Sunday, June 30, 2013

ನನಗೆ ಗೊತ್ತೋ ಮಹಾದೇವ.......!

ನನಗೆ ಗೊತ್ತೋ ಮಹಾದೇವ ನೀ ಕೋಪಗಾರನೆಂದು 
ನೀ ಮೂರನೆ ಕಣ್ಣ ತೆರೆದರೆ ಲೋಕವ ಸುಡುವೆಯೆಂದು 
ನನಗೆ ಗೊತ್ತೋ ಮಹಾದೇವ ನೀ ಕೋಪಗಾರನೆಂದು 

ಬ್ರಹ್ಮ ಸೃಷ್ಟಿಸುವ ವಿಷ್ಣು ಹಗಲಿರುಳೆನ್ನದೆ ಕಾಯುವವ 
ನನಗೆ ಗೊತ್ತೋ ಮಹಾದೇವ ನೀ ಲಯಕಾರಕನೆಂದು 
ಪ್ರಶ್ನೆಯಿದು  ಮನದಲಿಂದು ನೀ ಕುರುಡನೇಕಾದೆಯೆಂದು ? 

ನಿನಗೆ ಕಾಣಲಿಲ್ಲವೇ ಭಯೋತ್ಪಾದಕರು ಭ್ರಷ್ಟ ರಾಜಕಾರಣಿಗಳು 
ಅಬಲೆಯರ ಮಾನಭಂಗವ   ಮಾಡುವ ನೀಚ ಕಾಮುಕರು....!
ನಿನ್ನ ಪ್ರಳಯತಾಂಡವಕೆ ಮೋಕ್ಷವನರಸಿ ಬಂದವರೆ ಕಂಡರೆ?

ಕೊಂದೆಯಲ್ಲೋ ಮಹಾದೇವ ನಿನ್ನನರಸಿ ನಿನ್ನ ಕಾಣಲು ಬಂದವರ 
ನಿನಗೆಲ್ಲಿದೆಯೋ ಮತಿ ಮಹಾದೇವ ನನಗೇ ಇಷ್ಟಿಹುದು ದುಃಖವು 
ಅವರ ರಕ್ತಬಂದುಗಳ ನೆನೆಯೋ ನೀ ಆ ಆಕ್ರಂದನವ ಆ ನೋವ 

ನೀ ನಿಷ್ಕರುಣಿಯಾದೆಯೆಂದು  ಜಿಗುಪ್ಸೆಗೊಂಡಿದೆಯೀ ಮನವಿಂದು
ನನಗೆ ಗೊತ್ತೋ ಮಹಾದೇವ ನೀ ಬಲು ಕೋಪಗಾರನೆಂದು ..... !
ತೋರಲೇಕೆಯೋ ಈ ಕೋಪವ ನೀ ಭ್ರಷ್ಟ ಕಾಮುಕರ  ಮೇಲಿಂದು?????

Friday, June 21, 2013

ಅದೆಂಥಾ ಭಯಂಕರ ಘಳಿಗೆಯೇ ಗೆಳತಿ,.......!!

ಎಂದೆಂದೂ ನನ್ನವರೆಂದು ಭಾವಿಸಿದ್ದವರೆಲ್ಲ ನನ್ನವರಲ್ಲ ಎಂದು ಅರಿವಾದಾಗ 
ನಂಬಿಕೆಯ ಬುಡವನ್ನೇ ಅಲ್ಲಾಡಿಸಿದ ಅದೆಂಥಾ ಭಯಂಕರ ಘಳಿಗೆಯೇ ಗೆಳತಿ, 

ಕ್ಷಣ ಮಾತ್ರದಲಿ ಹೃದಯ ಬಡಿತವೇ ನಿಂತು ಹೋದಂತಾಗಿ ಕಣ್ಣು ಕತ್ತಲಾಗಿ 
ಮುಂದಿನ ದಾರಿ ಕಾಣದಾಗಿ ಪ್ರಕ್ಷುಬ್ಧ ಕಡಲಿನಲಿ ಸಿಕ್ಕ ಒಂಟಿ ದೋಣಿಯಂತಾಗಿ 

ದಶಕಗಳ ಸಂಬಂಧಗಳು ಕ್ಷಣಮಾತ್ರದಲಿ ನಶಿಸಿ ಹೋಗಿ ಗುರುತೇ ಉಳಿಯದಾಗಿ 
ಯಾರಿಗೂ ನಾ ಏನೂ ಅಲ್ಲವೆನ್ನುವ ಮಟ್ಟಿಗೆ ಅಪರಿಚಿತನಾಗಿ ಬಾಳುವ ಘಳಿಗೆ 

ಅದೆಷ್ಟು ಕಷ್ಟವೇ ಗೆಳತಿ ಹೊಂದಿಕೊಳಲು ಪಲ್ಲಟವಾದ ಇಂದಿನ ಈ ಪರಿಸ್ಥಿತಿಗೆ
ಭ್ರಮೆಗಳೆಲ್ಲ ಮುಖವಾಡ ಕಳಚಿ ತಮ್ಮ ವಾಸ್ತವ ರೂಪವ ತೋರುವ ಈ ಘಳಿಗೆ 

ಏನೆನ್ನಲಿ ಗೆಳತಿ ಇದನು ಅಮೃತ ಘಳಿಗೆಯೆನಲೆ ವಿಷಪ್ರಾಶನ ಕ್ಷಣವೆನಲೆ 
ಹಾಲು  ಹಾಲಾಹಲವಾದಾಗ  ಸುಕೋಮಲ ಮನದಿ ಕೋಲಾಹಲವೆದ್ದಾಗ...!

Tuesday, June 18, 2013

ಮಧುಮೇಹಿಯಂತೆ ನಾನಿಂದು...... !

ಅಧಿಕೃತವಾಗಿಂದು  ಧೃಡವಾಗಿದೆ ನಾನೊಬ್ಬ ಮಧುಮೇಹಿಯೆಂದು 
ಸವಿಮಾತಿನ ಸಕ್ಕರೆಯ ಎಲ್ಲರಿಗೂ ಹಂಚಿರುವೆ ಆದರೂ ಹೆಚ್ಚೆಂದು 

ನುಡಿದರು  ವೈದ್ಯರು ತಪ್ಪಿಯೂ ಆಲೂ ಅನ್ನ  ತಿನ್ನದಿರೆಂದು ....!
ಅನ್ನಪೂರ್ಣೆಯ ಕ್ಷಮೆ ಕೋರಿ ಅನ್ನ  ತಿನ್ನುವುದ ನಿಲಿಸುವೆ ಇಂದು!!! 

ಗೋಧಿ ಚಪಾತಿ ರಾಗಿಯ ರೊಟ್ಟಿಗಳೇ ಗತಿ ಉದರಕೆ ಮುಂದು ..... 
ರಾಗಿ ಮುದ್ದೆ ಮಾಡಿ ತಿನಿಸಲು ಸಾಗರ ದಾಟಿ ನೀ ಬರುವೆ ಎಂದು.... ?

 ಅಮ್ಮನ ಪ್ರಾಣಪಕ್ಷಿಯ ಅರಿವಿಲ್ಲದೆ ಎಗರಿಸಿದ್ದೆ ನೀ ಅಂದು ... !
ಬಂದಿರುವೆಯಾ ಮರಳಿ ಈಗ ನನ್ನನ್ನೂ ಕಾಡಲೇಬೇಕೆಂದು. ?

ಆದರೂ ತಿಳಿದುಕೋ ಬಂಡೆಯಂಥ ಗಟ್ಟಿ ಹೃದಯವಿದು ನನ್ನದು ..!
ಸುಲಭವಾಗಿ ಜಯಿಸಲಾರೆ, ಕೊಂಡೊಯ್ಯಲಾರೆ ನನ್ನ ನೀನೆಂದೂ.. !!

Saturday, June 8, 2013

ಕುಣಿಯುತಿದೆ ಹಕ್ಕಿ,,,,!

ಮಳೆ ಮುಗಿಲ ಕಂಡು ಹರುಷದಿ ಕುಣಿಯುತಿದೆ ಹಕ್ಕಿ, 
ಹಾರಾಡಿ ಏರಿಳಿದು ಬಾನಗಲ ಜಗ ಸುತ್ತುವಾಸೆಯಲಿ..!

ಬಿಚ್ಚಿದೆ ತನ್ನ ಹಿರಿದಾದ ರೆಕ್ಕೆ, ಚಿಮ್ಮಲು ಆಗಸದೆತ್ತರಕೆ 
ಅಳಿವುದೇನ್, ಉಳಿವುದೇನ್, ನಡೆ ನೀನ್ ಅನಂತದಾಚೆ,

ಸಿದ್ಧವಿದೆ ಹಕ್ಕಿ ಹಾರಲೆತ್ತರಕೆ, ಚಿಮ್ಮುವುದೊಂದೆ ಬಾಕಿ,
ಬೇಡನೆಸೆದ ಬಲೆಗೆ ಸಿಲುಕಿದೆ ಕಾಲು, ಹಾರಲಾಗದು ಹಕ್ಕಿ !

ತಡಬಡಿಸಿದೆ, ಒದ್ದಾಡಿದೆ, ಕೂಗಿದೆ, ಚೀರಿದೆ ಬಿಕ್ಕಿ ಬಿಕ್ಕಿ,,!
ಬೇಡನೋ, ಸಿದ್ಧನಿರುವ ಕರುಣೆಯಿಲ್ಲದೆ ಕೊಲಲು ಕುಕ್ಕಿ ಕುಕ್ಕಿ !! 

ಮಳೆ ಮುಗಿಲ ಕಂಡು ಹರುಷದಿ ಕುಣಿಯುತ್ತಿತ್ತು ಹಕ್ಕಿ ,,,,,
ವಿಧಿರಾಯನ ಅಟ್ಟಹಾಸದೆ ನಲುಗಿ ಸೋತಿತ್ತು ಬಿಕ್ಕಿ....! 

Sunday, June 2, 2013

ಸೋತಿದೆ ಮಲ್ಹಾರ ರಾಗ...!

ಸುರಿಯುತಿದೆ ಮುಂಗಾರು ಮಳೆ ಮನೆಯ ಹೊರಗೆ 
ಹರಿಯುತಿದೆ ನೆನಪುಗಳ ಹೊಳೆ ಮನದ ಒಳಗೆ ...!

ಅಂದು ನೀ ಜೊತೆಯಿರಲು ಬದುಕು ಬಲು ಸುಂದರ 
ಇಂದು ನೀ ನೆನಪಾಗಿರಲು ಈ ಬದುಕು ದುಸ್ತರ ....!

ಅಬ್ಬರಿಸುತಿಹ ಮಳೆರಾಯ ಸಿಡಿಲು ಗುಡುಗು ಮಿಂಚಿನೊಡನೆ 
ನಗುತಿಹಳು ಇಳೆ ಒಡಲ ದಾಹ  ತಣಿಸಿದ ಇನಿಯನೊಡನೆ...! 

ಜೊತೆಯಾಗಿ ನೀ ಹಿಡಿದ ಕೊಡೆಯ ನೆನಪಾಯಿತು ನನಗಿಂದು 
ಭೋರ್ಗರೆವ ಮಳೆಯಬ್ಬರದಿ ಮರೆಯಾಯಿತು ಕಂಬನಿಯ ಬಿಂದು.. !

ಭುವಿಯ ಕಸ ತೊಳೆದು ಹೊಸ ಹಸಿರ ತರುವ ಮಳೆರಾಯನೀಗ 
ಮನದಿ ಕವಿದ ಕತ್ತಲ ತೊಳೆಯಲಾಗದೇ ಸೋತಿದೆ ಮಲ್ಹಾರ ರಾಗ...!