣಕ್ಕೆ ಬಲಿಯಾದ ಜಗದೀಶ್ ಮುಂತಾದ ಪೊಲೀಸ್ ಅಧಿಕಾರಿಗಳನ್ನು ಹೇಗೆ ಮರೆಯಲಾದೀತುಇನ್ನು ನಕ್ಸಲರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ದಿನನಿತ್ಯವೂ ಒಂದಿಲ್ಲೊಂದು ಪ್ರಕರಣಗಳಲ್ಲಿ ಪೊಲೀಸರು ಸಾಯುತ್ತಲೇ ಇದ್ದಾರೆಸ್ವಸ್ಥ ಸಮಾಜಕ್ಕಾಗಿ, ಸಾರ್ವಜನಿಕರ ರಕ್ಷಣೆಗಾಗಿ, ನಮ್ಮ ಸುರಕ್ಷಿತ ನಾಳೆಗಳಿಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟಿರುವ ಪೊಲೀಸರ ಬಗ್ಗೆ ನಮ್ಮ ದೃಷ್ಟಿಕೋನ ಬದಲಾಗಬೇಕಿದೆ, ಏಕೆಂದರೆ ಅವರೂ ನಮ್ಮಂತೆಯೇ ಮನುಷ್ಯರು ಎನ್ನುವುದು  ಎಲ್ಲರಿಗೂ ಅರಿವಾಗಬೇಕಿದೆ.  

ತಮ್ಮ ವೇತನ ತಾರತಮ್ಯ, ರಜೆಯಿಲ್ಲದೆ ನಿರಂತರ ದುಡಿತ, ಹಿರಿಯಧಿಕಾರಿಗಳ ಹಾಗೂ ರಾಜಕಾರಣಿಗಳ ದಬ್ಬಾಳಿಕೆಯನ್ನು ವಿರೋಧಿಸಿ ಪೊಲೀಸರು ನಡೆಸುತ್ತಿರುವ ಮುಷ್ಕರಕ್ಕೆ ನನ್ನ ಬೆಂಬಲವಿದೆಎಂದೋ ಎಲ್ಲೋ ಒಬ್ಬ ಪೊಲೀಸ್ ಪೇದೆ ನಿಮ್ಮಿಂದ ನೂರು ರೂಪಾಯಿ ಲಂಚ ಪಡೆದ ಸನ್ನಿವೇಶವನ್ನು ಮರೆತುಬಿಡಿ, ಇಡೀ ಸಮಾಜದ ಹಿತದೃಷ್ಟಿಯಿಂದ ಯೋಚಿಸಿ, ಪೊಲೀಸರ ತ್ಯಾಗ, ಬಲಿದಾನಗಳನ್ನು ಮನದಲ್ಲಿ ಸ್ಮರಿಸಿ, ಅವರ ಪ್ರತಿಭಟನೆಗೆ ನಿಮ್ಮ ಸಹಕಾರವಿರಲಿ, ಬೆಂಬಲವಿರಲಿನಮ್ಮ ಸಮಾಜದ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುವ ಅವರಿಗೂ ಒಂದು ಬದುಕಿದೆಯಲ್ಲವೇನಮ್ಮಂತೆಯೇ ತಮ್ಮ ಕುಟುಂಬದವರೊಡನೆ ಸಂತೋಷದ ಘಳಿಗೆಗಳನ್ನು ಅನುಭವಿಸಲು ಅವರಿಗೂ ಹಕ್ಕಿದೆಯಲ್ಲವೇ?