ನಮ್ಮ ಮಲೆನಾಡಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಓ ಮಳೆರಾಯ,,,
ಈ ಕಾಂಕ್ರೀಟು ಕಾಡಿಗೂ ಬಂದು ಒಂದಿಷ್ಟು ತಂಪನೆರೆಯಲಾರೆಯಾ?
ಮರಳುಗಾಡಿನ ಸುಡುಬೆಂಕಿಯ ಗಾಳಿಯ ಹೊಡೆತಕೆ ನಲುಗಿರುವ
ನಿನ್ನ ಪ್ರಿಯತಮೆ ಇಳೆಯನೊಂದಿಷ್ಟು ರಮಿಸಿ ತಣಿಸಲಾರೆಯಾ ?
ಹವಾನಿಯಂತ್ರಣದಿಂದ ಹೊರಬಂದರೆ ಸುಡುವೆಮ್ಮ ಮೈಯನು
ನಿನ್ನ ತಣ್ಣನೆಯ ಸ್ಪರ್ಶದಿಂದೊಮ್ಮೆ ಪುಳಕಿತಗೊಳಿಸಲಾರೆಯಾ?
ಇಲ್ಲಿಯೂ ಒಮ್ಮೆ ಕುಂಭದ್ರೋಣದಿ ನೀ ಆರ್ಭಟಿಸುವ ಆ ಘಳಿಗೆಯ
ಪುನರಾವರ್ತಿಸಿ ಮನೆ ಬಿಟ್ಟು ಬಂದವರ ಮನಕೆ ಹರ್ಷ ನೀಡೆಯಾ?
ಬಂಧು ಬಾಂಧವರ, ಹಿರಿ ಕಿರಿಯರ ಗೆಳೆಯ ಗೆಳತಿಯರ ಎಲ್ಲರ
ಒಡನಾಟದಿಂದ ದೂರವಿರುವ ಅತೃಪ್ತ ಮನಗಳ ನೀ ಕಾಣೆಯಾ?
ಬಾರಯ್ಯ,,ಬಾರಯ್ಯ ಮಳೆರಾಯ ಬಿಡದೆ ಬಾರಯ್ಯ ಮಳೆರಾಯ
ತಾರಯ್ಯ,, ನೀ ತಾರಯ್ಯ ಬೆಂದ ಮನಗಳಿಗೆ ತುಸು ನೆಮ್ಮದಿಯ ...!
ಚಿತ್ರ: ಅಂತರ್ಜಾಲದಿಂದ.
No comments:
Post a Comment