Thursday, January 29, 2015

ಹಾಯ್ಕುಗಳು - ೨

ರಾಧೆಯ ಸಂಗ 
ಬಯಸಿದೆ ಮನವು 
ದೂರತೀರದಿ!

ದಾಟಲಾಗದ 
ಬೃಹತ್ ಅಂತರದಿ 
ತೊಳಲಾಡಿದೆ!

ರಾಧೆ ಪ್ರೀತಿಗೆ 
ಓಗೊಡಲಾಗದಿಹ 
ಆರ್ದ್ರ ಭಾವದಿ!

ಬರಲಿ ಬಿಡು
ಸಾವಿಗೇಕೆ ಅಂಜಿಕೆ
ಅದು ನಿಶ್ಚಿತ!

ಬಾಳುವ ನಾವು
ಸಾವಿಗೆ ಹೆದರದೆ
ನಗು ನಗುತ!

ಇರುವ ಅಷ್ಟೂ
ದಿನ ಈ ಬಾಳಿನಲಿ
ನಗು ಅಮರ!

 ಗಟ್ಟಿ ಗುಂಡಿಗೆ
ಹೊಡೆತ ಜೋರಾದರೂ
ಮಿಡಿಯುತ್ತಿದೆ!

ಬಿದ್ದರೇನಾಯ್ತು
ಮೀಸೆ ಮಣ್ಣಾಗಲಿಲ್ಲ
ಆನಂದ ಕಂದ!

ಅಹಂಕಾರದಿ
ಎಷ್ಟೆಲ್ಲ ಮೆರೆದರೂ
ಮಣ್ಣೇ ಕೊನೆಗೆ!

ಕೊಲ್ಲಬೇಡವೆ
ನಿನ್ನ ನಗುವಿನಲಿ
ನನ್ನುಸಿರಿದೆ!

ನಗಬೇಡವೆ
ನಿನ್ನ ನಗುವಿಗಿದೆ
ಕೊಲ್ಲುವ ಶಕ್ತಿ!

Wednesday, January 28, 2015

ಹಾಯ್ಕುಗಳು

ಹಾಯ್ಕು ಎಂದರೆ
ಕೇವಲ ಏಳೇ ಪದಗಳಲಿ
ಹೇಳುವ ಭಾವ!

"ಕಸ್ತೂರಿ ನಿವಾಸ"
ಉದಯ ಟಿವಿಯಲ್ಲಿ
ಕಣ್ತುಂಬಾ ಧಾರೆ!

ಹುಟ್ಟಿದನಾಡು
ಸ್ವರ್ಗಕಿಂತ ಮಿಗಿಲು
ಎದೆಯ ಭಾವ!

ನಾಳೆಯ ದಿನ
ಗಣರಾಜ್ಯ ಉತ್ಸವ
ಭಾರತಾಂಬೆಗೆ!


ಗೌರವದಿಂದ
ನಾನಿಂದು ನಮಿಸುವೆ
ಜನ್ಮಭೂಮಿಗೆ!


ಪುಟ್ಟ ಹೃದಯ
ಇಷ್ಟೇಕೆ ಮಿಡಿಯುವೆ
ದಬದಬನೆ!

ಅವಸರದಿ
ನೀ ನಿಂತು ಬಿಡಬೇಡ
ಸಾಗಲಾರದೆ!



ಬಂಧಿಯಾಗಿಹೆ
ನಿನ್ನ ನೆನಪುಗಳ
ಶರಧಿಯೊಳು!

ನೆನಪುಗಳು
ಮೊರೆಯುತ ಸೋತಿವೆ
ನಿನ್ನಧರದಲಿ!


Thursday, January 22, 2015

ನೀರವತೆ.



ಮುಂಜಾನೆಯ ನೀರವತೆ 
ಪಿಸುಗುಟ್ಟುವ ಹೃದಯ 
ಕೇಳುವವರಾರಿಲ್ಲ 
ಸುಂದರ ಬಾನು 
ಸೂರ್ಯೋದಯ 
ಹಕ್ಕಿಯ ಹಾಡು 
ಗಡಿಬಿಡಿ ಧಾವಂತ 
ಮತ್ತೊಂದು ದಿನ 
ದಾಪುಗಾಲಿಡುತಿದೆ 
ಇತಿಹಾಸ ಸೇರಲು! :-) 

Sunday, January 11, 2015

ಹರಿದು ಬಾ

ಹರಿದು ಬಾ ನೀ ನದಿಯಂತೆ
ಕಾದಿರುವೆ ನಾ ಕಡಲಂತೆ
ಸಂಧಿಸುವ ಕರಿಮುಗಿಲಿನಂತೆ
ಭೋರ್ಗರೆಯುವ ಅಲೆಯಂತೆ!
ಹಾರಾಡುವ ಬೆಳ್ಳಕ್ಕಿಯಂತೆ
ತೊನೆದಾಡುವ ತೆನೆಬಳ್ಳಿಯಂತೆ
ಮರೆಯಾಗುವ ಹಿಮಬಿಂದುವಿನಂತೆ !

Saturday, January 10, 2015

ದರ್ಪಣ

ಮೊಗವ ನೋಡಲೆಂದು ತಂದರೆ ದರ್ಪಣವ 
ತೋರುತಿದೆ ಎದೆಯಾಳದ ನಿನ್ನದೇ ಬಿಂಬವ!

ದುರ್ಗಂಧವ ಕಳೆಯಲು ಹಚ್ಚಿದರೆ ಸುಗಂಧವ
ನೆನಪಿಸುತಿದೆ ನಿನ್ನದೇ ಮೈಯ್ಯ ಸುವಾಸನೆಯ!

ಬೇಸರ ಕಳೆಯಲು ಕೇಳಿದರೆ ಇಷ್ಟದ ಸಂಗೀತವ
ಮನ ಹಾಡುತಿದೆ ನಿನ್ನ ಕೊರಳ ಇಂಪಾದ ರಾಗವ!

Tuesday, January 6, 2015

ಬನದ ಹುಣ್ಣಿಮೆ!


ನಾನಿಂದು ನಿನ್ನ ಮೇಲೊಂದು ಸುಂದರ ಪ್ರೇಮ ಕವನ ಗೀಚುವ 
ಉಮೇದಿನಲ್ಲಿದ್ದೆ ಚಂದ್ರಮ,,,,, ಇಂದು ಬನದ ಹುಣ್ಣಿಮೆಯಲ್ಲವೆ?

ಅದೇಕೋ ಗೊತ್ತಿಲ್ಲ ಮನೆಗೆ ಬಂದೊಡನೆ ಈ ಹಾಳು ಮನವು 
ಮೂಕವಾಗಿ ಪದಗಳು ಸಿಗದೇ  ಮೌನಕೆ ಮೊರೆ ಹೋಯಿತು! 

ಹುಡುಕಲಾರಂಭಿಸಿತು ಮನ ಮರೆತು ಹೋದ ಹಳೆಯ ಮಾತುಗಳ
ಕಾಲ ನಿಂತಂತಾಯಿತು ಒಮ್ಮೆಗೇ ಸುತ್ತಲ ಚಿತ್ರಗಳೆಲ್ಲ ಸ್ತಬ್ಧ ನಿಶ್ಯಬ್ಧ!

ಪ್ರಿಯವಾದ ಮದಿರೆಯೂ ರುಚಿಸದಂತಾಯ್ತು ನಾಲಿಗೆಗೆ ಇಂದು 
ಸುಮ್ಮನೆ ಕುಡಿದದ್ದೇ ಬಂತು ಕೊನೆಗೂ ನಶೆ ಏರಲೇ ಇಲ್ಲವಿಂದು!

ಲಕ್ಷ ಲಕ್ಷ ತಾರೆಗಳು ಚಂದ್ರಮನ ಜೊತೆ ಚಕ್ಕಂದವಾಡುತಿರಲು 
ನೀರವ ಆಗಸದಲಿ ತೇಲಿ ಬಂದಿತ್ತು ಕನಸುಗಳ ಸ್ಮಶಾನಯಾತ್ರೆ!  

ನಗುತಿತ್ತು ಭುವಿ ನಿನ್ನ ತಣ್ಣನೆಯ ಬೆಳದಿಂಗಳ ಹೀರಿ ಹಿಗ್ಗಿ ಸೊಕ್ಕಿ 
ಪುಟ್ಟ ಮನವೊಂದು ರೋದಿಸುತ್ತಿತ್ತು ದೂರದಲ್ಲಿ ಬಲು ಬಿಕ್ಕಿ ಬಿಕ್ಕಿ!

Saturday, January 3, 2015

ಹೊಸವರ್ಷದ ಸೂತಕ!



ನಮ್ಮ ಕಚೇರಿಯಲ್ಲಿ ಕಳೆದ ವಾರ ನನ್ನನ್ನು ಸಂಪರ್ಕಿಸಿದ ಮಾನವಸಂಪನ್ಮೂಲ ಅಧಿಕಾರಿಯೊಬ್ಬರು ಸುಮಾರು ಒಂದು ತಿಂಗಳ ಹಿಂದೆ ಕೆಲಸದಿಂದ ವಜಾಗೊಂಡಿದ್ದ ಒಬ್ಬನನ್ನು ಸಂಸ್ಥಯ ವಸತಿಯಿಂದ ತೆರವುಗೊಳಿಸಬೇಕೆಂದು ವಿನಂತಿಸಿಕೊಂಡಿದ್ದರು. ಸರಿ ಎಂದು ಅವನ ಬಗ್ಗೆ ಎಲ್ಲ ವಿವರಗಳನ್ನು ಸಂಗ್ರಹಿಸಿ ವಸತಿಗೃಹಕ್ಕೆ ಭೇಟಿಯಿತ್ತೆ, ತನ್ನ ಕೊಠಡಿಯಲ್ಲಿ ಇತರ ಕೆಲಸಗಾರರೊಂದಿಗೆ ಕುಳಿತಿದ್ದ ಅವನಿಗೆ ನನ್ನ ಪರಿಚಯ ಮಾಡಿಕೊಂಡು ಮಾತಿಗೆಳೆದೆ.  ಸುಮಾರು ೨೪ ವರ್ಷದ ಹೈದರಾಬಾದಿನ ಯುವಕ, ಸ್ವಲ್ಪ ಚಿಂತಿತನಾದಂತಿದ್ದರೂ  ಅಮಾಯಕನಂತೆ ಕಾಣುತ್ತಿದ್ದ. ನಿನ್ನನ್ನು ಈಗಾಗಲೇ ಕೆಲಸದಿಂದ ವಜಾ ಮಾಡಿ ಒಂದು ತಿಂಗಳಾಗಿದೆ, ಇಲ್ಲಿನ ವಲಸೆ ಹಾಗೂ ಕಾರ್ಮಿಕ ನಿಯಮದ ಪ್ರಕಾರ ಕೆಲಸದಿಂದ ವಜಾಗೊಂಡ ನಂತರ ನೀನು ಇಲ್ಲಿ ಒಂದು ತಿಂಗಳು ಮಾತ್ರ ಇರಬಹುದು. ನಿನ್ನ ಕಾಲಾವಧಿ ಮುಗಿದಿರುವುದರಿಂದ ನೀನು ನಾಳೆ ಬಂದು ಕಚೇರಿಯಲ್ಲಿ ಎಲ್ಲಾ ಕಾಗದಪತ್ರಗಳಿಗೆ ಸಹಿ ಮಾಡಿ ನಿನ್ನೂರಿಗೆ ಹೊರಟು ಬಿಡು, ಇಲ್ಲದಿದ್ದರೆ ನಿನಗೆ ತುಂಬಾ ತೊಂದರೆಯಾಗುತ್ತದೆ ಎಂದು ಹೇಳಿದ್ದೆ. ಎಲ್ಲವನ್ನೂ ಸಮಾಧಾನವಾಗಿ ಕೇಳಿಸಿಕೊಂಡ ಅವನು ಆಯ್ತು ಸಾರ್, ನಾಳೆ ಕಚೇರಿಗೆ ಬರುತ್ತೇನೆ ಎಂದಿದ್ದ.  ಇಷ್ಟು ಸುಲಭವಾಗಿ ಒಪ್ಪಿಕೊಂಡನಲ್ಲಾ ಎಂದು ಖುಷಿಯಿಂದ ಹೊರ ಬಂದಿದ್ದೆ.  ಆದರೆ ಅವನು ಹೇಳಿದಂತೆ ಮರುದಿನ ಕಚೇರಿಗೆ ಬರಲಿಲ್ಲ! ಮತ್ತೊಮ್ಮೆ ಮಾನವ ಸಂಪನ್ಮೂಲದವರು ನನ್ನನ್ನು ಸಂಪರ್ಕಿಸಿ ಹೇಗಾದರೂ ಮಾಡಿ ಅವನನ್ನು ಖಾಲಿ ಮಾಡಿಸಬೇಕೆಂದು ವಿನಂತಿಸಿದ್ದರು, ಹಾಗಿಲ್ಲದಿದ್ದಲ್ಲಿ ಸಂಸ್ಥೆಯ ಮುಂದಿನ ಎಲ್ಲಾ ವೀಸಾಗಳಿಗೂ ತೊಂದರೆಯಾಗುತ್ತದೆಂದಿದ್ದರು.

ಕೆಲವು ದಿನ ಕೆಲಸದ ಒತ್ತಡದಲ್ಲಿ ನಾನು ಈ ವಿಚಾರವನ್ನು ಮರೆತಿದ್ದೆ, ಮೊನ್ನೆ ಗುರುವಾರ ನಾನು ಹೋಟೆಲ್ಲಿನ ಡ್ಯೂಟಿ ಮೇನೇಜರ್ ಆಗಿದ್ದೆ, ನನ್ನ ಕೆಲಸ ಮುಗಿಸಿ ರಾತ್ರಿ ಹತ್ತೂವರೆಗೆ ಮನೆಗೆ ಹೊರಡಲು ಆಚೆ ಬಂದರೆ ಧಿಡೀರನೆ ನನ್ನೆದುರಿಗೆ ಅದೇ ಯುವಕ ಪ್ರತ್ಯಕ್ಷನಾಗಬೇಕೇ?  ರಾತ್ರಿ ಅಷ್ಟು ಹೊತ್ತಿನಲ್ಲಿ ಅವನು ಹೋಟೆಲ್ಲಿಗೆ ಬಂದಿದ್ದನ್ನು ಕಂಡು ನನಗೆ ಆಶ್ಚರ್ಯವಾಯಿತು, ಅವನನ್ನು ತಡೆದು ಎಲ್ಲಿಗೆ ಹೋಗುತ್ತಿದ್ದೀಯಾ ಎಂದೆ, ಅದಕ್ಕವನು ಊಟಕ್ಕಾಗಿ ರೆಸ್ಟೋರೆಂಟಿಗೆ ಹೋಗುತ್ತಿದ್ದೇನೆ ಎಂದು ಧಿಮಾಕಿನ ಉತ್ತರ ಕೊಟ್ಟ!  ಅರೆ, ನಿನ್ನನ್ನು ಕೆಲಸದಿಂದ ವಜಾ ಮಾಡಿ ಒಂದು ತಿಂಗಳಿಗಿಂತ ಹೆಚ್ಚಾಗಿದೆ, ನೀನು ಸಂಸ್ಥೆಯ ಕಾನೂನಿನ ಪ್ರಕಾರ ಇಲ್ಲಿ ಕಾಲಿಡುವಂತಿಲ್ಲ, ಇನ್ನು ಊಟಕ್ಕೆ ಹೇಗೆ ಬಂದೆ ಎಂದರೆ ಊಟವಿಲ್ಲದೆ ಹೇಗೆ ಇರೋದಿಕ್ಕಾಗುತ್ತೆ ಸಾರ್, ಸಂಸ್ಥೆಯವರು ನನಗೆ ಕೊಡಬೇಕಾದ ಬಾಕಿ ಹಣವನ್ನೂ ಕೊಟ್ಟಿಲ್ಲ, ನನ್ನ ಬಳಿ ಊಟಕ್ಕೆ ಹಣವಿಲ್ಲ, ಅದಕ್ಕೇ ಇಲ್ಲಿಗೆ ಊಟಕ್ಕೆ ಬಂದೆ, ಎಷ್ಟೋ ಜನ ಆರೇಳು ತಿಂಗಳೂ ಇದೇ ರೀತಿ ಇದ್ದು ಹೋಗಿದ್ದಾರೆ, ನನಗೆ ಮಾತ್ರ ಯಾಕೆ ನೀವು ತಡೆಯುತ್ತೀರಿ ಎಂದು ಪ್ರಶ್ನಿಸಿದ್ದ!  ನಿನ್ನ ಬಳಿ ಹಣವಿಲ್ಲವೆಂದರೆ ಅದು ನೀನಾಗಿ ನೀನು ಮಾಡಿಕೊಂಡಿರುವ ತಲೆನೋವು, ಆ ದಿನ ಕಚೇರಿಗೆ ಬಂದು ಎಲ್ಲ ಕಾಗದಪತ್ರಗಳಿಗೆ ಸಹಿ ಮಾಡಿ, ನಿನಗೆ ಬರಬೇಕಾದ ಬಾಕಿ ಹಣ ತೆಗೆದುಕೊಂಡು ಊರಿಗೆ ಹೋಗು ಎಂದರೆ ನೀನು ಯಾಕೆ ಬರಲಿಲ್ಲ? ಇದು ನೀನಾಗಿ ತಂದುಕೊಂಡಿರುವ ಪರಿಸ್ಥಿತಿ, ಅದಕ್ಕೆ ನಾನು ಏನೂ ಮಾಡಲಾಗುವುದಿಲ್ಲ, ಈಗ ಇಲ್ಲಿಂದ ಮೊದಲು ಹೊರಗೆ ಹೋಗು, ನಾಳೆ ಬಂದು ನಿನ್ನದೇನಿದೆಯೋ ಎಲ್ಲ ಲೆಕ್ಕ ಚುಕ್ತಾ ಮಾಡಿಕೋ ಎಂದೆ.
ನನ್ನ ಮಾತಿನಿಂದ ಸಿಟ್ಟಿಗೆದ್ದ ಅವನು ಬಲವಂತವಾಗಿ ಹೋಟೆಲ್ಲಿನ ಒಳಗೆ ಹೋಗಲು ಮುಂದಡಿಯಿಟ್ಟ, ತಕ್ಷಣ ಎಲ್ಲವನ್ನೂ ನೋಡುತ್ತಿದ್ದ ನಮ್ಮ ಭದ್ರತಾ ರಕ್ಷಕನೊಬ್ಬ ಅವನನ್ನು ಗೊಂಬೆಯಂತೆ ಹಿಡಿದೆತ್ತಿ ಆಚೆಗೆ ನೂಕಿದ್ದ!   ಆದರೆ ಅಲ್ಲಿಂದ ಹೋಗಲು ತಯಾರಿಲ್ಲದ ಅವನು ಅಲ್ಲೇ ಇದ್ದ ಜಗುಲಿಯ ಮೇಲೆ ಕುಳಿತು ಕಾಲಿನ ಮೇಲೆ ಕಾಲು ಹಾಕಿಕೊಂಡು ಸಿಗರೇಟು ಸೇದುತ್ತಾ ನನ್ನನ್ನೇ ದುರುಗುಟ್ಟಿ ನೋಡುತ್ತಾ ಫೋಸು ಕೊಡುತ್ತಿದ್ದ.  ಅವನನ್ನು ಯಾವುದೇ ಕಾರಣಕ್ಕೂ ಒಳಬಿಡದಂತೆ ಭದ್ರತಾ ರಕ್ಷಕರಿಗೆ ತಾಕೀತು ಮಾಡಿ ನಾನು ಮನೆಗೆ ಬಂದಿದ್ದೆ.

ನಾನು ಇತ್ತ ಮನೆಗೆ ಬಂದರೆ ಅತ್ತ ಅವನು ಅನತಿ ದೂರದಲ್ಲಿರುವ ನಮ್ಮದೇ ಸಂಸ್ಥೆಯ ಇನ್ನೊಂದು ಹೋಟೆಲ್ಲಿಗೆ ಹೋಗಿ, ಅವನಿಗೆ ರೆಸ್ಟೋರೆಂಟಿನಲ್ಲಿ ಊಟ ಮಾಡಲು ನಾನು ಅನುಮತಿ ಕೊಟ್ಟಿದ್ದೇನೆಂದು ಗೇಟಿನಲ್ಲಿದ್ದ ಭದ್ರತಾ ರಕ್ಷಕನಿಗೆ ಸುಳ್ಳು ಹೇಳಿ ಹೋಟೆಲ್ಲಿನೊಳಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದ.  ತಕ್ಷಣ ಅಲ್ಲಿನ ಭದ್ರತಾ ರಕ್ಷಕ ನನ್ನ ಮೊಬೈಲಿಗೆ ಕರೆ ಮಾಡಿ ಅವನಿಗೆ ನಾನು ಅನುಮತಿ ಕೊಟ್ಟಿದ್ದೇನೆಯೋ ಇಲ್ಲವೋ ಎಂದು ಕೇಳಿದ್ದ, ಅವನನ್ನು ಒಳಕ್ಕೆ ಬಿಡದೆ ಹೊರಗಟ್ಟುವಂತೆ ನಾನು ಆದೇಶಿಸಿದ್ದೆ.  ಬಲವಂತವಾಗಿ ಅವನನ್ನು ಹೋಟೆಲ್ಲಿನಿಂದ ಹೊರಗಟ್ಟಿದ ಭದ್ರತಾ ರಕ್ಷಕರು ಅವನನ್ನು ವಸತಿಗೃಹಕ್ಕೆ ಹಿಂದಿರುಗಲು ಸಂಸ್ಥೆಯ ಬಸ್ಸಿನೊಳಕ್ಕೂ ಹತ್ತಲು ಬಿಟ್ಟಿರಲಿಲ್ಲ!  ಇಷ್ಟೆಲ್ಲ ಆದ ನಂತರವೂ ಆ ಜಗಮೊಂಡ ರಾತ್ರಿ ೧ ಘಂಟೆಗೆ ವಸತಿಗೃಹಕ್ಕೆ ವಾಪಸ್ ಬಂದು ಮಲಗಿದ್ದ ಜತೆಯವರನ್ನು ಬಾಗಿಲು ಬಡಿದು ಎಬ್ಬಿಸಿ ಒಳಕ್ಕೆ ಸೇರಿಕೊಂಡಿದ್ದ. ಎಲ್ಲವನ್ನೂ ಕೂಲಂಕುಶವಾಗಿ ವಿಮರ್ಶಿಸಿ ನೋಡಿದಾಗ ಇವನೊಬ್ಬ ಮಾನಸಿಕ ಅಸ್ವಸ್ಥ ಎಂಬುದು ನನಗೆ ಮನದಟ್ಟಾಗಿತ್ತು.

ಮರುದಿನ ಕಚೇರಿಗೆ ಹೋದವನು ನಡೆದ ಎಲ್ಲ ಘಟನೆಗಳನ್ನು ವಿವರಿಸಿ ಸಂಸ್ಥೆಯ ಮುಖ್ಯಸ್ಥರಿಗೆ ಒಂದು ಮಿಂಚಂಚೆಯನ್ನು ಕಳುಹಿಸಿ, ಮಾನಸಿಕವಾಗಿ ಅಸ್ವಸ್ಥನಾಗಿರುವ ಅವನನ್ನು ಕಾನೂನು ಪ್ರಕಾರ ಇಲ್ಲಿಂದ ಹೊರಹಾಕಬೇಕೆಂದು, ಇಲ್ಲದಿದ್ದಲ್ಲಿ ಅವನಿಂದ ಯಾರಿಗಾದರೂ ತೊಂದರೆಯಾಗಬಹುದೆಂದೂ  ವಿವರಿಸಿದ್ದೆ. ತಕ್ಷಣ ಕಾರ್ಯಪ್ರವೃತ್ತರಾದ ಅವರು ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿಯನ್ನು ಕರೆಸಿ, ವಲಸೆ ವಿಭಾಗದಲ್ಲಿ ಅವನನ್ನು "ತಲೆ ಮರೆಸಿಕೊಂಡಿರುವ ವ್ಯಕ್ತಿ" ಎಂದು ದಾಖಲಿಸಿ ಪೊಲೀಸರಿಗೆ ದೂರು ನೀಡುವಂತೆ ಆದೇಶಿಸಿದ್ದರು. ಅದರಂತೆ ದೂರು ದಾಖಲಿಸಿದ ಮೂರು ದಿನಗಳಲ್ಲಿ  ಸಂಸ್ಥೆಯ ವಸತಿಗೃಹಕ್ಕೆ ಭೇಟಿಯಿತ್ತ ವಲಸೆ ವಿಭಾಗದ ಅಧಿಕಾರಿಗಳು ಇತರ ಕೆಲಸಗಾರರೊಡನೆ ಲೋಕಾಭಿರಾಮವಾಗಿ ಮಾತನಾಡುತ್ತಾ ಕುಳಿತಿದ್ದ ಅವನನ್ನು ಅನಾಮತ್ತಾಗಿ ಬಂಧಿಸಿ ಶಾರ್ಜಾದ ಜೈಲಿಗೆ ಕರೆದೊಯ್ದು ಬಂಧನದಲ್ಲಿಟ್ಟಿದ್ದಾರೆ.  ಒಂದು ವಾರ ಶಾರ್ಜಾದ ಜೈಲಿನಲ್ಲಿ, ನಂತರ ಒಂದು ತಿಂಗಳು ದುಬೈನ ಕೇಂದ್ರ ಕಾರಾಗೃಹದ ವಲಸೆ ವಿಭಾಗದ ಜೈಲಿನಲ್ಲಿ ಸೆರೆವಾಸ ಅನುಭವಿಸಬೇಕು, ನಂತರ ಅವನ ಪಾಸ್ಪೋರ್ಟಿನಲ್ಲಿ ಶಾಶ್ವತ "ಬ್ಯಾನ್" ಸೀಲಿನೊಂದಿಗೆ ಅವನನ್ನು ಪೊಲೀಸರೇ ವಿಮಾನ ಹತ್ತಿಸುತ್ತಾರೆ, ಮತ್ತೆಂದಿಗೂ ಅವನ ಜೀವಮಾನದಲ್ಲಿ ಅವನು ದುಬೈಗೆ ಬರಲು ಸಾಧ್ಯವೇ ಇಲ್ಲ!

ವರ್ಷದ ಕೊನೆಯ ದಿನ ಕಳೆದು ಹೊಸವರ್ಷದ ಆಗಮನದ ನಿರೀಕ್ಷೆಯಲ್ಲಿದ್ದ ಅವನಿಗೆ, ಅವನ ಹುಚ್ಚಾಟದಿಂದಾಗಿ ಜೈಲುವಾಸವೇ ಗತಿಯಾಯ್ತು!  ಹೊಸವರ್ಷದ ಆಚರಣೆಯ ಸಂಭ್ರಮದಲ್ಲಿದ್ದ ಜನರ ನಡುವೆ ಎರಡು ಹೋಟೆಲ್ಲುಗಳ ಭದ್ರತೆಯ ರಕ್ಷಣೆಯ ಹೊಣೆ ಹೊತ್ತಿದ್ದ ನನಗೆ ಅವನ ಬಗ್ಗೆ ಚಿಂತಿಸಲು ಸಮಯವೇ ಇರಲಿಲ್ಲ, ಇಂದು ವಾರದ ಧಾವಂತದ ಬದುಕಿಗೆ ಬಿಡುವು, ಧುತ್ತೆಂದು ಅವನ ಕಥೆ ನೆನಪಾಗಿ ಮನದ ಮೂಲೆಯಲ್ಲಿ ಸೂತಕದ ಛಾಯೆ ಕಾಡಿತು

ಜ್ವಾಲಾಮುಖಿ

ನನ್ನ ನಗುಮೊಗವ ಕಂಡು ನೀನಿಂದು ಬೆರಗಾದೆಯ ಸಖಿ  
ಹುಟ್ಟುಗುಣವದು ಸುಟ್ಟರೆ ಹೋದೀತೇ ನಾ ಸದಾ ಹಸನ್ಮುಖಿ 
ಕಾಣದಂತಡಗಿದೆ ನಗುವ ಹಿಂದೊಂದು ಜ್ವಾಲಾಮುಖಿ 
ಸುಡುವಗ್ನಿಕುಂಡದ ನಡುವೆಯೂ ನಾನೆಂದಿಗೂ ಜೀವನ್ಮುಖಿ !  :-)

Thursday, January 1, 2015

ಭದ್ರತೆಯ ಲೋಕದಲ್ಲಿ - ೧



 (ಬಹು ದಿನಗಳಿಂದ ನನ್ನ ಮನದಲ್ಲಿ ಕೊರೆಯುತ್ತಿದ್ದ ಒಂದು ಕೊರಗು ಇಂದು ಹೊಸವರ್ಷದಲ್ಲಿ ಬಗೆಹರಿದ ಸಂತಸ ಗೆಳೆಯರೆ, ಸುಮಾರು ೨೫ ವರ್ಷಗಳಿಂದ ಬರಿಗೈಲಿ ಬಂದವನಿಗೆ ಅನ್ನ ಕೊಟ್ಟು ಸಲಹಿದ ನನ್ನ ಭದ್ರತಾ ಲೋಕದ ಬಗ್ಗೆ ಬರೆಯಬೇಕು ಅಂತನ್ನಿಸಿದಾಗೆಲ್ಲಾ ಏನಾದರೊಂದು ಅಡಚಣೆಯಾಗಿ ಅದು ಹಾಗೆಯೇ ಉಳಿದು ಬಿಡುತ್ತಿತ್ತು!  ಈ ಬಾರಿ ಸಹೃದಯ ಶ್ರೀ ಗಣೇಶ್ ಕೋಡೂರ್ ಅವರ ಪ್ರೋತ್ಸಾಹದಿಂದ ಅದು ಈಡೇರಿದೆ, ಇದಿನ್ನು ನಿರಂತರವಾಗಿ ಹರಿದು ಬರಲಿದೆ, ಕಾಲು ಶತಮಾನವನ್ನು ಇದೇ ಉದ್ಯೋಗದಲ್ಲಿ ಕಳೆದಾಯಿತು, ಸಾವಿರಾರು ಜನರನ್ನು, ಸಾವಿರಾರು ಘಟನೆಗಳನ್ನು, ಜೀವನ್ಮರಣ ಹೋರಾಟಗಳನ್ನು, ಕೊನೆಗೆ ಸಾವನ್ನು, ಬಹಳ ಹತ್ತಿರದಿಂದ ಕಂಡಾಯ್ತು !  ನಿಮ್ಮ ಪ್ರೋತ್ಸಾಹವಿರಲಿ. :-)  ಇದು ಈ ಬಾರಿಯ ನಿಮ್ಮೆಲ್ಲರ ಮಾನಸ ಮಾಸ ಪತ್ರಿಕೆಯಲ್ಲಿ ಹೊಸ ಅಂಕಣವಾಗಿ ಪ್ರಕಟವಾಗಿದೆ, ಒಮ್ಮೆ ಓದಿ ನೋಡಿ. )


ಪ್ರತಿನಿತ್ಯ ನಾವು ನಡೆದಾಡುವೆಡೆಗಳಲ್ಲಿ ಇವರನ್ನು ಒಮ್ಮೆ  ನೋಡಿಯೇ ಇರುತ್ತೇವೆ.  ಆದರೆ ಎಲ್ಲೋ ಒಮ್ಮೊಮ್ಮೆ ಮಾತ್ರ ಮಾತನಾಡಿಸಿರುತ್ತೇವೆ ಅಥವಾ ಮಾತನಾಡಿಸಿರುವುದೇ ಇಲ್ಲ!  ಆದರೂ ಅವರು ನಮ್ಮ ಇಂದಿನ ಆಧುನಿಕ ಜೀವನದ ಅವಿಭಾಜ್ಯ ಅಂಗವಾಗಿದ್ದಾರೆ, ಅವರೇ "ಭದ್ರತಾ ರಕ್ಷಕರು".  ಆಂಗ್ಲದಲ್ಲಿ "ಸೆಕ್ಯುರಿಟಿ ಗಾರ್ಡ್" ಎಂದು ಕರೆದರೆ ಕೆಲವೊಮ್ಮೆ ಇವರು ಕೇವಲ "ವಾಚ್ಮನ್" ಎಂದೂ ಕರೆಯಲ್ಪಡುತ್ತಾರೆ.  ಬ್ಯಾಂಕುಗಳಲ್ಲಿ, ದೊಡ್ಡ ದೊಡ್ಡ ಹೋಟೆಲ್ಲುಗಳಲ್ಲಿ, ಆಸ್ಪತ್ರೆಗಳಲ್ಲಿ, ವಾಣಿಜ್ಯ ಸಂಕೀರ್ಣಗಳಲ್ಲಿ, ವಸತಿ ಸಂಕೀರ್ಣಗಳಲ್ಲಿ, ಕಾರ್ಖಾನೆಗಳಲ್ಲೀ, ಸಮವಸ್ತ್ರ ಧರಿಸಿದ ಇವರನ್ನು ನಿತ್ಯವೂ ಕಾಣಬಹುದು.  ನಿಮ್ಮ ದೈನಂದಿನ ಕಾರ್ಯಗಳಿಗೆಂದು ನೀವು ತಲೆ ಕೆಡಿಸಿಕೊಳ್ಳುವಾಗ ಒಂದಿಲ್ಲೊಂದು ಸಮಯದಲ್ಲಿ ಅವರು ನಿಮಗೆ ಸಹಾಯ ಮಾಡುತ್ತಿರುತ್ತಾರೆ, ಕೆಲವೊಮ್ಮೆ ಒಂದು ಮುಗುಳ್ನಗುವಿನೊಡನೆ ಒಂದು "ಥ್ಯಾಂಕ್ಸ್" ಸಿಕ್ಕರೆ ಬಹಳ ಖುಷಿಯಾಗುತ್ತಾರೆ.  ಎಲ್ಲರೂ ತಂತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿ, ಮನೆಗೆ ಹಿಂದಿರುಗಿ, ತಮ್ಮ ಕುಟುಂಬದೊಡನೆ ಇದ್ದಾಗ, ಇವರು ಮಾತ್ರ ತಮ್ಮ ಕೆಲಸದಲ್ಲೇ ಇರುತ್ತಾರೆ!  ರಾತ್ರಿ ಪಾಳಿಯ ಜೊತೆಗಾರ ಬರುವವರೆಗೂ ದಿನದ ಪಾಳಿಯವನು ಕಣ್ಣಲ್ಲಿ ಕಣ್ಣಿಟ್ಟು ತಾನಿರುವ ಜಾಗದ ರಕ್ಷಣೆಯ ಹೊಣೆ ಹೊತ್ತಿರುತ್ತಾನೆ.

ದೇಶ ಕಾಯಲು ಸೈನಿಕರು, ಊರಿನ ರಕ್ಷಣೆಗೆ ಪೊಲೀಸರು ಇದ್ದಂತೆ, ಒಂದು ಸಂಸ್ಥೆಯ ರಕ್ಷಣೆಗೆ ಈ ಭದ್ರತಾ ರಕ್ಷಕರಿರುತ್ತಾರೆ.  ಹಿಂದೆಲ್ಲಾ ಒಂದು ಖಾಕಿ ಶರ್ಟು, ಪ್ಯಾಂಟು ತೊಟ್ಟು, ಗೇಟಿನ ಬಳಿಯಲ್ಲಿ ಬೀಡಿ ಸೇದುತ್ತಾ ನಿಂತಿರುವ "ವಾಚ್ಮನ್"ಗಳನ್ನು ಕಾಣಬಹುದಾಗಿತ್ತು.  ಅವರಿಗೆ ಯಜಮಾನರ ಕಾರು ಬಂದರೆ ಗೇಟು ತೆಗೆಯುವ ಮತ್ತು ಮುಚ್ಚುವ ಕಾಯಕವಷ್ಟೇ ಗೊತ್ತಿರುತ್ತಿತ್ತು.  ಆದರೆ ಜಾಗತೀಕರಣದ ಪರಿಣಾಮವಾಗಿ ಉದ್ಯಮಗಳ ಹಾಗೂ ನಿತ್ಯಜೀವನದ ರೂಪ ಬದಲಾಗುತ್ತಾ ಹೋದಂತೆ ಈ "ವಾಚ್ಮನ್"ಗಳ ಸ್ವರೂಪವೂ ಬದಲಾಯಿತು.  ಕೇವಲ ಕೆಲವು ನಿವೃತ್ತ ಸೈನಿಕರು ನಡೆಸುತ್ತಿದ್ದ ಭದ್ರತಾ ಉದ್ಯಮದಲ್ಲಿಯೂ ಬಹುರಾಷ್ಟ್ರೀಯ ಕಂಪನಿಗಳ ಪ್ರವೇಶವಾಯಿತು.  ತತ್ಫಲವಾಗಿ ಇಡೀ ಉದ್ಯಮದ ಚಿತ್ರಣವೇ ಬದಲಾಗಿ ಹೋಯಿತು.  ಇಂದು ನಮ್ಮ ಉದ್ಯಾನನಗರಿ ಬೆಂಗಳೂರಿನಲ್ಲಿಯೇ ಸುಮಾರು ಎರಡು ಲಕ್ಷಕ್ಕಿಂತ ಹೆಚ್ಚು ಭದ್ರತಾ ರಕ್ಷಕರಿದ್ದಾರೆ ಎಂದರೆ ನಂಬಲಸಾಧ್ಯ!  ಮುಂಬೈ ಮೇಲೆ ನಡೆದ ಉಗ್ರರ ಧಾಳಿಯ ನಂತರವಂತೂ ಇಡೀ ಭದ್ರತಾ ಸಂಸ್ಥೆಗಳ ಸ್ವರೂಪ ತೀವ್ರತರವಾಗಿ ಬದಲಾಗಿ ಇಂದು ದೇಶದಲ್ಲಿರುವ ಪೊಲೀಸರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ರಕ್ಷಕರನ್ನು ಕಾಣಬಹುದಾಗಿದೆ.  ಒಂದು ಅಧ್ಯಯನದ ಪ್ರಕಾರ  ದೇಶದಾದ್ಯಂತ ಸುಮಾರು ಹದಿನೈದು ಸಾವಿರ ಖಾಸಗಿ ಭದ್ರತಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು ಐವತ್ತು ಲಕ್ಷಕ್ಕಿಂತ ಹೆಚ್ಚು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿವೆ.  ಇಡೀ ದೇಶದಲ್ಲಿನ ಪೊಲೀಸರ ಸಂಖ್ಯೆ ಸುಮಾರು ಮುವ್ವತ್ತೈದು ಲಕ್ಷವೆಂದು ಅದೇ ವರದಿ ತಿಳಿಸುತ್ತದೆ. ಇತ್ತೀಚೆಗಿನ ವರದಿಗಳ ಪ್ರಕಾರ ಭದ್ರತಾ ಉದ್ಯಮದ ವಾರ್ಷಿಕ ವಹಿವಾಟು ರೂ. ೨೨,೦೦೦ ಕೋಟಿಯಿದ್ದು ೨೦೧೫ರಲ್ಲಿ ಇದು ರೂ. ೪೦,೦೦೦ ಕೋಟಿಗಳನ್ನು ದಾಟಬಹುದೆಂದು ಅಂದಾಜಿಸಲಾಗಿದೆ೨೦೦೬ರಲ್ಲಿ ಸುಮಾರು ೧೦,೦೦೦ ಕೋಟಿಯನ್ನು ಪ್ರಾವಿಡೆಂಟ್ ಫಂಡ್, .ಎಸ್ಆಯ್  ಮತ್ತು ಸರ್ವೀಸ್ ಟ್ಯಾಕ್ಸ್ ಎಂದು ಸರ್ಕಾರಕ್ಕೆ ಪಾವತಿಸಲಾಗಿರುವುದು ಭದ್ರತಾ ಉದ್ಯಮದ ಹಿರಿಮೆಗೆ ಸಾಕ್ಷಿಯಾಗಿದೆಬರಲಿರುವ ವರ್ಷಗಳಲ್ಲಿ ಇದು ಅದಿನ್ನೆಷ್ಟು ಕೋಟಿಗಳನ್ನು ಮುಟ್ಟಲಿದೆಯೋ ಎಂದು ಆರ್ಥಿಕ ತಜ್ಞರೇ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆಂದರೆ ಅತಿಶಯೋಕ್ತಿಯಾಗಲಾರದುಇಷ್ಟೊಂದು ಬೃಹತ್ತಾಗಿ ಬೆಳೆಯುತ್ತಿರುವ ಭದ್ರತಾ ವಲಯದಲ್ಲಿ, ಬರಲಿರುವ ವರ್ಷಗಳಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುತ್ತಿದ್ದು ವಿದ್ಯಾವಂತ ನಿರುದ್ಯೋಗಿಗಳಿಗೆ ಭವಿಷ್ಯದ ಆಶಾಕಿರಣವಾಗಿದೆ
ಉದ್ಯೋಗಕ್ಕಾಗಿ ಬರುವವರಲ್ಲಿಯೂ ವಿವಿಧ ರೀತಿಯ ಜನರನ್ನು ಕಾಣಬಹುದುಓದಲಾಗದೆ ಕಾಲೇಜು ಬಿಟ್ಟವರು, ಓದಿಯೂ ಸರಿಯಾದ ಕೆಲಸ ಸಿಗದೇ ನಿರುದ್ಯೋಗಿಗಳಾಗಿ ಅತಂತ್ರರಾಗಿರುವವರು, ಪೊಲೀಸ್ ಅಥವಾ ಮಿಲಿಟರಿಗೆ ಸೇರಬೇಕೆಂದುಕೊಂಡು ಸಾಧ್ಯವಾಗದೆ ನಿರಾಶರಾದವರು, ಮನೆಯಲ್ಲಿ ಮಕ್ಕಳಿಂದ, ಸೊಸೆಯಂದಿರಿಂದ ತಿರಸ್ಕೃತರಾದ ಹಿರಿಯ ಜೀವಗಳು, ಮನೆಯ ಜವಾಬ್ಧಾರಿಯನ್ನು ನಿಭಾಯಿಸಲೇಬೇಕಾದ ಒತ್ತಡದಲ್ಲಿ ಬೇರಾವುದೇ ಕೆಲಸ ಸಿಗದೇ ನಿರಾಶರಾದವರು, ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಜೀವನದಲ್ಲಿ ನೊಂದವರೆಲ್ಲಾ ಇಲ್ಲಿ ಸಿಗುತ್ತಾರೆಪ್ರತಿಯೊಬ್ಬ ಭದ್ರತಾ ರಕ್ಷಕನ ಬೆನ್ನ ಹಿಂದೆ ಒಂದು ೭೦ ಎಂ ಎಂ ಸಿನಿಮಾಸ್ಕೋಪ್ ಚಲನಚಿತ್ರ ತೆಗೆಯಬಹುದಾದಂಥ ರಮ್ಯವಾದ ಕಥೆಯಿರುತ್ತದೆಅದೆಷ್ಟೋ ಪದವೀಧರರು ನಮ್ಮ ದೇಶದ ಜಾತಿ ರಾಜಕೀಯ, ಮೀಸಲಾತಿಗಳಿಂದ ಸರ್ಕಾರಿ ನೌಕರಿ ಸಿಗದೇ ನಗರಗಳಿಗೆ ವಲಸೆ ಬಂದು ಭದ್ರತಾ ರಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆಭಾರತೀಯ ಸೇನೆ, ನೌಕಾಪಡೆ, ವಾಯುಸೇನೆಯಿಂದ ನಿವೃತ್ತರಾದ ಅದೆಷ್ಟೋ ಅಧಿಕಾರಿಗಳು ತಮ್ಮದೇ ಆದ ಸಂಸ್ಥೆಗಳನ್ನು ಸ್ಥಾಪಿಸಿ , ಇಂತಹ ವಿದ್ಯಾವಂತರನ್ನು ತರಬೇತುಗೊಳಿಸಿ ಸಮಾಜದ ಭದ್ರತೆಗೆ, ತಮ್ಮ ನಿವೃತ್ತಿಯ ನಂತರವೂ, ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆಒಟ್ಟಾರೆ ಹೇಳಬೇಕೆಂದರೆ ಭದ್ರತಾ ಉದ್ಯಮದಲ್ಲಿ ತೊಡಗಿಸಿಕೊಂಡ  ಪ್ರತಿಯೊಬ್ಬ ಭದ್ರತಾ ರಕ್ಷಕನೂ ದೇಶ ಕಾಯುವ ಸೈನಿಕನಿಗಿಂತ ಯಾವುದೇ ರೀತಿಯಲ್ಲಿಯೂ ಕಡಿಮೆಯಿಲ್ಲ.
ಇಂತಹ ಭದ್ರತೆಯ ಲೋಕದಲ್ಲಿ ಕೆಲಸ ಮಾಡುವವರು ಎಂಥವರುಅವರ ಸ್ಥಿತಿಗತಿಗಳೇನುತಮ್ಮ ದೈನಂದಿನ ಕೆಲಸದಲ್ಲಿ ಅವರು ಎದುರಿಸುವ ಸಮಸ್ಯೆಗಳೇನುಸಮಾಜ ಅವರನ್ನು ಹೇಗೆ ನಡೆಸಿಕೊಳ್ಳುತ್ತಿದೆಹೇಗೆ ಅವರ ಜೀವನಮಟ್ಟವನ್ನು ಸುಧಾರಿಸಬಹುದುಹೇಗೆ ಮತ್ತಷ್ಟು ಪರಿಣಾಮಕಾರಿಯಾಗಿ ಈ ಭದ್ರತಾ ರಕ್ಷಕರನ್ನು ಉಪಯೋಗಿಸಿಕೊಂಡು ನಮ್ಮ ಸಮಾಜವನ್ನು ಮತ್ತಷ್ಟು ಸುಭದ್ರಗೊಳಿಸಬಹುದು? ನಮ್ಮ ದೇಶದಲ್ಲಿರುವಂತೆಯೇ ಹೊರದೇಶಗಳಲ್ಲಿಯೂ ಭದ್ರತಾ ರಕ್ಷಕರ ಜೀವನ ಹೇಗಿದೆನಮ್ಮ ಹಾಗೂ ಮುಂದುವರಿದ ದೇಶಗಳ ಭದ್ರತಾ ರಕ್ಷಕರಿಗೂ ಏನು ವ್ಯತ್ಯಾಸ? ಹೀಗೆ ನೂರೆಂಟು ಅಂಶಗಳ ಬಗ್ಗೆ ಈ ಅಂಕಣದಲ್ಲಿ ವಿವರಿಸಲಿದ್ದೇನೆ.  ಓದಿ, ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.  ಕೊನೆಯದಾಗಿ ಒಂದು ಮಾತು: ಎಲ್ಲಾದರೂ ನಿಮ್ಮ ನಿತ್ಯ ಜೀವನದಲ್ಲಿ ಒಬ್ಬ ಭದ್ರತಾ ರಕ್ಷಕನ ಜೊತೆ ನೀವು ಮುಖಾಮುಖಿಯಾಗುವಂಥ ಸನ್ನಿವೇಶ ಬಂದಲ್ಲಿ ಅವನಿಗೊಂದು "ಥ್ಯಾಂಕ್ಸ್" ಹೇಳಲು ಮರೆಯದಿರಿ!