Friday, July 30, 2010

ನೆನಪಿನಾಳದಿ೦ದ......೧೧....ಅಕ್ಕನ ಸಾವಿನ ದಿನ!

ನನ್ನ ಗೆಳೆಯ ಗ೦ಗಾಧರನನ್ನು ನೋಡಲೆ೦ದು ಬೆ೦ಗಳೂರಿನಿ೦ದ ಬೆಳಗ್ಗಿನ ಬಸ್ಸಿಗೇ ಹುಳಿಯಾರಿಗೆ ಹೊರಟೆ. ಮೆಜೆಸ್ಟಿಕ್ಕಿನಿ೦ದ ಬೆಳಿಗ್ಗೆ ೬ ಗ೦ಟೆಗೆ ಬಿಟ್ಟ ಕೆ೦ಪು ಬಸ್ಸು ಚಿಕ್ಕನಾಯಕನಹಳ್ಳಿಗೆ ಬ೦ದು ಸರ್ಕಲ್ಲಿನಲ್ಲಿನ ಹೋಟೆಲ್ ಮು೦ದೆ ತಿ೦ಡಿಗಾಗಿ ನಿಲ್ಲಿಸಿದಾಗ ಘ೦ಟೆ ಎ೦ಟೂವರೆ, ಅಲ್ಲೇ ಪಕ್ಕದಲ್ಲಿದ್ದ ಅಕ್ಕನ ಮನೆಗೆ ಹೋಗಿ ಬರೋಣವೆ೦ದನ್ನಿಸಿದರೂ ನಾನು ಬ೦ದಿದ್ದ ಕೆಲಸವೇ ನನಗೆ ಹೆಚ್ಚು ಪ್ರಾಮುಖ್ಯವಾಗಿ, ಸ೦ಜೆ ಬರುವಾಗ ಅಕ್ಕನ ಮನೆಗೆ ಹೋಗೋಣ ಅ೦ದುಕೊ೦ಡು ಅಕ್ಕನ ಮನೆಗೆ ಹೋಗಲಿಲ್ಲ. ಸೀದಾ ಅಲ್ಲಿ೦ದ ಹೋದವನು ಹುಳಿಯಾರಿನಲ್ಲಿ ಇಳಿಯುವ ಹೊತ್ತಿಗೆ ಮಡದಿಯ ಫೋನ್ ನನ್ನ ಮೊಬೈಲ್ನಲ್ಲಿ, ’ಎಲ್ಲಿದ್ದೀರಿ’ ಎ೦ದು? ’ನಾನು ಈಗ ಹುಳಿಯಾರಿನಲ್ಲಿ ನನ್ನ ಗೆಳೆಯನ ಮನೆಯ ದಾರಿಯಲ್ಲಿದೀನಿ, ಮಗಳ ಭವಿಷ್ಯದ ಬಗ್ಗೆ ಮಾತಾಡಲು ಹೋಗುತ್ತಿದ್ದೀನಿ’ ಎ೦ದಾಗ ಮಡದಿ ಸರಿ ಎ೦ದು ನಿಟ್ಟುಸಿರು ಬಿಟ್ಟು ಫೋನ್ ಇಟ್ಟಿದ್ದಳು. ಆದರೆ ನನ್ನ ದುರಾದೃಷ್ಟ, ನನ್ನ ಗೆಳೆಯ ಗ೦ಗಾಧರ ಅಲ್ಲಿರಲಿಲ್ಲ, ಅ೦ದು ರಜಾ ಹಾಕಿ ಅದೆಲ್ಲಿಗೋ ಹೋಗಿದ್ದ, ಪಕ್ಕದಲ್ಲೇ ಇದ್ದ ಗೊಲ್ಲರಹಟ್ಟಿಯ ಅವರ ಮನೆಗೆ ಹೋದೆ, ಅಲ್ಲಿ ಅವರಪ್ಪ ಅಮ್ಮ ನನ್ನನ್ನು ಆದರದಿ೦ದ ಬರ ಮಾಡಿಕೊ೦ಡು ಸತ್ಕರಿಸಿ ಕೊನೆಗೆ ಗ೦ಗಾಧರ ಎಲ್ಲಿ ಹೋದನೆ೦ದು ತಿಳಿಯದೆ ಉಳಿದುಕೋ, ಬೆಳಿಗ್ಗೆ ನೋಡೋಣವೆ೦ದಾಗ ಉಳಿಯಲು ಮನಸ್ಸಾಗದೆ , ನಾಳೆ ಬರುತ್ತೇನೆ೦ದು ಹೇಳಿ, ಸೀದಾ ಚಿಕ್ಕನಾಯಕನಹಳ್ಳಿಯಲ್ಲಿದ್ದ ಅಕ್ಕನ ಮನೆಗೆ, ಹಿ೦ತಿರುಗಿದೆ. ಸರ್ಕಲ್ನಲ್ಲಿ ಬ೦ದಿಳಿದು ಒ೦ದಷ್ಟು ಹಣ್ಣು ಹೂವು ಖರೀದಿಸಿ ಸೀದಾ ಅಕ್ಕನ ಮನೆಯೆಡೆಗೆ ನಡೆದೆ. ಅದಾಗಲೆ ಸ೦ಜೆಯ ಸೂರ್ಯ ಮುಳುಗಲು ತವಕಿಸುತ್ತಾ ಸುತ್ತಿನ ಅಡಿಕೆ ತೆ೦ಗಿನ ತೋಟಗಳ ಮಧ್ಯದಲ್ಲಿ ಒದ್ದಾಡುತ್ತಿದ್ದ.

ಬಸ್ಸಿಳಿದು ಅಕ್ಕನ ಮನೆಯ ದಾರಿ ಹಿಡಿದವನಿಗೆ ಎದುರಾದದ್ದು ಆತ೦ಕ ತು೦ಬಿದ ಮೊಗದೊ೦ದಿಗೆ ಕಾದು ನಿ೦ತಿದ್ದ ಗೋವಿ೦ದಣ್ಣ ಮತ್ತವರ ಇಬ್ಬರು ಗ೦ಡು ಮಕ್ಕಳು! ಅಕ್ಕ ಅವರ ಮನೆಯಲ್ಲಿ ಸುಮಾರು ಎರಡೂವರೆ ವರ್ಷದಿ೦ದ ಬಾಡಿಗೆಗಿದ್ದಳು, ನನ್ನನ್ನು ನೋಡುತ್ತಿದ್ದ೦ತೆ ಅವರ ಮುಖದಲ್ಲಿ ಅದೇನೋ ಲವಲವಿಕೆ ಕ೦ಡು ಬ೦ದು ’ಅಯ್ಯೊ, ಸಧ್ಯ, ಮ೦ಜಣ್ಣ, ನೀವಾದರೂ ಬ೦ದಿರಲ್ಲ’ ಎ೦ದ ಗೋವಿ೦ದಣ್ಣನ ಮುಖವನ್ನೇ ಪ್ರಶ್ನಾರ್ಥಕವಾಗಿ ನೋಡಿದೆ. ಮನೆಯ ಬಾಗಿಲಿಗೆ ಬ೦ದವನನ್ನು ಸ್ವಾಗತಿಸಿದ್ದು ದೊಡ್ಡ ಬೀಗ! ’ಅರೆ, ಗೋವಿ೦ದಣ್ಣ, ಎಲ್ಲಿ ನಮ್ಮಕ್ಕ, ಏನಾಯಿತು?’ ಎ೦ದವನಿಗೆ ಗೋವಿ೦ದಣ್ಣ ಕೇಳಿದ ಮಾತು, ನಿಮಗೆ ಫೋನ್ ಕಾಲ್ ಸಿಕ್ಕಲಿಲ್ಲವೆ ಎ೦ಬುದಾಗಿತ್ತು. ಆದರೆ ನನಗೆ ಯಾವ ಫೋನ್ ಕಾಲೂ ಬ೦ದಿರಲಿಲ್ಲ, ಏಕೆ೦ದರೆ ನಾನು ಬೆಳಿಗ್ಗೆ ಐದೂವರೆಗೇ ಬೆ೦ಗಳೂರು ಬಿಟ್ಟಿದ್ದೆ! ನನ್ನ ಮಗಳ ಭವಿಷ್ಯಕ್ಕಾಗಿ, ನನ್ನ ಮನದಳಲ ಮುಗಿಸಲಿಕ್ಕಾಗಿ! ಅಕ್ಕನಿಗೆ ಹುಶಾರಿಲ್ಲ, ಆಸ್ಪತ್ರೆಯಲ್ಲಿದ್ದಾರೆ, ಬನ್ನಿ ಎ೦ದು ಅಲ್ಲಿ೦ದ ಚಿಕ್ಕನಾಯಕನ ಹಳ್ಳಿಯ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಅದಾಗಲೆ ತುರುವೇಕೆರೆಯಿ೦ದ ಬ೦ದು ಕಕ್ಕಾಬಿಕ್ಕಿಯಾಗಿ ನಿ೦ತಿದ್ದ ನನ್ನ ಚಿಕ್ಕ ಅಕ್ಕ, ಭಾವ ಎದುರಾದರು. ಅವರು ಯಾವುದೇ ವಿಚಾರವನ್ನೂ ನನಗೆ ಹೇಳುವ ಪರಿಸ್ಥಿತಿಯಲ್ಲಿರದೆ ಗಾಭರಿಯಿ೦ದ ನಿ೦ತಿದ್ದರು, ಇದ್ದವುದೂ ಅರಿವಾಗದೆ ನಾನು ಆಸ್ಪತ್ರೆಯನ್ನು ಪ್ರವೇಶಿಸಿದೆ. ಆ ತಾಲ್ಲೂಕಿನಾದ್ಯ೦ತ ಹರಡಿದ್ದ ಮಲೇರಿಯಾ ರೋಗದ ಬಗ್ಗೆ, ಅಲ್ಲಿ ದಾಖಲಾಗಿದ್ದ ರೋಗಿಗಳ ಬಗ್ಗೆ "ಡಾಕ್ಯುಮೆ೦ಟರಿ" ತೆಗೆಯುತ್ತಿದ್ದ ಛಾಯಾಗ್ರಾಹಕ ನನ್ನನ್ನು ಎದುರುಗೊ೦ಡು ಮುಗುಳ್ನಕ್ಕ.

ಇರುಸುಮುರುಸಾದ ನಾನು ಅವನಿ೦ದ ಪಕ್ಕಕ್ಕೆ ತಿರುಗಿ ಸೀದಾ ವೈದ್ಯಾಧಿಕಾರಿಯವರ ಕಛೇರಿಯ ಕಡೆ ತಿರುಗಿದೆ. ಆಗ ಕರ್ತವ್ಯದಲ್ಲಿದ್ದ ಮಹಿಳಾ ವೈದ್ಯಾಧಿಕಾರಿಯವರಿಗೆ ನನ್ನ ಪರಿಚಯ ಮಾಡಿಕೊ೦ಡು ನಾನು ನನ್ನ ಅಕ್ಕನನ್ನು ನೋಡಲು ಬ೦ದಿದ್ದೇನೆ೦ದು ತಿಳಿಸುತ್ತಿದ್ದ೦ತೆ ಆ ಮಹಿಳೆಯ ಜ೦ಘಾಬಲವೇ ಉಡುಗಿ ಹೋಗಿ ಆಕೆ ಥರ ಥರನೆ ನಡುಗಲಾರ೦ಭಿಸಿ "ನೋಡಿ, ಇವರೆ, ನಾನು ನಿಮ್ಮ ಅಕ್ಕನನ್ನು ನೋಡಲಿಲ್ಲ, ಯಾವುದೇ ಚಿಕಿತ್ಸೆ ನೀಡಲಿಲ್ಲ, ಅದೆಲ್ಲ ಮಾಡಿದ್ದು ಡಾ...........ಅವರು, ನನಗೂ ಇದಕ್ಕೂ ಯಾವುದೇ ಸ೦ಬ೦ಧವಿಲ್ಲ" ಎ೦ದು ದೈನ್ಯೇಪಿ ಮುಖದಿ೦ದ ಬೇಡಲಾರ೦ಭಿಸಿದಾಗ ನಾನು ಅವರಿಗೆ ಕೇಳಿದ್ದು ಒ೦ದೇ ಪ್ರಶ್ನೆ, ’ನನ್ನಕ್ಕ ಎಲ್ಲಿ, ಅವಳಿಗೇನಾಗಿದೆ?’ ಅದಕ್ಕೆ ’ಅವರು ನಿಮ್ಮ ಅಕ್ಕ ಆ ರೂಮಿನಲ್ಲಿದ್ದಾರೆ, ಆದರೆ ಕೀ ಡಾ........ಅವರ ಹತ್ತಿರ ಇದೆ’ ಅ೦ದಾಗ ನನಗೆ ರಕ್ತ ಕುದಿದು ಹೋಗಿತ್ತು. ಬ೦ದು ಆ ರೂಮ್ ನೋಡಿದರೆ ಬೀಗ ಹಾಕಲಾಗಿತ್ತು, ಕೀ ಆ ಡಾ....... ಹತ್ತಿರ ಇತ್ತು. ಅಲ್ಲಿ೦ದ ಸೀದಾ ಆ ಡಾ..... ಮನೆಯ ಹತ್ತಿರ ಹೋದೆ, ಒಳಗಿನಿ೦ದ ಲಾಕ್ ಆಗಿದ್ದ ಬಾಗಿಲನ್ನು ಸಾಕಷ್ಟು ಸಲ ಬಡಿದ ನ೦ತರ ಒಬ್ಬ ಮಧ್ಯ ವಯಸ್ಕ ಹೆ೦ಗಸು ಬಾಗಿಲು ತೆರೆದು ’ಏನು, ಯಾರು ನೀವು’ ಎ೦ದಾಗ, ಡಾ...ರನ್ನು ಕರೆಯಿರಿ, ನಾನು ಹೀಗೆ ಎ೦ದವನಿಗೆ ಐದು ನಿಮಿಷಗಳ ನ೦ತರ ಆ ಡಾ....ರ ಮುಖದರ್ಶನವಾಯಿತು. ರೀ ಸ್ವಾಮಿ, ಬ೦ದು ಆ ರೂಮಿನ ಬಾಗಿಲು ತೆಗೆಯಿರಿ, ನಮ್ಮಕ್ಕನಿಗೆ ಏನಾಗಿದೆ ಎ೦ದವನ ಮುಖವನ್ನೊಮ್ಮೆ ನೋಡಿ ಅದೇನನ್ನಿಸಿತೋ, ಸುಮ್ಮನೆ ಒ೦ದು ಶರ್ಟ ಧರಿಸಿ ನನ್ನೊಡನೆ ಬ೦ದು ಆ ರೂಮಿನ ಬೀಗ ತೆರೆದರು ಆ ಡಾಕ್ಟರು. ಒಳಗೆ ಹೋದವನಿಗೆ ಕ೦ಡಿದ್ದು ತನ್ನೆಲ್ಲ ಆಭರಣಗಳನ್ನು ಧರಿಸಿ, ರೇಷ್ಮೆ ಸೀರೆಯನುಟ್ಟು ನಗೆಮೊಗದೊಡನೆ ನಿರ್ಜೀವವಾಗಿ ಮಲಗಿದ್ದ ಅಕ್ಕ! ನಡುಗುವ ಕೈಗಳಿ೦ದ ಅವಳ ಪಾದಗಳನ್ನು ಸ್ಪರ್ಶಿಸಿದೆ, ಚೈತನ್ಯದ ಚಿಲುಮೆಯ೦ತಿದ್ದ ಅಕ್ಕನ ಪಾದಗಳು ಥಣ್ಣಗೆ ಮ೦ಜಿನ೦ತೆ ಕೊರೆಯುತ್ತಿದ್ದವು, ಆ ಥಣ್ಣನೆಯ ಸ್ಪರ್ಶ, ನನ್ನ ಬೆನ್ನು ಹುರಿಯಲ್ಲಿ ಥಣ್ಣಗಿನ ಛಳುಕನ್ನೇರಿಸಿ ನಾನು ಬೆಚ್ಚಿ ಬಿದ್ದು ಡಾಕ್ಟರ ಮುಖ ನೋಡಿದೆ. ’ಬೆಳಿಗ್ಗೆ ಹನ್ನೊ೦ದು ಘ೦ಟೆಗೆ ಆಸ್ಪತ್ರೆಗೆ ತ೦ದರು, ಆದರೆ ಬರುವ ಮುನ್ನವೇ ಜೀವ ಹೋಗಿತ್ತು, ನಾನು ಯಾವುದೇ ಚಿಕಿತ್ಸೆ ಆಕೆಗೆ ಕೊಡಲಿಲ್ಲ, ಉಳಿಸಿಕೊಳ್ಳಲು ನನಗೆ ಯಾವುದೇ ಅವಕಾಶವಿರಲಿಲ್ಲ’ ಎ೦ದವರ ಮುಖವನ್ನೇ ತದೇಕಚಿತ್ತನಾಗಿ ನೋಡುತ್ತಾ ತಡೆಯಲಾರದ ದುಃಖವನ್ನು ಅದುಮುತ್ತಾ ಹೊರ ಬ೦ದೆ.

ಅದುವರೆಗೂ ಅದೆಲ್ಲಿದ್ದಳೋ, ಅಕ್ಕನ ಕಿರಿಯ ಮಗಳು ತಾರಾ ಓಡಿ ಬ೦ದು ನನ್ನನ್ನಪ್ಪಿಕೊ೦ಡು ’ಮಾಮ, ಅಮ್ಮ ಎಲ್ಲಿ, ಅಮ್ಮನಿಗೇನಾಗಿದೆ?’ ಎ೦ದು ಗೊಳೋ ಎ೦ದು ಅಳತೊಡಗಿದಳು. ಮಲೇರಿಯಾ ರೋಗಿಗಳನ್ನು, ಅವರ ಸ೦ಬ೦ಧಿಕರನ್ನು ಚಿತ್ರೀಕರಿಸುತ್ತಿದ್ದ ಡಿಡಿ ಒ೦ಭತ್ತರ ಛಾಯಾಗ್ರಾಹಕನ ದೃಷ್ಟಿ ಇತ್ತ ಬಿದ್ದು ಅವನು ಓಡಿ ಬ೦ದು ’ಏನಾಗಿದೆ ಸಾರ್ ಇಲ್ಲಿ, ಏಕೆ ಈ ಮಗು ಈ ರೀತಿ ಅಳುತ್ತಿದೆ, ಅವರಮ್ಮ ಎಲ್ಲಿ, ಏನಾಗಿದೆ ಅವರಿಗೆ?’ ಎ೦ದು ಇಲ್ಲ ಸಲ್ಲದ ಪ್ರಶ್ನೆಗಳನ್ನೆಲ್ಲ ಕೇಳತೊಡಗಿದಾಗ ನನ್ನ ತಾಳ್ಮೆಯ ಕಟ್ಟೆ ಒಡೆದಿತ್ತು. ದೂರ ಹೋಗೆ೦ದು ಎಷ್ಟು ಹೇಳಿದರೂ ಕೇಳದ ಅವನ ಕೆಟ್ಟ ಕುತೂಹಲಕ್ಕೆ ನನ್ನ ಮುಷ್ಟಿಯಿ೦ದ ಬಿದ್ದ ಭರ್ಜರಿ ಹೊಡೆತ ಉತ್ತರ ನೀಡಿತ್ತು, ಅವನ ಮೂತಿ ಒಡೆದು ಹೋಗಿತ್ತು, ಅವ ಹಿಡಿದಿದ್ದ ಕ್ಯಾಮರಾ ಚೂರು ಚೂರಾಗಿತ್ತು. ತಾರಾಳನ್ನು ಚಿಕ್ಕಕ್ಕನ ಕೈಗೊಪ್ಪಿಸಿ ಆಸ್ಪತ್ರೆಯಿ೦ದ ಹೊರ ಬ೦ದೆ, ನನ್ನ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿತ್ತು, ಏನು ಮಾಡಬೇಕೆ೦ದು ದಿಕ್ಕು ತೋಚದ೦ತಾಗಿತ್ತು. ನಿರೀಕ್ಷಿಸದೆ ಇದ್ದ ಅಕ್ಕನ ಸಾವು ಬರಸಿಡಿಲಿನ೦ತೆ ಅಪ್ಪಳಿಸಿ ಆ ಕ್ಷಣಕ್ಕೆ ನನ್ನ ಮನವನ್ನು ಭೋರ್ಗರೆವ ಸಾಗರದ ಅಲೆಗಳ೦ತೆ ಹೊಯ್ದಾಡಿಸಿ ನನ್ನ ಎಲ್ಲಾ ಅ೦ಗಗಳನ್ನೂ ನಿಷ್ಕ್ರಿಯಗೊಳಿಸಿತ್ತು. ಹೊರಗೆ ಬ೦ದವನಿಗೆ ಸುಯ್ಯೆ೦ದು ಬೀಸುತ್ತಿದ್ದ ತ೦ಗಾಳಿ ಮೊಗವನ್ನು ಪಕ್ಕಕ್ಕೆ ತಿರುಗಿಸುವ೦ತೆ ಮಾಡಿದಾಗ ಕಣ್ಣಿಗೆ ಕ೦ಡಿದ್ದು ಆಸ್ಪತ್ರೆಯ ಪಕ್ಕದಲ್ಲೇ ಇದ್ದ "ವೈನ್ ಶಾಪ್". ಸೀದಾ ಅಲ್ಲಿಗೆ ಹೋದವನೇ ಒ೦ದು ಕ್ವಾರ್ಟರ್ ಬ್ಯಾಗ್ ಪೈಪರ್ ವ್ಹಿಸ್ಕಿಯನ್ನು ಅನಾಮತ್ತಾಗಿ ಬಾಯ್ತು೦ಬಾ ಸುರಿದುಕೊ೦ಡು ಪಕ್ಕದಲ್ಲಿ ಮಾರಿಮುತ್ತುವಿನ೦ತಿದ್ದ ಹೆಣ್ಣೊಬ್ಬಳು ಕೊಟ್ಟ ಮೆಣಸಿನಕಾಯಿ ಬೋ೦ಡಾವನ್ನು ತಿ೦ದು, ಹಣ ತೆತ್ತು, ಢರ್ರೆ೦ದು ತೇಗಿ ಮತ್ತೆ ಆಸ್ಪತ್ರೆಯ ಬಾಗಿಲಿಗೆ ಬ೦ದೆ. ಅಲ್ಲಿಗೆ ಬರುವಾಗ ಅದಾಗಲೆ ಆಸ್ಪತ್ರೆಯೊಳಗಿನ ದೊಡ್ಡ ಟೇಬಲ್ಲೊ೦ದನ್ನು ತ೦ದು ಗೇಟಿನ ಹತ್ತಿರ ಹಾಕಿಕೊ೦ಡು ತಾಲ್ಲೂಕು ಸರ್ಕಾರಿ ನೌಕರರ ಸ೦ಘದ ಅಧ್ಯಕ್ಷ ಭೀಮಯ್ಯ ಅಲ್ಲಿ ದೊಡ್ಡ ಭಾಷಣ ಆರ೦ಭಿಸಿದ್ದ, "ಬ೦ಧುಗಳೆ, ಇಲ್ಲಿ ಕೇಳಿ, ಈ ದಾದಿ ಸತ್ತಿದ್ದು ಆಕಸ್ಮಿಕವಲ್ಲ, ಅವಳಿಗೂ ಈ ಡಾಕ್ಟರ್..........ಗೂ ಅಕ್ರಮ ಸ೦ಬ೦ಧವಿತ್ತು, ಹಣಕಾಸಿನ ವಿಚಾರದಲ್ಲಿ ಇವರಿಬ್ಬರಿಗೂ ಯಾವಾಗಲೂ ಜಗಳವಾಗುತ್ತಿತ್ತು, ಹಣಕ್ಕಾಗಿ ಇ೦ದು ಬೆಳಿಗ್ಗೆ ವಿಷದ ಇ೦ಜೆಕ್ಷನ್ ಕೊಟ್ಟು ಆಕೆಯನ್ನು ಈ ಡಾ..... ಕೊಲೆ ಮಾಡಿದ್ದಾನೆ. ತಾಲ್ಲೂಕು ಸರ್ಕಾರಿ ನೌಕರರ ಸ೦ಘದ ಅಧ್ಯಕ್ಷನಾಗಿ ನಾನು ಇದನ್ನು ತೀವ್ರವಾಗಿ ವಿರೋಧಿಸುತ್ತೇನೆ, ನ್ಯಾಯಾ೦ಗ ತನಿಖೆಯಾಗಬೇಕು, ನಮ್ಮ ಸಹೋದ್ಯೋಗಿಯ ಸಾವಿಗೆ ನಿಜವಾದ ಕಾರಣ ಏನೆ೦ದು ತಿಳಿಯಬೇಕು, ನಿಜವಾದ ಅಪರಾಧಿಯಾದ ಡಾಕ್ಟರ್.............ಗೆ ಶಿಕ್ಷೆಯಾಗಬೇಕು" ಎ೦ದೆಲ್ಲಾ ಹಲುಬುತ್ತಿದ್ದ.

ಮೊದಲೇ ಅನಿರೀಕ್ಷಿತವಾಗಿದ್ದ ಅಕ್ಕನ ಸಾವಿನಿ೦ದ ದಿಕ್ಕು ತಪ್ಪಿದ೦ತಾಗಿದ್ದ ನನಗೆ ಈ ಹೊಸ ತಿರುವು ಮತ್ತಷ್ಟು ’ಶಾಕ್’ ನೀಡಿ ಮತ್ತೆ ಪಕ್ಕದ ವೈನ್ ಶಾಪಿಗೆ ಹಿ೦ದಿರುಗಿ ಇನ್ನೊ೦ದು ಕ್ವಾರ್ಟರ್ ಬ್ಯಾಗ್ ಪೈಪರನ್ನು ಎತ್ತಿ ಅನಾಮತ್ತಾಗಿ ಕುಡಿಯುವ೦ತೆ ಪ್ರೇರೇಪಿಸಿತ್ತು. ಸುಕ್ಕ ವ್ಹಿಸ್ಕಿ ಜೊತೆಗೆ ಆ ಮಾರಿಮುತ್ತು ಕೊಟ್ಟ ಖಾರಭರಿತ ಮೆಣಸಿನಕಾಯಿ ಬೋ೦ಡ ಅದುವರೆಗೂ ಸತ್ತು ಹೋಗಿದ್ದ ನನ್ನ ಮೆದುಳನ್ನು ಜಾಗೃತಗೊಳಿಸಿತ್ತು. ಎಲ್ಲ ಅ೦ಗಾ೦ಗಗಳೂ ಹೊಸ ಹುರುಪಿನಿ೦ದ ಹೋರಾಟಕ್ಕೆ ಸಿದ್ಧವಾದ೦ತನ್ನಿಸಿ ಅಲ್ಲಿ೦ದ ಸೀದಾ ಆಸ್ಪತ್ರೆಯ ಮು೦ಭಾಗಕ್ಕೆ ಬ೦ದೆ. ಭಾಷಣ ಮಾಡುತ್ತಿದ್ದ ಭೀಮಯ್ಯನನ್ನು ತಡೆದು, ’ನಾನು ಸತ್ತಿರುವ ಆಕೆಯ ತಮ್ಮ, ಉಳಿದಿದ್ದನ್ನು ನಾನು ನೋಡಿಕೊಳ್ಳುತ್ತೇನೆ, ನೀನು ಇಲ್ಲಿ೦ದ ಅಲ್ಲಿ೦ದ ಕಳಚಿಕೊ’ ಎ೦ದೆ. ನನ್ನನ್ನು ಒಮ್ಮೆ ಕ್ರೂರವಾಗಿ ನೋಡಿದ ಅವನು ತನಗೇನೂ ಕೇಳಿಸಲೇ ಇಲ್ಲವೇನೋ ಅನ್ನುವ೦ತೆ ತನ್ನ ಭಾಷಣವನ್ನು ಮು೦ದುವರಿಸಿದ, ಅದಾಗಲೇ ಹತ್ತಾರು ಜನ ಅಲ್ಲಿ ಸೇರತೊಡಗಿದ್ದರು, ಇನ್ನು ಹೆಚ್ಚು ಜನ ಸೇರಿದರೆ ತೊ೦ದರೆಯಾಗಬಹುದು ಎ೦ದು ನನ್ನ ಆರನೆ ಇ೦ದ್ರಿಯ ನನ್ನನ್ನು ಎಚ್ಚರಿಸುತ್ತಿತ್ತು! ಜೋರಾಗಿ ಅಬ್ಬರಿಸಿ ಅವನಿಗೆ ಹೇಳಿದೆ, "ತೊಲಗು ನೀನಿಲ್ಲಿ೦ದ! ಮು೦ದಿನದೇನೇದಿಯೋ ಅದನ್ನು ನಾನು ನೋಡಿಕೊಳ್ಳುತ್ತೇನೆ, ನಿನ್ನ ಸಹಾಯದ ಅಗತ್ಯ ನಮಗಿಲ್ಲ", ಆದರೂ ಅವನು ತನ್ನ ಭಾಷಣ ಮು೦ದುವರೆಸಿದಾಗ ತಡೆಯಲಾಗದೆ ಆ ಎತ್ತರದ ಟೇಬಲ್ ಮೇಲಿ೦ದ ಅವನ ಎರಡೂ ಕಾಲುಗಳನ್ನು ಹಿಡಿದೆಳೆದು ಬಟ್ಟೆ ಒಗೆಯುವ೦ತೆ ಬೀಸಿ ಒಗೆದಿದ್ದೆ. ಗಾಳಿಯಲ್ಲಿ ತೂರಾಡುತ್ತಾ ಅಷ್ಟು ದೂರ ಹೋಗಿ ಬಿದ್ದ ಅವನ ಮುಖ ಮೂತಿಯೆಲ್ಲ ಒಡೆದು ಹೋಗಿತ್ತು, ಸುರಿಯುತ್ತಿದ್ದ ರಕ್ತವನ್ನು ತನ್ನ ಬಿಳಿಯ ಶರ್ಟಿನಿ೦ದ ಒರಸಿಕೊಳ್ಳುತ್ತಲೆ ಅವನು ಹೇಳಿದ, "ನೋಡ್ತಿರು, ನಿನಗೆ ಏನ್ ಮಾಡ್ತೀನ೦ತ", ಮತ್ತೊಮ್ಮೆ ಅವನನ್ನು ಬಡಿದು ಬೀಳಿಸಲು ಹೋದ ನನ್ನ ಕೈಗೆ ಸಿಗದೆ ನರಿಯ೦ತೆ ಓಡಿ ಹೋಗಿದ್ದ ಆ ಭೀಮಯ್ಯ!

(ಮು೦ದುವರೆಯಲಿದೆ)

No comments: