Wednesday, August 19, 2015

ಅರಬ್ಬರ ನಾಡಿನಲ್ಲಿ ೧೭: ನಮೋ ಇನ್ ದುಬೈ - ಮೋದಿ ಎಂಬ ಮಾಯಗಾರ!


ಆಗಸ್ಟ್ ೧೫ರ ಸ್ವಾತಂತ್ರ್ಯ ದಿನದ ಆವೇಶವೆಲ್ಲ ಇಳಿಯುವ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ದುಬೈಗೆ ಬರುತ್ತಾರಂತೆ ಎನ್ನುವ ಸುದ್ಧಿ ಕೇಳುತ್ತಿದ್ದಂತೆ ನಾನು ಹೇಗಾದರೂ ಸರಿ, ಹೋಗಲೇಬೇಕು, ಅವರನ್ನು ನೋಡಬೇಕು, ಅವರ ಮಾತುಗಳನ್ನು ಕೇಳಬೇಕು ಎನ್ನುವ ಆಸೆ ಮನದಲ್ಲಿ ಮೂಡಿ ದಿನದಿಂದ ದಿನಕ್ಕೆ ಘಟ್ಟಿಯಾಗುತ್ತಾ ಹೋಯಿತು.  ಅದಕ್ಕೆ ತಕ್ಕಂತೆ ಆರಂಭವಾದ ಅಂತರ್ಜಾಲ ತಾಣದಲ್ಲಿ ನನ್ನ ಹೆಸರನ್ನು ದಾಖಲಿಸಿ ನನ್ನ ಪಾಸನ್ನು ಜೋಪಾನವಾಗಿ ತೆಗೆದಿರಿಸಿಕೊಂಡು, ಆಗಸ್ಟ್ ೧೭ ಬರುವುದನ್ನೇ ಕಾಯುತ್ತಿದ್ದೆ.  ಕಚೇರಿಯಲ್ಲಿ ಆಪ್ತರಾಗಿದ್ದ ಕೆಲವರನ್ನು, ಮತ್ತೆ ಹಲವು ಸ್ನೇಹಿತರನ್ನು ಬರುವಂತೆ ಕರೆದರೆ ಅವರವರ ಕೆಲಸದಲ್ಲಿ ಪುರುಸೊತ್ತಿಲ್ಲದ ಅವರಿಂದ ಸಿಕ್ಕಿದ್ದು ನಿರಾಶೆಯ ಪ್ರತಿಕ್ರಿಯೆ!  ಹೋಗಲು ಜೊತೆಗೆ ಯಾರೂ ಇಲ್ಲ, ಒಬ್ಬನೇ ಹೋಗಬೇಕಲ್ಲಾ ಎನ್ನುವ ಕೊರಗಿನ ನಡುವೆಯೂ ನಾನು ದಿನಕ್ಕಾಗಿ ಕಾಯುತ್ತಿದ್ದೆ!  ಕೊನೆಗೂ ದಿನ ಬಂದೇ ಬಿಟ್ಟಿತು, ಆದರೆ ಅದೇ ದಿನ ಬೆಳಿಗ್ಗೆಯ ಮಾತುಕತೆಯಲ್ಲಿ ಬಾಸ್ ನನ್ನ ಮೇಲೆ ಕೋಪಗೊಂಡಿದ್ದ!  ಕಾರ್ಯಕ್ರಮಕ್ಕೆ ಹೋಗಲು ಅನುಮತಿ ನೀಡುತ್ತಾನೋ ಇಲ್ಲವೋ ಎನ್ನುವ ಅನುಮಾನದಲ್ಲಿ ಹೊಟ್ಟೆಗೆ ಅನ್ನ ಸೇರದಂತಾಗಿತ್ತು!   ರೆಸ್ಟೋರೆಂಟಿನಲ್ಲಿ ನಾನು ಊಟ ಮುಗಿಸಿ ಹೊರಡುವ ವೇಳೆ ಗೆ ಊಟಕ್ಕಾಗಿ ಒಬ್ಬನೇ ಬಂದ ಬಾಸ್ ಬಳಿ ಹೋಗಿ ನಿಧಾನಕ್ಕೆ ಕಾರ್ಯಕ್ರಮದ ಬಗ್ಗೆ ವಿವರಿಸಿ ಎರಡು ಘಂಟೆ ಮುಂಚಿತವಾಗಿ ಹೋಗಲು ಅನುಮತಿ ಕೇಳಿದರೆ ಖುಷಿಯಾಗಿ ವಾವ್, ನಮೋ ಇನ್ ದುಬೈ, ಗ್ರೇಟ್, ಗೋ ಅಹೆಡ್ ಅಂದಿದ್ದ!  ಮೂರೂ ಮುಕ್ಕಾಲಿಗೆ ಪಂಚೌಟ್ ಮಾಡಿ ಹೊರಟವನು ಕಾರಿನ ವೇಗ ೧೨೦ರಿಂದ ಕೆಳಕ್ಕಿಳಿಯದಂತೆ ಓಡಿಸಿ, ಎಮಿರೇಟ್ಸ್ ರಸ್ತೆಯಲ್ಲಿ ಬಲತಿರುವು ತೆಗೆದು ಮೋಟಾರ್ ಸಿಟಿಯೊಳಗಿನಿಂದ ದುಬೈ ಸ್ಪೋರ್ಟ್ಸ್ ಸಿಟಿ ತಲುಪಿದರೆ ಕ್ರಿಕೆಟ್ ಸ್ಟೇಡಿಯಂನಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದರು.  ಧೂಳು ತುಂಬಿದ ಮೈದಾನದಲ್ಲಿ ಕಾರು ನಿಲ್ಲಿಸಿ ಅಲ್ಲಿಯೇ ಸಾಲಾಗಿ ನಿಂತಿದ್ದ ದುಬೈ ನಗರ ಸಾರಿಗೆಯ ಬಸ್ಸು ಹತ್ತಿ ಕ್ರಿಕೆಟ್ ಸ್ಟೇಡಿಯಂ ಹತ್ತಿರ ಬರುವಲ್ಲಿಗೆ ಸಮಯ ಸಂಜೆಯ ನಾಲ್ಕೂಮುಕ್ಕಾಲಾಗಿತ್ತು



ಮೈಲುದ್ಧದ ಸಾಲಿನಲ್ಲಿ ನಿಂತು ನನ್ನ ಸರದಿ ಬಂದಾಗ ಪಾಸ್ ಮತ್ತು ಗುರುತಿನ ಪತ್ರ ತೋರಿಸಿ ಒಳ ಸೇರುವಾಗ ಭದ್ರತಾ ರಕ್ಷಕನೊಬ್ಬ ನನ್ನನ್ನು ತಪಾಸಿಸಿ ಜೇಬಿನಲ್ಲಿದ್ದ ಸಿಗರೇಟು ಮತ್ತು ಲೈಟರ್ ಕಿತ್ತುಕೊಂಡು ಒಳಬಿಟ್ಟಿದ್ದ!  ಅಲ್ಲಿ ನನ್ನಂತೆಯೇ ಬಂದಿದ್ದ ಸಹಸ್ರಾರು ಜನರಲ್ಲಿ ಒಂದೇ ಆತುರ, ಆದಷ್ಟು ಬೇಗ ಒಳಗೆ ಹೋಗಬೇಕು, ನಮ್ಮ ಪ್ರಧಾನಿ ಮೋದಿಯವರನ್ನು ನೋಡಬೇಕು, ಅವರ ಮಾತುಗಳನ್ನು ಕೇಳಬೇಕು!  ಅದೊಂದು ರೀತಿಯ ಉನ್ಮಾದಕರ ವಾತಾವರಣವಾಗಿತ್ತು. ಭವ್ಯವಾಗಿರುವ ದುಬೈ ಕ್ರಿಕೆಟ್ ಸ್ಟೇಡಿಯಂನೊಳಗೆ ಕಾಲಿಡುತ್ತಿದ್ದಂತೆ ನಮಗೆ ಕೇಳಿಸಿದ್ದು ಮೋದಿ, ಮೋದಿ, ಮೋದಿ ಮೋದಿ ಎನ್ನುವ ಮುಗಿಲು ಮುಟ್ಟುವ ಘೋಷಣೆಯೊಂದೇ!  ದುಬೈ ಕ್ರಿಕೆಟ್ ಸ್ಟೇಡಿಯಂ ಭಾರತೀಯರ ದೇಶಭಕ್ತಿಯ ಅಮಲಿನಲ್ಲಿ ಮಿಂದೇಳುತ್ತಿತ್ತು!  ಎಂದೂ ಕಾಣದ ಭಾರತೀಯ ಜನಸಾಗರವನ್ನು ಕಂಡ ಭದ್ರತಾ ಸಿಬ್ಬಂದಿ ಹಾಗೂ ದುಬೈ ಪೊಲೀಸರು ಮಂತ್ರಮುಗ್ಧರಾಗಿದ್ದರು!  ಕೇವಲ ದುಬೈ ಮಾತ್ರವಲ್ಲದೆ, ದೂರದ ಬಹರೇನ್, ಸೌದಿ ಅರೇಬಿಯಾ, ಕುವೈತ್, ಒಮಾನ್ ದೇಶಗಳಿಂದಲೂ ಬೆವರಿಳಿಸುತ್ತಿದ್ದ ಬಿಸಿಲಿನ ಬೇಗೆಯಲ್ಲಿ, ನರೇಂದ್ರ ಮೋದಿಯವರನ್ನು ನೋಡಲು  ಬಂದಿದ್ದವರ ದಾಹ ತಣಿಸಲು ನೀರಿನ ಲೋಟಗಳು, ಗ್ಲುಕೋಸ್, ಹಣ್ಣಿನರಸಗಳನ್ನು ಹಂಚುತ್ತಿದ್ದ ಸ್ವಯಂಸೇವಕರು ತಮ್ಮ ಮನೆಯ ಹಬ್ಬವೇನೋ ಎಂಬಂತೆ ಸಂಭ್ರಮಿಸುತ್ತಾ ಮನೆಗೆ ಬಂದ ನೆಂಟರಿಷ್ಟರನ್ನು ಸತ್ಕರಿಸುವ ರೀತಿಯಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದರು!  ಒಟ್ಟಾರೆ ಅಲ್ಲೊಂದು ಮಾಯಾಲೋಕವೇ ನಿರ್ಮಾಣವಾಗಿತ್ತು, ಎಂಟು ವರ್ಷಗಳ ನನ್ನ ಗಲ್ಫ್ ಜೀವನದಲ್ಲಿ ನಾನೆಂದೂ ಇಂತಹ ಸಂಭ್ರಮವನ್ನು ದುಬೈನಲ್ಲಿ ಕಂಡಿರಲಿಲ್ಲ, ಮುಂದೆ ಕಾಣುತ್ತೇನೋ ಇಲ್ಲವೋ ಗೊತ್ತಿಲ್ಲ!  ಲಭ್ಯವಿದ್ದ ಸೀಟುಗಳೆಲ್ಲಾ ಸಾಕಷ್ಟು ಮುಂಚಿತವಾಗಿ ಬಂದವರಿಂದ ಅದಾಗಲೇ ಆಕ್ರಮಿಸಲ್ಪಟ್ಟಿದ್ದರಿಂದಾಗಿ ಕಾರ್ಯಕ್ರಮ ಪೂರಾ ನಾವು ನಿಂತೇ ಇರಬೇಕಾಗಿತ್ತು!  ಸುಮಾರು ಐದು ಘಂಟೆಗಳ ಕಾಲ ಸುರಿಯುವ ಬೆವರಿನಲ್ಲಿ, ನೋಯುತ್ತಾ ಅಸಹಕಾರ ಚಳುವಳಿ ಹೂಡುತ್ತಿದ್ದ ಕಾಲುಗಳನ್ನು ಸಮಾಧಾನಿಸುತ್ತಾ ಅದು ಹೇಗೆ ನಿಂತಿದ್ದೆನೋ ಗೊತ್ತಿಲ್ಲ!  

ಮೋದಿಯವರನ್ನು ನೋಡಲು ಕಾತರಿಸುತ್ತಿದ್ದ ಭಾರತೀಯರನ್ನು ತಣಿಸಲು ಕೆಲವು ದೇಶಭಕ್ತಿ ಗೀತೆಗಳೊಂದಿಗೆ ಸಂಜೆ ಘಂಟೆಗೆ ಸರಿಯಾಗಿ ಕಾರ್ರ್ಯಕ್ರಮ ಆರಂಭವಾಯಿತು.  ಮೊದಲಿಗೆ ಲತಾ ಮಂಗೇಶ್ಕರ್ ಅವರ ಮಧುರ ಕಂಠದ ಅಮರಗೀತೆ "ವಂದೇ ಮಾತರಂ" ಹಾಡು ಧ್ವನಿವರ್ಧಕದಲ್ಲಿ ಹೊರಬರುತ್ತಿದ್ದಂತೆ ಅಷ್ಟು ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿದ್ದ ಸುಮಾರು ಐವತ್ತು ಸಾವಿರ ಜನರಲ್ಲಿ ಒಮ್ಮೆಗೇ ವಿದ್ಯುತ್ ಸಂಚಾರವಾದಂತಾಗಿ ಒಕ್ಕೊರಲಿನಲ್ಲಿ ಹಾಡಿಗೆ ತಾವೂ ಧ್ವನಿ ಸೇರಿಸಿ ಹಾಡುತ್ತಿದ್ದರೆ ದುಬೈನ ಆಗಸ ಮೂಕವಾಗಿತ್ತು.  ಮುಂದಿನ ಹಾಡು " ಮೇರಿ ವತನ್ ಕೆ ಲೋಗ್", ಹೀಗೆಯೇ ಹಲವಾರು ಹಾಡುಗಳಿಗೆ ಸೇರಿದ್ದವರೆಲ್ಲ ಭಾವಪರವಶರಾಗಿ ಧ್ವನಿ ಸೇರಿಸುತ್ತಿದ್ದರು.  ಮೋದಿ, ಮೋದಿ, ಎನ್ನುವ ಕೂಗು ತಾರಕಕ್ಕೇರುತ್ತಾ ಹೋದಂತೆ ಕೊನೆಗೂ ಸುಮಾರು ಸಂಜೆ ಏಳೂಮುಕ್ಕಾಲಿಗೆ ಪ್ರಧಾನಿ ನರೇಂದ್ರಮೋದಿಯವರು ವೇದಿಕೆಗೆ ಆಗಮಿಸಿದಾಗ ಐವತ್ತು ಸಾವಿರಕ್ಕೂ ಹೆಚ್ಚಿದ್ದ ಜನತೆ ಹುಚ್ಚೆದ್ದು ಕುಣಿದಿದ್ದರು. ತಮ್ಮ ಎಂದಿನ ಶೈಲಿಯಲ್ಲಿ ನಮಸ್ಕರಿಸಿ ಮಾತನಾಡಲಾರಂಭಿಸಿದ ಮೋದಿಯವರು ಮೊದಲು ಎಲ್ಲ ಅನಿವಾಸಿ ಭಾರತೀಯರಿಗೂ ಧನ್ಯವಾದಗಳನ್ನು ಅರ್ಪಿಸಿ, ಸಂಯುಕ್ತ ಅರಬ್ ಗಣರಾಜ್ಯದ ದೊರೆಗಳಿಗೆ ವಂದಿಸಿದರು

ಸಕುಟುಂಬ ಸಮೇತ ವಿಮಾನ ನಿಲ್ದಾಣಕ್ಕೆ ಬಂದು ತಮ್ಮನ್ನು ಸ್ವಾಗತಿಸಿದ ಸಂಯುಕ್ತ ಅರಬ್ ಗಣರಾಜ್ಯದ ದೊರೆಯಾ ಮಗ ಶೇಕ್ ಮೊಹಮದ್ ಖಲೀಫಾ ಬಿನ್ ಅಲ ನಹ್ಯಾನ್ ಅವರು ತೋರಿಸಿದ ಗೌರವ ಮೋದಿಗಲ್ಲ, ಅದು ಭಾರತದ ನೂರಿಪ್ಪತ್ತೈದು ಕೋಟಿ ಜನತೆಗೆ ಎಂದಾಗ ನೆರೆದಿದ್ದ ಜನರ ಕರತಾಡನ ಮುಗಿಲು ಮುಟ್ಟಿತ್ತು.  ಇಂದು ಭಾರತವನ್ನು ಎಲ್ಲರೂ ಕುತೂಹಲದಿಂದ ನೋಡುತ್ತಿದ್ದಾರೆ, ಏಕೆಂದರೆ ನಮ್ಮಲ್ಲಿರುವ ನೂರಿಪ್ಪತ್ತೈದು ಕೋಟಿ ಜನರಲ್ಲಿ ಶೇ. ೬೫ರಷ್ಟು ಜನತೆ ೩೫ಕ್ಕಿಂತ ಕಡಿಮೆ ವಯಸ್ಸಿನವರು, ಯುವಜನತೆಯೇ ನಮ್ಮ ಆಸ್ತಿ, ಅದಕ್ಕಾಗಿಯೇ ನಾನು ಇಡೀ ವಿಶ್ವಕ್ಕೇ ಕರೆ ಕೊಡುತ್ತಿದ್ದೇನೆ, "ಮೇಕ್ ಇನ್ ಇಂಡಿಯಾ" ಎಂದರು.  ಕಳೆದ ನಲವತ್ತು ವರ್ಷಗಳಿಂದಲೂ  ನಾವು ಭಯೋತ್ಪಾದನೆಯಿಂದ, ಸಂಘರ್ಷದಿಂದ ನೊಂದಿದ್ದ ನಾಗಾಲ್ಯಾಂಡ್ ಸಮಸ್ಯೆಯನ್ನು ಬಗೆಹರಿಸಿದ್ದೇವೆ, ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ, ಇದರಿಂದ ಮತ್ತೊಮ್ಮೆ ಖಾತ್ರಿಯಾಗಿದೆ, ಯಾವುದೇ ಸಮಸ್ಯೆಯಾದರೂ ಮಾತುಕತೆಯಿಂದ ಮಾತ್ರ ಬಗೆಹರಿಸಲು ಸಾಧ್ಯ, ಬಂದೂಕಿನಿಂದಲ್ಲ ಎಂದು ಪರೋಕ್ಷವಾಗಿ ಅವರು ಪಾಕಿಸ್ತಾನಕ್ಕೆ ಚುಚ್ಚಿದ್ದಲ್ಲದೆ ಭಯೋತ್ಪಾದನೆಯ ವಿರುದ್ಧ ಎಚ್ಚರಿಕೆಯನ್ನೂ ನೀಡಿದರು. ಸಂಯುಕ್ತ ಅರಬ್ ಗಣರಾಜ್ಯ ಮತ್ತು ಭಾರತ ಭಯೋತ್ಪಾದನೆಯ ವಿರುದ್ಧ ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದು ಜಂಟಿಯಾಗಿ ಯಾವುದೇ ಭಯೋತ್ಪಾದಕ ಚಟುವಟಿಕೆಯನ್ನು ಎದುರಿಸಲಿದ್ದೇವೆ ಎಂದು ಘೋಷಿಸಿದರು.   


ಸುಮಾರು ವರ್ಷಗಳಿಂದ ಭಾರತೀಯರ ಕನಸಾಗಿದ್ದ ಹಿಂದೂ ದೇವಾಲಯವನ್ನು ಕಟ್ಟಲು ಅಬುದಾಭಿಯಲ್ಲಿ ಜಾಗ ನೀಡುವುದಾಗಿ ಸಂಯುಕ್ತ ಅರಬ್ ಗಣರಾಜ್ಯದ ಯುವರಾಜ ಒಪ್ಪಿಗೆ ನೀಡಿರುವುದಾಗಿ ಘೋಷಿಸಿದರು. ಜೊತೆಗೆ ಭಾರತದಲ್ಲಿ ಸುಮಾರು ನಾಲ್ಕೂವರೆ ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆ ಮಾಡುತ್ತಿರುವುದಾಗಿಯೂ ತಿಳಿಸಿದರು. ಇದು ನೆರೆದಿದ್ದ ಜನರ ಅಪಾರ ಹರ್ಷಕ್ಕೆ ಕಾರಣವಾಯಿತು.
 



ಭಾರತದಿಂದ ಸಂಯುಕ್ತ ಅರಬ್ ಗಣರಾಜ್ಯಕ್ಕೆ ವಾರಕ್ಕೆ ಸುಮಾರು ೭೦೦ ವಿಮಾನ ಹಾರಾಟಗಳು ನಡೆಯುತ್ತವೆ, ಕೋಟ್ಯಾಂತರ ರೂಪಾಯಿ ಹಣ ಇಲ್ಲಿಂದ ಭಾರತಕ್ಕೆ ಬರುತ್ತದೆ, ಲಕ್ಷಾಂತರ ಜನರು ಇಲ್ಲಿ ಉದ್ಯೋಗ, ವ್ಯಾಪಾರ ಮಾಡುತ್ತಿದ್ದಾರೆ, ಆದರೆ ಒಬ್ಬ ಪ್ರಧಾನಿ ಇಲ್ಲಿಗೆ ಬರಲು ೩೪ ವರ್ಷಗಳು ಬೇಕಾಯಿತು ಎಂದು ಮಾರ್ಮಿಕವಾಗಿ ಹಿಂದಿನ ಸರಕಾರಗಳ ವೈಫಲ್ಯವನ್ನು ಟೀಕಿಸಿದರು. ಭಾರತೀಯ ದೂತಾವಾಸದ ಅಧಿಕಾರಿಗಳು ತಿಂಗಳಿಗೊಮ್ಮೆ ಕಾರ್ಮಿಕರ ವಾಸಸ್ಥಳಗಳಿಗೇ ಭೇಟಿ ಕೊಟ್ಟು ಅವರ ದೂರು ದುಮ್ಮಾನಗಳನ್ನು ಆಲಿಸಿ, ಅವುಗಳಿಗೆ ಪರಿಹಾರವನ್ನು ನೀಡಬೇಕೆಂದು ಆದೇಶಿಸಿರುವುದಾಗಿಯೂ ತಿಳಿಸಿದರು. ತಮ್ಮ ಭಾಷಣದ ಕೊನೆಯಲ್ಲಿ ಭಾರತ ಮಾತಾಕಿ ಜೈ ಎಂದು ಎಲ್ಲರಿಂದ ಜೈಕಾರ ಹಾಕಿಸಿದ ಮೋದಿಯವರು ಮಾಡಿದ್ದು ಮಾತ್ರ ಮಹಾನ್ ಜಾದೂ ಅನ್ನುವಂತೆ ಭಾಸವಾಗುತ್ತಿತ್ತು.

ಒಟ್ಟಾರೆ ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ "ನರೇಂದ್ರ ಮೋದಿ" ಎನ್ನುವ ಜಾದೂಗಾರ ದೇಶಭಕ್ತಿ ಎನ್ನುವ ಅಮಲನ್ನು ನೆರೆದಿದ್ದ ಎಲ್ಲ ಅನಿವಾಸಿ ಭಾರತೀಯರಲ್ಲಿ ಏರಿಸಿಬಿಟ್ಟಿದ್ದರು.  ನಶೆಯಲ್ಲಿ ತೇಲಾಡಿದ ಅನಿವಾಸಿ ಭಾರತೀಯರಲ್ಲಿ ಇತಿಹಾಸ ಸೃಷ್ಟಿಸಿದ ಮೋದಿಯ ಜಾದೂಗಾರಿಕೆಯಲ್ಲಿ ತಾವೂ ಪಾಲುದಾರರಾದ ಸಂತೋಷ ಎದ್ದು ಕಾಣುತ್ತಿತ್ತು.  ಇಂದಿನ ಕಲುಷಿತ ರಾಜಕೀಯ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿಯಂತಹ ಕೆಚ್ಚೆದೆಯ ನಾಯಕರ ಅವಶ್ಯಕತೆ ಭಾರತಕ್ಕೆ ಅತ್ಯವಶ್ಯಕ ಎನ್ನುವುದು ಎಲ್ಲರ ಮನದ ಮಾತಾಗಿತ್ತು. 




ನಿಂತು ಸಾಕಾಗಿ ಪದ ಹೇಳುತ್ತಿದ್ದ ಕಾಲುಗಳು,  ಬೆವರಿ ಬೆಂಡಾಗಿ ಹೋಗಿದ್ದ ದೇಹ, ಆದರೆ ಮೋದಿಯವರ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಖುಷಿಯಿಂದ ಉಲ್ಲಸಿತವಾಗಿದ್ದ ಮನದೊಂದಿಗೆ ಮನೆಗೆ ಹಿಂದಿರುಗಿದಾಗ ರಾತ್ರಿ ಹನ್ನೆರಡಾಗಿತ್ತು.  ಮತ್ತದೇ ಮರುದಿನದ ಧಾವಂತದ ಬದುಕನ್ನು ನೆನೆದು ಬೀಗ ತೆಗೆಯುವ ಮುನ್ನವೇ ಕಣ್ಣುಗಳು ತಂತಾನೇ ಮುಚ್ಚಿಕೊಳ್ಳುತ್ತಿದ್ದವು.








10 comments:

Anonymous said...

Oh my goodness! Impressive article dude! Thank you so much,
However I am experiencing problems with your RSS.
I don't know why I can't subscribe to it. Is there anybody
getting similar RSS problems? Anyone who knows the solution can you kindly respond?
Thanx!!

My web-site - Stormfall Rise Of Balur Gameplay

Mukhyaprana said...

nice article manjanna

manju said...

Thank you Jayanth n ananymous. :-)

VAIJANATH.R.K said...

U r lucky sir . Our PM world best PM

ಜಲನಯನ said...

Nice article Manju

ಬಹಳ ಚನ್ನಾಗಿ ವಿಶ್ಲೇಶಿಸಿ ಬರೆದಿದ್ದೀರಿ ಮಂಜು.
ಒಂದು ನಿರಾಶಾದಾಯಕ ಅಧಿಕಾರ ಹಿಡಿದ ತಂಡದ ನಂತರ ಸದಾ ಹೈ-ಕಮಾಂಡ್ ಮುಖ ನೋಡಿ ಹೆಜ್ಜೆ ಇಡುತ್ತಿದ್ದ ನಾಯಕನ ನಂತರ ಯೋಚಿಸಿದ್ದನ್ನು ಬಿನ್ದಾಸ್ ಮಾಡುವ ನಾಯಕ ನಿಜಕ್ಕೂ ನಮ್ಮ ಹೆಮ್ಮೆಯೇ ಸರಿ, ಸಕಾರಾತ್ಮಕ ಇಂತಹ ನಡೆಗಳು ಸದಾ ಬರುತ್ತಿರಲಿ..ನಾನಂತೂ ಕೃಷಿ ನೀತಿ ಮತ್ತು ರೈತನ ಕಲ್ಯಾಣ ಆಧರಿಸಿ ಬರುವ ಯೋಜನೆಗಳ ನಿರೀಕ್ಷೆಯಲ್ಲಿದ್ದೇನೆ.

manju said...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಆಜಾದ್ ಭಾಯ್, ನಿಜಕ್ಕೂ ಮೋದಿ ಒಂದು ರೀತಿಯ ಸಂಚಲನವನ್ನೇ ಸೃಷ್ಟಿಸಿದ್ದಾರೆಂದರೆ ತಪ್ಪಾಗಲಾರದು! ನಿಮ್ಮ ಅನಿಸಿಕೆಯಂತೆ ನಾನೂ ಸಹ ಶ್ರೀಸಾಮಾನ್ಯನ ಪರವಾದ ಕೆಲವು ಸುಧಾರಣೆಗಳನ್ನು ಎದುರು ನೋಡುತ್ತಿದ್ದೇನೆ, ಕಾಲವೇ ಉತ್ತರಿಸಲಿದೆ ನಮ್ಮೆಲ್ಲ ಪ್ರಶ್ನೆಗಳಿಗೆ!! :-)

mudgal venkatesh said...

ಅಧ್ಭುತ ಬರಹ ಅಭಿನಂದನೆಗಳು,,,,,

mudgal venkatesh said...

ನಿಮ್ಮ ಲೇಖನಿ ನನಗೆ ತುಂಬಾ ಇಷ್ಟವಾಯಿತು,,,,,ಅಭಿನಂದನೆಗಳು- ಮಂಜುನಾಥ

manju said...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು Mudgal Venkatesh

Unknown said...

ನಮೋ ನಮಃ ..