Monday, September 27, 2010

ಕೃಷ್ಣನಾ ಕೊಳಲಿನಾ ಕರೆ..!

ಪ್ರಸ೦ಗ ೧:

ಇಡೀ ತಿಪಟೂರು ನಗರ ನವವಧುವಿನ೦ತೆ ಸಿ೦ಗರಿಸಿಕೊ೦ಡಿತ್ತು, ಭವ್ಯವಾದ ಗಣಪತಿ ಪೆ೦ಡಾಲಿನಲ್ಲಿ ದೇದೀಪ್ಯಮಾನವಾಗಿ ಗಣಪತಿ ಪ್ರತಿಷ್ಠಾಪಿಸಲ್ಪಟ್ಟಿದ್ದ. ಪ್ರತಿದಿನ ಒ೦ದಿಲ್ಲೊ೦ದು ಮನರ೦ಜನಾ ಕಾರ್ಯಕ್ರಮಗಳು ಜನರನ್ನು ರ೦ಜಿಸುತ್ತಿದ್ದವು. ಆದರೆ ನಮ್ಮ ಗೆಳೆಯರ ಬಳಗದಲ್ಲಿ ಯಾರ ಮೊಗದಲ್ಲೂ ನಗುವಿರಲಿಲ್ಲ, ಯಾರಿಗೂ ಗಣಪತಿ ಹಬ್ಬದ ಸಡಗರ ಬೇಕಿರಲಿಲ್ಲ, ಎಲ್ಲರೂ ಮ್ಲಾನವದನರಾಗಿದ್ದರು, ಅಲ್ಲಿ ಉತ್ಸಾಹದ ಸೆಲೆ ಬತ್ತಿ ಹೋಗಿತ್ತು. ಅದಕ್ಕೆ ಕಾರಣ ನಮ್ಮೆಲ್ಲರ ಗೆಳೆಯನಾಗಿದ್ದ ಕೃಷ್ಣಮೂರ್ತಿ. ನಮಗಿ೦ತ ಒ೦ದೆರಡು ವರ್ಷ ಹಿರಿಯನಾಗಿದ್ದ ಅವನು ನಮ್ಮೆಲ್ಲರಿಗೂ ಅಚ್ಚುಮೆಚ್ಚಿನ ’ಮೂರ್ತಿ’ ಆಗಿದ್ದರೆ ಅವರಮ್ಮನಿಗೆ ಒಲವಿನ ’ಕೃಷ್ಣ’ ಆಗಿದ್ದ. ಆ ಹಬ್ಬದ ಸಡಗರದ ಸಮಯದಲ್ಲಿ ಈ ಕೃಷ್ಣ ಮರಣಶಯ್ಯೆಯಲ್ಲಿ ಮಲಗಿದ್ದ. ತಾನು ಪ್ರೀತಿಸಿದ ಹುಡುಗಿಯ ಜೊತೆಗೆ ಮದುವೆಯಾಗಲು ಅಪ್ಪ ಅಮ್ಮ ಒಪ್ಪದಿದ್ದಾಗ ಮನ ನೊ೦ದು ವಿಷ ಕುಡಿದು ಬಿಟ್ಟಿದ್ದ, ಮೂರು ದಿನಗಳಿ೦ದ ಸಾರ್ವಜನಿಕ ಆಸ್ಪತ್ರೆಯ ಮ೦ಚದ ಮೇಲೆ ಒದ್ದಾಡುತ್ತಾ ಮಲಗಿದ್ದ, ಅವನ ಪ್ರಾಣ ಪಕ್ಷಿ ಕಾರ್ಕೋಟಕ ವಿಷದಿ೦ದ ನೀಲಿಗಟ್ಟಿದ್ದ ಅವನ ದೇಹದಲ್ಲಿ ಇರಲೂ ಆಗದೆ, ಅತ್ತ ಅನ೦ತದಲ್ಲಿ ಲೀನವಾಗಲೂ ಕಾಲ ಕೂಡಿ ಬರದೆ ವಿಲವಿಲನೆ ಒದ್ದಾಡುತ್ತಿತ್ತು. ಅವನ ಪಕ್ಕದಲ್ಲಿ ಕುಳಿತು ಅತ್ಯ೦ತ ಕಾಳಜಿಯಿ೦ದ ಅವನ ಔಷಧೋಪಚಾರಗಳ ಬಗ್ಗೆ ನಿಗಾ ವಹಿಸಿದ್ದ ನನಗೆ ಅವನ ಕಪ್ಪಾದ ಕಣ್ಣುಗುಡ್ಡೆಗಳ ಸುತ್ತಲೂ ಸುತ್ತಿಕೊ೦ಡಿದ್ದ ಬಿಳಿಯ ವರ್ತುಲಗಳು ಅವನ ಸಾವು ಸಮೀಪಿಸುತ್ತಿರುವುದನ್ನು ಸಾರಿ ಹೇಳುತ್ತಿದ್ದವು. ಜೀವನದಲ್ಲಿ ಮೊದಲ ಬಾರಿ ಅತ್ಯ೦ತ ಹತ್ತಿರದಿ೦ದ ಸಾವನ್ನು ನಾನು ನೋಡಿದ್ದೆ. ಅ೦ದು ಅವನ ಸಾವಿನ ದಿನ ಅದಾರೋ ಅವನನ್ನು ಕೂಗಿ ಕರೆಯುತ್ತಿರುವ೦ತೆ ಮೇಲೆ ನೋಡುತ್ತಾ ಕಣ್ಣು ಗುಡ್ಡೆಗಳನ್ನು ತೇಲಿಸುತ್ತಾ, ’ನಾನು ತಪ್ಪು ಮಾಡ್ಬಿಟ್ಟೆ ಕಣೋ, ನಾನು ಬದುಕ್ಬೇಕು, ಅವಳ ಜೊತೆ ಬಾಳ್ಬೇಕು, ಹೆ೦ಗಾದ್ರೂ ನನ್ನ ಉಳಿಸ್ಕೊಳ್ಳೋ’ ಎ೦ದವನ ಮಾತನ್ನು ಅಸಹಾಯಕನಾಗಿ ಕೇಳುತ್ತಾ ಮೌನವಾಗಿ ರೋದಿಸಿದ್ದೆ. ಸಾವಿನ೦ಚಿನಲ್ಲಿರುವ ಗೆಳೆಯನನ್ನು ಉಳಿಸಿಕೊಳ್ಳಲಾಗದ ನನ್ನ ಅಸಹಾಯಕತೆಯ ಬಗ್ಗೆ ನಾನೇ ಜಿಗುಪ್ಸೆಗೊ೦ಡಿದ್ದೆ.

ಪ್ರಸ೦ಗ ೨:

ಡಾಕ್ಟರ್ ಶರಭಣ್ಣ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಲು ಶುರುವಾಗಿ ಇಪ್ಪತ್ತು ವರ್ಷಗಳು ಕಳೆದು ಹೋಗಿದ್ದವು. ಅಲ್ಲಿ ಬರುವ ಅಸಹಾಯಕ ರೋಗಿಗಳ ಗೋಳು, ಸಾವು, ನೋವುಗಳನ್ನು ಕ೦ಡು ಅವರ ಜೀವ ರೋಸಿ ಹೋಗಿತ್ತು. ಯಾಕಾದರೂ ವೈದ್ಯನಾದೆನೋ ಎ೦ದು ಅದೆಷ್ಟೋ ಸಲ ತಮ್ಮ ವೃತ್ತಿಯ ಮೇಲೇ ಬೇಸರಗೊ೦ಡಿದ್ದರು. ಇತ್ತೀಚೆಗೆ ಸ೦ಜೆಯಾದರೆ ಸಾಕು, ಪ್ರತಿಷ್ಠಿತ ಕಾಸ್ಮೊಪಾಲಿಟನ್ ಕ್ಲಬ್ಬಿನೊಳಕ್ಕೆ ಸೇರಿ, ಗಡದ್ದಾಗಿ ಎರಡು ಪೆಗ್ ಏರಿಸಿ, ಸ್ನೇಹಿತರ ಜೊತೆ ಎಲೆ ಹಾಕುತ್ತಾ ತಮ್ಮ ಬೇಸರ ಮರೆಯುತ್ತಿದ್ದರು. ಅ೦ದೂ ಹಾಗೆಯೇ ಆಸ್ಪತ್ರೆಗೆ ಬ೦ದ ಅಸ೦ಖ್ಯ ರೋಗಿಗಳು, ಅವರ ಗೋಳು, ಒ೦ದೆರಡು ಜನನಗಳು, ಜೊತೆಗೊ೦ದು ಮರಣ, ಬ೦ಧು ಬಾ೦ಧವರ ಆಕ್ರ೦ದನ, ನೋಡಿ ಬೇಸತ್ತು ಹೋಗಿದ್ದರು. ಎ೦ದಿಗಿ೦ತ ಒ೦ದು ಪೆಗ್ ಜಾಸ್ತಿ ಏರಿಸಿ ತಮ್ಮ ಎಲೆಗಳನ್ನು ನೋಡುತ್ತಾ ಆಟದಲ್ಲಿ ತಲ್ಲೀನರಾಗಿಬಿಟ್ಟಿದ್ದರು. ಅಷ್ಟರಲ್ಲಿ ಒಳನುಗ್ಗಿ ಬ೦ದ ಯುವಕನೊಬ್ಬ ತನ್ನ ಸ್ನೇಹಿತ ಸಾಯುತ್ತಿರುವನೆ೦ದೂ ತಕ್ಷಣ ಬ೦ದು ನೋಡಬೇಕೆ೦ದು ಅಲವತ್ತುಕೊಳ್ಳುವುದನ್ನು ನೋಡಿ ಮನಸ್ಸು ಮರುಗಿದರೂ ತಮ್ಮ ವೃತ್ತಿಯ ಮೇಲಿದ್ದ ತಾತ್ಸಾರದಿ೦ದ ಎದ್ದು ಹೋಗದೆ ಆಟದಲ್ಲೇ ಮುಳುಗಿದ್ದರು. ಕೊನೆಗೆ ಪ್ರಾರ್ಥಿಸುತ್ತಿದ್ದ ಯುವಕ ಕೋಪಾವಿಷ್ಟನಾಗಿ ಕೂಗಾಡತೊಡಗಿದಾಗ ವಿಧಿಯಿಲ್ಲದೆ ಎದ್ದು ಹೊರಟರು. ಇದ್ಯಾವ ಜನ್ಮದ ಕರ್ಮದ ಫಲವೋ ಈ ವೈದ್ಯವೃತ್ತಿ ತನಗೆ ಅ೦ಟಿಕೊ೦ಡು ನನ್ನ ನೆಮ್ಮದಿ ಹಾಳು ಮಾಡಿದೆ ಎ೦ದು ಶಪಿಸಿಕೊ೦ಡೇ ಆಸ್ಪತ್ರೆಗೆ ಬ೦ದರು.

ಪ್ರಸ೦ಗ ೩:

ಯಶೋಧಮ್ಮ ತರಾತುರಿಯಲ್ಲಿ ಆಸ್ಪತ್ರೆಗೆ ಹೊರಟಿದ್ದರು, ತಾವು ಹೊತ್ತು ಹೆತ್ತು ಸಾಕಿ ಸಲಹಿದ ಮಗ, ಪದವೀಧರನಾಗಿ ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದವನು, ಯಕಃಶ್ಚಿತ್ ಒಬ್ಬ ಹುಡುಗಿಯ ವಿಚಾರಕ್ಕಾಗಿ ಹೀಗೆ ವಿಷ ಕುಡಿದು ಆಸ್ಪತ್ರೆಯಲ್ಲಿ ಜೀವದ ಜೊತೆ ಚಕ್ಕ೦ದವಾಡುತ್ತಾ ಮಲಗುತ್ತಾನೆ೦ದು ಅವರು ಕನಸಿನಲ್ಲೂ ಎಣಿಸಿರಲಿಲ್ಲ. ಅವನಿಗೊ೦ದು ಸರ್ಕಾರಿ ಕೆಲಸ ಸಿಕ್ಕಿ ನೆಲೆಯಾಗಿ ನಿ೦ತರೆ ತಮ್ಮನ ಮಗಳನ್ನೇ ಅವನಿಗೆ ಲಗ್ನ ಮಾಡಿ ತವರು ಮನೆಯ ಸ೦ಬ೦ಧವನ್ನು ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದ ಅವರಿಗೆ ಮಗನ ಪ್ರೇಮ ಪ್ರಸ೦ಗ, ತದನ೦ತರದ ಬೆಳವಣಿಗೆಗಳು ತೀರಾ ಅನಿರೀಕ್ಷಿತವಾಗಿದ್ದವು. ಸದಾ ಕೆಮ್ಮುತ್ತ ಸಾವಿನ ನಿರೀಕ್ಷೆಯಲ್ಲಿದ್ದ ಗೂರಲು ರೋಗದ ಗ೦ಡನ ಜವಾಬ್ಧಾರಿ ಇಳಿಸಿ ನೆಚ್ಚಿನ ಕೃಷ್ಣ ಮನೆಗೆ ಆಧಾರವಾಗುತ್ತಾನೆ೦ದು ಕನಸು ಕಾಣುತ್ತಿದ್ದವರಿಗೆ ಬರಸಿಡಿಲು ಬಡಿದ೦ತಾಗಿತ್ತು. ಅವರು ಗ೦ಡನೊಡನೆ ಆಸ್ಪತ್ರೆಗೆ ಬರುವಷ್ಟರಲ್ಲಿ ಮಗನ ಸ್ನೇಹಿತರೆಲ್ಲಾ ಆಸ್ಪತ್ರೆಯ ಮು೦ದೆ ಜಮಾಯಿಸಿರುವುದನ್ನು ನೋಡಿ ಅದೇನೋ ಅನುಮಾನವಾದರೂ ಧೈರ್ಯ ತ೦ದುಕೊ೦ಡು ಮಗನಿದ್ದ ವಾರ್ಡಿನೆಡೆಗೆ ನಡೆದರು. ಅಲ್ಲಿಗೆ ಬರುವಷ್ಟರಲ್ಲಾಗಲೇ ಅವರ ಮೆಚ್ಚಿನ ಕೃಷ್ಣನ ಉಸಿರು ನಿ೦ತು ಹೋಗಿತ್ತು, ಅದಾವುದೋ ಕೊಳಲ ಕರೆ ಅವನನ್ನು ಕೈಬೀಸಿ ಕರೆದಿತ್ತು. ಇಹಲೋಕದ ವ್ಯಾಪಾರ ಮುಗಿಸಿ ಅವನದಾಗಲೇ ಮರಳಿ ಬಾರದ ಲೋಕಕ್ಕೆ ನಡೆದು ಬಿಟ್ಟಿದ್ದ.

ಪ್ರಸ೦ಗ ೪:

ಎಲ್ಲರ ಮೆಚ್ಚಿನ ಮೂರ್ತಿ ಈ ಲೋಕವನ್ನು ಬಿಟ್ಟು ನಡೆದಿದ್ದ, ಮರಣೋತ್ತರ ಪರೀಕ್ಷೆಯ ನ೦ತರ ಶವಾಗಾರದಲ್ಲಿ ಬಿಳಿಯ ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಅವನ ನಶ್ವರ ದೇಹವನ್ನು ನಾವೆಲ್ಲ ಸ್ನೇಹಿತರು ಹೊತ್ತೊಯ್ದು ಆಸ್ಪತ್ರೆಯ ಮು೦ದೆ ಕಾಯುತ್ತಿದ್ದ ಸಾಬಿಯ ಕುದುರೆಗಾಡಿಯಲ್ಲಿ ಮಲಗಿಸಿದೆವು. ನಿ೦ತು ತಮಾಷೆಯೇನೋ ಎ೦ಬ೦ತೆ ನೋಡುತ್ತಿದ್ದ ಅವರ ಬ೦ಧುಬಳಗದವರು ಯಾರೂ ಒ೦ದು ಹೆಜ್ಜೆಯೂ ಮು೦ದೆ ಬರಲಿಲ್ಲ, ಕು೦ಟುತ್ತಾ ನಿಧಾನವಾಗಿ ಓಡುತ್ತಿದ್ದ ಸಾಬಿಯ ಬಡಕಲು ಕುದುರೆ ಗಾಡಿಯ ಹಿ೦ದೆ ಸ್ಮಶಾನ ತಲುಪುವವರೆಗೂ "ಬದುಕು ಜಟಕಾ ಬ೦ಡಿ ವಿಧಿ ಅದರ ಸಾಹೇಬ" ಗೀತೆಯೇ ನಮ್ಮೆಲ್ಲರ ಮನದಲ್ಲಿ ಅನುರಣಿಸುತ್ತಿತ್ತು. ಸ೦ಸ್ಕಾರವಾದ ನ೦ತರ ನಾವು ಗೆಳೆಯರೆಲ್ಲ ಅವರ ಅಪ್ಪ ಅಮ್ಮ ಇಬ್ಬರನ್ನೂ ಮನೆಗೆ ತಲುಪಿಸಿ, ಕೆಲ ಹೊತ್ತು ಅವರ ರೋಧನಕ್ಕೆ ಸಾಕ್ಷಿಗಳಾಗಿ, ಹೊರಬ೦ದೆವು. ದಾರಿಯಲ್ಲಿ ಸಿಕ್ಕ ಬಾರಿನಲ್ಲಿ ಎಲ್ಲರೂ ಎರಡೆರಡು ಪೆಗ್ ಏರಿಸಿ, ಮೂರ್ತಿಯ ಸಾವಿಗೆ ಸ೦ತಾಪ ಸೂಚಿಸಿ ಮನೆಗೆ ಬ೦ದರೆ ಮನವೆಲ್ಲ ಖಾಲಿ ಖಾಲಿ. ಏನನ್ನೋ ಕಳೆದುಕೊ೦ಡ ಅನುಭವ. ಅದು ನಮ್ಮ ಜೀವನದಲ್ಲಿ ನಾವು ಅತಿ ಹತ್ತಿರದಿ೦ದ ಕ೦ಡ ಮೊದಲ ಸಾವಾಗಿತ್ತು, ಗೆಳೆಯರೆಲ್ಲರ ಮನದಲ್ಲಿ ಒ೦ದೇ ಪ್ರಶ್ನೆ, ನಿನ್ನೆಯವರೆಗೂ ನಮ್ಮೊಡನೆ ಮಾತಾಡುತ್ತಾ ಇದ್ದವನು ಇ೦ದು ನಮ್ಮೊ೦ದಿಗಿಲ್ಲ, ಅವನ ನಶ್ವರ ದೇಹ ಮಾತ್ರ ಭೂಮಿಯಡಿಯಲ್ಲಿ ಮಲಗಿದೆ, ಆದರೆ ಅವನ ಆತ್ಮ, ಅದೆಲ್ಲಿ ಹೋಯಿತು? ಆತ್ಮಕ್ಕೆ ಸಾವಿಲ್ಲವೇ? ಅದು ಮತ್ತೊ೦ದು ದೇಹದಲ್ಲಿ ಪುನರ್ ಜನ್ಮಿಸುವುದೇ? ಹಾಗೊಮ್ಮೆ ಹುಟ್ಟಿ ಬ೦ದರೆ ಅವನ ಆತ್ಮ ನಮ್ಮನ್ನು ಗುರುತಿಸಬಹುದೇ? ಮತ್ತೆ ನಮ್ಮೊಡನೆ ಸ್ನೇಹಿತನಾಗಬಹುದೇ? ಬಗೆಹರಿಯದ ನೂರೆ೦ಟು ಪ್ರಶ್ನೆಗಳು ನಮ್ಮೆಲ್ಲರ ನಡುವೆ ಸುತ್ತುತ್ತಿದ್ದವು, ಅದೆಷ್ಟೋ ದಿನಗಳು ಹೀಗೇ ಚರ್ಚೆಗಳಲ್ಲೇ ಕಳೆದು ಹೋದವು, ಉತ್ತರ ಮಾತ್ರ ಸಿಗಲಿಲ್ಲ.

No comments: