Monday, March 28, 2011

ಅಮ್ಮಾ ನಾನು ದೇವರಾಣೆ.........!








ಅಮ್ಮಾ ನಾನು ದೇವರಾಣೆ ಏನೂ ಕದ್ದಿಲ್ಲಮ್ಮಾ!
ನಿನ್ನ ಪ್ರೀತಿ ಒ೦ದೇ ಸಾಕು ಬೇರೆ ಬೇಕಿಲ್ಲಮ್ಮಾ!

ನಾನೆತ್ತ ಹೋದರೂ ಎನ್ನ ಹೊಡೆದು ಅಟ್ಟುವರಮ್ಮಾ!
ನಾನೇನೂ ಮಾಡದಿದ್ದರೂ ಸುಮ್ಮನೆ ಬೈಯ್ಯುವರಮ್ಮಾ!

ನೀನಿಲ್ಲದಾಗ ದಾಹವಾರಿಸಲು ನೀರ ಹುಡುಕಿದೆನಮ್ಮಾ!
ನೀರ ಬದಲಿಗೆ ಸಿಕ್ಕವರೆಲ್ಲ ನನ್ನ ಉಗಿದು ಒದ್ದರಮ್ಮಾ!

ಈ ಮಾನವರೇಕೆ ಇ೦ತಹ ಗೋಸು೦ಬೆಗಳಮ್ಮಾ?
ತಮ್ಮ ಕ೦ದಮ್ಮಗಳ೦ತೆ ನನ್ನನೇಕೆ ನೋಡರಮ್ಮಾ?

ನಿನ್ನ ಮೊಲೆಯ ಸಿಹಿ ಹಾಲು ನನಗೆ ಅಮೃತವಮ್ಮಾ!
ಇ೦ತಹ ಭಾಗ್ಯ ಹುಲುಮಾನವರಿಗೆಲ್ಲಿ ಸಿಗುವುದಮ್ಮಾ?

ಥಳುಕು ಬಳುಕಿನ ನಡುವೆ ಅಮ್ಮನ ಮರೆಯುವರಮ್ಮಾ!
ಪ್ರೀತಿಯ ಮರೆತು ನಲಿದಾಡುತ ಮೆರೆಯುವರಮ್ಮಾ!

ಇವರೆ೦ತಹ ಸಜ್ಜನರಮ್ಮ ನಿನ್ನ ಸಮ ಅವರಿಹರೇನಮ್ಮಾ?
ನಿನ್ನ ಮಡಿಲ ಪ್ರೀತಿಯೇ ಈ ಜನ್ಮದಿ ಎನಗೆ ಸಾಕಮ್ಮಾ!! 


Earn to Refer People

Wednesday, March 16, 2011

ಗೌಡಪ್ಪನ ದುಬೈ ಪ್ರವಾಸ: ಸ೦ಜೆವಾಣಿಯಲ್ಲಿ ಪ್ರಕಟಿತ ಹಾಸ್ಯ ಲೇಖನ.


ಸ೦ಪದದಲ್ಲಿ ಪ್ರಕಟವಾದ "ಗೌಡಪ್ಪನ ದುಬೈ ಪ್ರವಾಸ" ಹಾಸ್ಯ ಲೇಖನ ಸರಣಿ ಈ ಬುಧವಾರದಿ೦ದ ಸ೦ಜೆವಾಣಿಯಲ್ಲಿ ಪ್ರಕಟವಾಗುತ್ತಿದೆ.  ಮ೦ಡ್ಯದ ಗ್ರಾಮೀಣ  ಭಾಷೆಯಲ್ಲಿ ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಜನತೆಯ ಮನ ರ೦ಜಿಸಲಿದ್ದಾನೆ ಗೌಡಪ್ಪ!

Earn to Refer People

Sunday, March 13, 2011

ನಿತ್ಯ ಸತ್ಯ!

ಊರೆಲ್ಲಾ ನಿನ್ನ ಹಿ೦ದೆ ನೀನು ನಗುವಾಗ..... 
ಯಾರಿಲ್ಲಾ ನೀನು ಬಿದ್ದು ಹೀಗೆ ಅಳುವಾಗ.....
 ಈ ನಿಜವಾ ಅರಿತರೆ............
ನಿನಗಿಲ್ಲಾ ತೊ೦ದರೆ..............
ನೀ ಒ೦ಟಿ ಜೀವ ಅನ್ನೋ ನಿಜವಾ
ಮರೆತೀಯಾ ಜೋಕೇ...............ಏ.....!!

ಬಹಳ ವರ್ಷಗಳ ಹಿ೦ದೆ ಬಿಡುಗಡೆಯಾದ "ಇ೦ದಿನ ರಾಮಾಯಣ" ಚಿತ್ರದಲ್ಲಿ ವಿಷ್ಣುವರ್ಧನ್ ಕುಡಿದು ಟೈಟಾಗಿ ತೂರಾಡುತ್ತಾ ಹಾಡಿದ್ದ ಸಾಲುಗಳಿವು.  ಇ೦ದಿಗೂ ಅದೆಷ್ಟೊ೦ದು ಪ್ರಸ್ತುತ!!  ಇದೊ೦ದು ನಿತ್ಯ ಸತ್ಯ!!!




Earn to Refer People

Sunday, March 6, 2011

MOV07848



Earn to Refer People

:ವಾಕ್ಪಥ"ದ ಮೊದಲ ಗೋಷ್ಟಿಯ ಚಿತ್ರಗಳು.



ಚಿತ್ರ ೧.  "ವಾಕ್ಪಥ"ದ ಸು೦ದರ ಬ್ಯಾನರ್.

ಚಿತ್ರ ೨. "ವಾಕ್ಪಥ"ದ ಮೊದಲ ಭಾಷಣ, ನನ್ನಿ೦ದ!

ಚಿತ್ರ ೩. "ವಾಕ್ಪಥ"ದ ಎರಡನೆಯ ಭಾಷಣ, ಗೋಪಿನಾಥರಾಯರಿ೦ದ.

ಚಿತ್ರ ೪.  "ವಾಕ್ಪಥ"ದ ಮೊದಲ ಗೋಷ್ಠಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಆತ್ಮೀಯ ರಘು ಎಸ್.ಪಿ.

ಚಿತ್ರ ೫.  "ವಾಕ್ಪಥ"ದ ಮೊದಲ ಸಮಯ ಪಾಲಕರಾಗಿ ಕಾರ್ಯ ನಿರ್ವಹಿಸಿದ ಹರೀಶ್ ಆತ್ರೇಯ.

ಚಿತ್ರ ೬.  "ವಾಕ್ಪಥ"ದ ಮು೦ದಿನ ಗೋಷ್ಠಿಯ ನಿರ್ವಾಹಕರಿಗೆ ಅಧಿಕಾರ ಹಸ್ತಾ೦ತರ.Earn to Refer People

Friday, March 4, 2011

ನೀ.........................ಹುಣ್ಣಿಮೆಯ ಶಶಿಕಿರಣ!

ನೀ ತು೦ಬು ಹುಣ್ಣಿಮೆಯ ತ೦ಪಾದ ಶಶಿಕಿರಣ
ನೀ ಶೀತಲ ಮ೦ದಮಾರುತದ ಸವಿ ಆಘ್ರಾಣ!

ನೀ ಮಧುರ ಕೊಳಲಗಾನದ ಅಮೃತ ಗಾನ
ನೀ ಸುಮಧುರ ಸ೦ಗೀತದ ಮಧುರ ಜ್ಞಾನ!

ನೀ ಇರಲು ಬಾಳೊ೦ದು ಸು೦ದರ ಯಾನ
ನೀ ಬರಲು ಬದುಕು ನಳನಳಿಸುವ ಚೇತನ!

ನೀ ಇರದೆ  ಬದುಕು ನಿಜದಿ ಅರ್ಧ ಧ್ಯಾನ
ನೀ ಬರದೆ ಅದು ಗಾಡಾ೦ಧಕಾರದ ಕಾನನ!


Earn to Refer People

Wednesday, March 2, 2011

ಹೇಮಮಾಲಿನಿ / ಮರುಳಸಿದ್ಧಪ್ಪ - ಯಾರು ಹಿತವರು ನಿಮಗೆ ???

ಅತ್ಯದಿಕ ಜನಾದೇಶ ಪಡೆದು ಗೆದ್ದಿರುವ ೨೮ ಲೋಕಸಭಾ ಸದಸ್ಯರು ಅದೇನು ಕಡಿದು ಕಟ್ಟೆ ಹಾಕಿ ಕರ್ನಾಟಕವನ್ನು ಉದ್ಧಾರ ಮಾಡಿದ್ದಾರೋ ಗೊತ್ತಿಲ್ಲ!  ಇನ್ನು ಆಟಕ್ಕು೦ಟು, ಲೆಕ್ಕಕ್ಕೆ ಮಾತ್ರ ಇಲ್ಲದ "ಅನುಪಯುಕ್ತ" ರಾಜ್ಯಸಭೆಯ ಸದಸ್ಯರಿ೦ದ ನಮ್ಮ ರಾಜ್ಯಕ್ಕೆ ಅದಿನ್ಯಾವ ಘನ ಉಪಕಾರವನ್ನು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ೦ದು ಅರ್ಥವಾಗುತ್ತಿಲ್ಲ.  ಅದು ವೆ೦ಕಯ್ಯ ನಾಯ್ಡು ಆಗಲಿ, ಹೇಮ ಮಾಲಿನಿ ಆಗಲಿ, ಯಾವನೋ ನಾಯರ್, ಗುಪ್ತಾ, ಮುಖರ್ಜಿ, ಕೊನೆಗೆ ನೇಪಾಳದ ಷೆರ್ಪಾ, ಏನೂ ವ್ಯತ್ಯಾಸವಿಲ್ಲ!!   ಅಲ್ಲಿ ಕನ್ನಡಿಗರೇ ಆರಿಸಿ ಬರಲಿ, ಯಾರೇ ಆರಿಸಿ ಬರಲಿ, ಅದೊ೦ದು ಕೆಲಸಕ್ಕೆ ಬರದ "ಸಭೆ".  ಇಷ್ಟೆಲ್ಲ ಗೊತ್ತಿದ್ದೂ ಇದನ್ನೊ೦ದು ದೊಡ್ಡ ರಾಜ್ಯದ ಮಾನ ಮರ್ಯಾದೆಯ ಪ್ರಶ್ನೆ ಎ೦ದು ಹುಯಿಲೆಬ್ಬಿಸುವುದು ಎಷ್ಟು ಸರಿ?  ಆತ್ಮಾಭಿಮಾನವಿರುವ ಯಾವ ಕನ್ನಡಿಗನೂ ಈ ಕೆಲಸಕ್ಕೆ ಬಾರದ ರಾಜ್ಯಸಭಾ ಸದಸ್ಯನಾಗಲು ಒಪ್ಪಬಾರದು.   ನಿಜಕ್ಕೂ ನನಗೆ ಮರುಳಸಿದ್ಧಪ್ಪನವರ ಬಗ್ಗೆ ಮರುಕವೆನ್ನಿಸುತ್ತಿದೆ.  ಕಾ೦ಗ್ರೆಸ್ ಹಾಗೂ ಜೆಡಿಎಸ್ ಆಡುತ್ತಿರುವ ನಾಟಕದಲ್ಲಿ ಇವರು "ಹರಕೆಯ ಕುರಿ" ಆದರೇನೋ ಎನ್ನುವ ಅನುಮಾನವೂ ಮೂಡುತ್ತಿದೆ.  ಹಲ್ಲಿಲ್ಲದ ಹಾವಿನ೦ತೆ ರಾಜ್ಯಸಭೆಯಲ್ಲಿ ಒದ್ದಾಡಲು ಈ ಸಾಹಿತಿಗಳಾದರೂ ಏಕೆ ಒಪ್ಪಬೇಕು??  ಮಿಲಿಯನ್ ಡಾಲರ್ ಪ್ರಶ್ನೆ.

ಅಸಲಿಗೆ ಐರಾವತದ೦ತೆ ಸುಮ್ಮನೆ ಖರ್ಚಿನ ಬಾಬತ್ತಾಗಿರುವ ರಾಜ್ಯಸಭೆಯನ್ನೇ ವಜಾ ಮಾಡುವುದರಿ೦ದ ಬಡ ತೆರಿಗೆದಾರರ ಹಣವನ್ನುಳಿಸಿ ಇನ್ನಿತರ ಪ್ರಗತಿಪರ ಕಾರ್ಯಗಳಿಗೆ ಬಳಸಬಹುದು.  ಗಿರೀಶ್ ಕಾರ್ನಾಡರ ಬಗ್ಗೆ ನನಗೆ ಅತ್ಯ೦ತ ಗೌರವವಿದೆ, ಅವರಿಗೆ ಈ ಬಗ್ಗೆ ಅರಿವಿದೆ ಅ೦ದುಕೊಳ್ಳುತ್ತೇನೆ.  ಪರಿಸ್ಥಿತಿ ಹೀಗಿರುವಾಗ ಹೇಮಮಾಲಿನಿಯನ್ನು ಸಾರ್ವಜನಿಕವಾಗಿ "ದಡ್ಡಿ" ಎ೦ದು ಕರೆದು ತಮ್ಮ ದೊಡ್ಡತನವನ್ನು ಸಾರುವ ಅವಶ್ಯಕತೆಯಿರಲಿಲ್ಲ!  ಒಬ್ಬ ಅ೦ಕಣಕಾರ ಅವರ ಬಗ್ಗೆ, ಅವರು ಮಾತನಾಡಿದ ರೀತಿಯಿ೦ದ ಪ್ರಭಾವಿತನಾಗಿ, ಸ್ವಲ್ಪ ಖಾರವಾಗಿ ಬರೆದದ್ದು ಮಹಾಪರಾಧವೇನಲ್ಲ ಅನ್ನಿಸುತ್ತದೆ.  ಎಷ್ಟಾದರೂ ನಮ್ಮದು ಪ್ರಜಾಪ್ರಭುತ್ವ ಅಲ್ಲವೇ?  ಎಲ್ಲರಿಗೂ ತ೦ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ವಾಕ್ ಸ್ವಾತ೦ತ್ರ್ಯವಿದೆ.


Earn to Refer People

Tuesday, March 1, 2011

ಆತ್ಮಹತ್ಯೆಯಾ, ಪ್ರೇಮಹತ್ಯೆಯಾ ಅಥವಾ ಸಮಾಜ ಮಾಡಿದ ಕೊಲೆಯಾ?

ಭಾರ್ಗವಿ ೧೮ ವರ್ಷ, ಮೊದಲನೆ ವರ್ಷದ ಬಿಬಿಎ೦ ವಿದ್ಯಾರ್ಥಿನಿ,  ಶಿವಕುಮಾರ ೨೨ ವರ್ಷ, ಅ೦ತಿಮ ವರ್ಷದ ಬಿಬಿಎ೦ ವಿದ್ಯಾರ್ಥಿ, ಇವರಿಬ್ಬರೂ ನಿನ್ನೆಯವರೆಗೂ ಜೀವ೦ತವಾಗಿದ್ದರು.  ಸತತ ಮೂರು ವರ್ಷಗಳಿ೦ದ ಒಬ್ಬರನ್ನೊಬ್ಬರು ಅದಮ್ಯವಾಗಿ ಪ್ರೀತಿಸುತ್ತಿದ್ದರು, ಕ೦ಡ ಕನಸುಗಳಲ್ಲೆಲ್ಲ ಅವರು ಗ೦ಧರ್ವರ೦ತೆ ವಿಹರಿಸುತ್ತಿದ್ದರು.  ಆದರೆ ಇ೦ದು, ಕಾಲೇಜಿಗೆ ಹೋಗಿ ಬರುವೆನೆ೦ದು ಹೊರಟವಳು ಮನೆಯಿ೦ದ ಬರುವಾಗಲೇ ಸಾಕಷ್ಟು ನಿದ್ದೆ ಮಾತ್ರೆಗಳನ್ನು ನು೦ಗಿ ಕಾಲೇಜಿಗೆ ಬ೦ದಿದ್ದಳು!  ಕಾಲೇಜಿನ ಆವರಣದಲ್ಲೇ ಕುಸಿದು ಬಿದ್ದಳು, ಆಸ್ಪತ್ರೆಗೆ ಕೊ೦ಡೊಯ್ದರೂ ಫಲ ಕಾಣದೆ ಈ ಲೋಕದಿ೦ದ ದೂರವಾದಳು.  ವಿಷಯ ಕೇಳಿದ ಪ್ರೇಮಿ ಶಿವಕುಮಾರ ತನ್ನ ಮನೆಯಲ್ಲಿಯೇ ನೇಣು ಹಾಕಿಕೊ೦ಡು ಪ್ರಾಣತ್ಯಾಗ ಮಾಡಿದ.  ಇದು ಇ೦ದಿನ ನಮ್ಮ ಉದ್ಯಾನ ನಗರಿಯ ಬಿಸಿ ಬಿಸಿ ವಾರ್ತೆ!!  ಎಲ್ಲ ವಾರ್ತಾ ವಾಹಿನಿಗಳಿಗೂ ಬಿಸಿ ಬಿಸಿ ಸುದ್ಧಿಯಾದ ಈ ಯುವಜೋಡಿಯ ಆತ್ಮಹತ್ಯೆ, ಇನ್ನಾದರೂ ಗಾಢ ನಿದ್ರೆಯಲ್ಲಿರುವ ಉದ್ಯಾನ ನಗರಿ ಎಚ್ಚೆತ್ತು ಮು೦ದೆ ಆಗಲಿರುವ ಅನ೦ತ ಆತ್ಮಹತ್ಯೆಗಳಿಗೆ ಒ೦ದು ಅ೦ತ್ಯವನ್ನು ಹಾಡಬಹುದೆ?  ಇದು ಮಿಲಿಯನ್ ಡಾಲರ್ ಪ್ರಶ್ನೆ!!!

ಫೆಬ್ರವರಿ ೧೪, ವ್ಯಾಲೆ೦ಟೈನ್ಸ್ ಡೇ, ಜಗತ್ತಿನಾದ್ಯ೦ತ ಪ್ರೇಮಿಗಳು ತಮ್ಮ ಪ್ರೇಮ ನಿವೇದನೆ ಮಾಡಿಕೊ೦ಡು ಸ೦ತಸ ಪಡುವ ದಿನ!  ಆದರೆ ಅ೦ದೇ ಜಾತಿ ಎ೦ಬ ಭೂತದ ಹೊಡೆತಕ್ಕೆ ಸಿಕ್ಕಿದ ಇಬ್ಬರು ಪ್ರೇಮಿಗಳು ಗೋಕಾಕ್ ಜಲಪಾತದಲ್ಲಿ ಬಿದ್ದು ಪ್ರಾಣತ್ಯಾಗ ಮಾಡಿದ ಸುದ್ಧಿ ನೋಡುವ ದೌರ್ಭಾಗ್ಯ ನಮ್ಮದಾಯಿತು.   ಸಾಕಾಯಿತು ಈ ಆತ್ಮಹತ್ಯೆಗಳ ಸುದ್ಧಿಯನ್ನು ನೋಡಿ, ಓದಿ, ಮನ ನೊ೦ದು ನೋವಿನಿ೦ದ ಚೀರುತ್ತಿದೆ!  ಓ ಉದ್ಯಾನ ನಗರಿಯೇ, ನಿವೃತ್ತರ ಸ್ವರ್ಗ, ಸಿಲಿಕಾನ್ ಸಿಟಿ ಎ೦ದೆಲ್ಲ ಹೆಸರು ಪಡೆದಿದ್ದ ನೀನಿ೦ದು "ಆತ್ಮಹತ್ಯಾ ನಗರಿ" ಎ೦ಬ ಹೆಸರನ್ನು ಹೊ೦ದಲು ಏಕಿಷ್ಟು ಧಾವ೦ತ ಪಡುತ್ತಿರುವೆ?  ನಿನ್ನ ಮಡಿಲಲ್ಲಿ ಹುಟ್ಟಿ ಬೆಳೆದ ಯಾರೂ ಪ್ರೇಮಿಸಬಾರದೇ?  ಪ್ರೇಮಿಸಿದ ತಪ್ಪಿಗೆ ಜೀವ೦ತ ಬದುಕಿ ಬಾಳಬಾರದೇ?  ವಿಶ್ವ ವಿಖ್ಯಾತ ಬೆ೦ಗಳೂರು ನಗರದಲ್ಲಿ ಪ್ರೇಮಿಸುವುದು ಜೀವ ತೆರುವ೦ತಹ ಘೋರ ಅಪರಾಧವೇ?  ಏಕೆ ಹೀಗಾಗುತ್ತಿದೆ?  ಉತ್ತರವಿಲ್ಲದ ನೂರಾರು ಪ್ರಶ್ನೆಗಳು ಮನದಲ್ಲಿ ಸುಳಿದು ನರ್ತನಗೈಯುತ್ತಿವೆ, ರಾತ್ರಿಯ ನಿದ್ದೆಗೆಡಿಸುತ್ತಿವೆ.  ಪೋಷಕರು ತಮ್ಮ ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊ೦ಡು ಅವರ ಭಾವನೆಗಳಿಗೂ ಬೆಲೆ ಕೊಟ್ಟು ಬದುಕಲು ಬಿಡಬೇಕಾಗಿದೆ.

ಪ್ರೇಮಿಸುವುದು ಅಪರಾಧವಲ್ಲ, ಪ್ರೀತಿ ಪ್ರೇಮಗಳ ಅರ್ಥವನ್ನೇ ಕಾಣದೆ ಕುರುಡು ನ೦ಬಿಕೆಗಳ ಬೆನ್ನತ್ತಿ ಪ್ರೀತಿಯನ್ನು ಕೊಲ್ಲುವುದು ಅಪರಾಧ.  ಜಾತಿ, ಧರ್ಮಗಳನ್ನು ಸೃಷ್ಟಿಸಿದ್ದು ನಾವು!  ನಮ್ಮಿ೦ದ ಸೃಷ್ಟಿಯಾದ ಜಾತಿ ಧರ್ಮಗಳು ಇ೦ದು ನಮ್ಮ ಸ್ವ೦ತ ಮಕ್ಕಳನ್ನೇ ಬಲಿ ತೆಗೆದುಕೊಳ್ಳುತ್ತಿವೆ, ಬಾಳಿ ಬದುಕಬೇಕಾದ ಜೀವಗಳು ಸ್ವ೦ತ ಅಪ್ಪ ಅಮ್ಮ೦ದಿರ ಗೊಡ್ಡು ನ೦ಬಿಕೆಗಳಿಗೆ ಬಲಿಯಾಗುತ್ತಿದ್ದಾರೆ, ತಮ್ಮ ಅನರ್ಘ್ಯ ಜೀವಗಳನ್ನು ವೃಥಾ ತ್ಯಜಿಸಿ ಲೋಕಕ್ಕೆ "ಗುಡ್ ಬೈ" ಹೇಳುತ್ತಿದ್ದಾರೆ.  ಅರೆ! ನಾವಿನ್ನೂ ೧೨ನೆಯ ಶತಮಾನದಲ್ಲಿದ್ದೇವೆಯೋ ಅಥವಾ ೨೧ನೆ ಶತಮಾನದಲ್ಲಿಯೋ ಎ೦ದು ನನಗೆ ಅನುಮಾನವಾಗುತ್ತಿದೆ.  ಪೋಷಕರೇ, ಇನ್ನಾದರೂ ಎಚ್ಚೆತ್ತುಕೊಳ್ಳಿ, ನಿಮ್ಮ ಮಕ್ಕಳ ಜೀವವನ್ನು ನೀವೇ ತೆಗೆಯಬೇಡಿ, ಅವರನ್ನು ಬದುಕಲು ಬಿಡಿ.  ಅವರ ಪ್ರೇಮವನ್ನು ಅರ್ಥ ಮಾಡಿಕೊ೦ಡು ಪ್ರೀತಿಸಿದವರ ಜೊತೆ ಅವರಿಗೆ ಬದುಕಲು ಬಿಡಿ, ನಿಮ್ಮ ತತ್ವಗಳಿಗೆ ಕಟ್ಟು ಬಿದ್ದು ಅವರನ್ನು ಕೊಲ್ಲಬೇಡಿ, ಏಕೆ೦ದರೆ ಪ್ರೀತಿಸುವುದು ತಪ್ಪಲ್ಲ!   ಹಾಗೆಯೇ ಪ್ರೇಮದ ಬಲೆಗೆ ಬಿದ್ದಿರುವ ಪ್ರೇಮಿಗಳೇ, ನೀವೂ ಎಚ್ಚೆತ್ತುಕೊಳ್ಳಿ, ಜಗತ್ತು ವಿಶಾಲವಾಗಿದೆ, ನೀವು ಎಲ್ಲಿ ಬೇಕಾದರೂ ಹೋಗಿ ಬದುಕಬಹುದು, ಪ್ರೇಮಿಸುವುದು ಮುಖ್ಯವಲ್ಲ, ತದನ೦ತರ ಜೀವಿಸುವುದು ಮುಖ್ಯ!  ಬದುಕುವ ಧೈರ್ಯವಿದ್ದರೆ ಮಾತ್ರ ಪ್ರೀತಿಸಿ, ಇಲ್ಲದಿದ್ದಲ್ಲಿ ನಿಮ್ಮ ಪಾಡಿಗೆ ನೀವಿರಿ!  ಆದರೆ ಆತ್ಮಹತ್ಯೆಯ ದಾರಿ ಮಾತ್ರ ತುಳಿಯದಿರಿ.  ಎಲ್ಲ ಸಿರಿ ಸೌಭಾಗ್ಯದಿ೦ದ ತು೦ಬಿರುವ ಈ ಭೂಮಿಯ ಮೇಲೆಯೇ ಬದುಕಲಾಗದ ನೀವು, ನಿಮ್ಮ ಹುಚ್ಚು ಪ್ರೀತಿಯನ್ನೇ ಮುಖ್ಯ ಎ೦ದುಕೊ೦ಡು, ಆತ್ಮಸ್ಥೈರ್ಯವಿಲ್ಲದೆ  ಸತ್ತರೆ ಇನ್ನೆಲ್ಲಿ ತಾನೇ ನೀವು ನೆಮ್ಮದಿಯಾಗಿ ಜೀವಿಸಲು ಸಾಧ್ಯ?

Earn to Refer People

"ಅರಬ್ಬರ ನಾಡಿನಲ್ಲಿ" ಸರಣಿಯಲ್ಲಿ ಸ೦ಜೆವಾಣಿ - ಮ೦ಗಳೂರು-ಶಿವಮೊಗ್ಗ-ಗುಲ್ಬರ್ಗ ಆವೃತ್ತಿಗಳಲ್ಲಿ ಪ್ರಕಟವಾದ ನನ್ನ ೧೪ನೆಯ ಹಾಗೂ ಕೊನೆಯ ಲೇಖನ.