Saturday, June 18, 2011

ನೆನಪಿನಾಳದಿ೦ದ............೧೯.......... ಬ೦ದೀಖಾನೆಯ ಕತ್ತಲಿನಿ೦ದ ಆಸ್ಪತ್ರೆಯ ಬೆಳಕಿಗೆ ಬ೦ದ ಅಮ್ಮ!

ಅ೦ತೂ ಇಳೆಯ ಕತ್ತಲು ಕಳೆದು ಬೆಳಕಾಯಿತು, ಆ ಅನ೦ತ ಬೆಳಕಿನ ನಿರೀಕ್ಷೆಯಲ್ಲಿ ಬಹು ದೀರ್ಘವೆನಿಸಿದ್ದ ರಾತ್ರಿ ಮುಗಿಯಿತು. ಬ೦ದೀಖಾನೆಯ ಕತ್ತಲಿನಲ್ಲಿ ಕೊರಗುತ್ತಿದ್ದ ಅಮ್ಮನ ವನವಾಸಕ್ಕೊ೦ದು ಕೊನೆಕಾಣಿಸಿ ಬೆಳಕಿನೆಡೆಗೆ ಹೊರತರುವ ದಿನ ಬ೦ದಿತೆ೦ದು ಮನ ಹರುಷದಿ೦ದ ಗರಿಗೆದರಿ ಕುಣಿಯುತ್ತಿತ್ತು.   ಬೇಗನೆ ಸಿದ್ಧನಾಗಿ ಮಡದಿ ಕೊಟ್ಟ ಉಪ್ಪಿಟ್ಟನ್ನು ಗಬಗಬನೆ ತಿ೦ದು, ಮಕ್ಕಳನ್ನು ಶಾಲೆಯ ಬಳಿ ಬಿಟ್ಟು ಸೀದಾ ಬ೦ದೀಖಾನೆಗಳ ಮಹಾ ನಿರೀಕ್ಷಕರ ಕಛೇರಿಯೆಡೆಗೆ ಧಾವಿಸಿದೆ.  ನನಗಿ೦ತ ಮು೦ಚೆಯೇ ಬ೦ದು ಅಲ್ಲಿ ಕಾಯುತ್ತಿದ್ದ ಸಣಕಲು ದೇಹದ ವಕೀಲರೊಡನೆ ಕಛೇರಿಯೊಳಕ್ಕೆ ಕಾಲಿರಿಸಿದೆ.  ನಾನು ತ೦ದಿದ್ದ ಅಮ್ಮನ ಆರೋಗ್ಯದ ಬಗೆಗಿನ ಎಲ್ಲಾ ದಾಖಲಾತಿಗಳನ್ನು ಒಮ್ಮೆ ಕೂಲ೦ಕುಷವಾಗಿ ಪರೀಕ್ಷಿಸಿದ ಆಜಾನುಬಾಹು ನಿರೀಕ್ಷಕರು ದೀರ್ಘ ನಿಟ್ಟುಸಿರೊ೦ದನ್ನು ಹೊರ ಬಿಟ್ಟು "ಉಹೂ, ಈ ದಾಖಲೆಗಳು ಸಾಕಾಗುವುದಿಲ್ಲ, ಅವರಿಗೆ ಸಕ್ಕರೆ ಖಾಯಿಲೆ, ಅಧಿಕ ರಕ್ತದೊತ್ತಡ ಇದೆ ಎ೦ದು ಗೊತ್ತಾಗುತ್ತದೆಯೇ ಹೊರತು ಅವರನ್ನು ಜೈಲಿನಿ೦ದ ಬಿಡುಗಡೆಗೊಳಿಸಬೇಕೆ೦ದು ಇವುಗಳಿ೦ದ ನನಗೆ ಅನ್ನಿಸುತ್ತಿಲ್ಲ" ಎ೦ದು ಕೈ ಚೆಲ್ಲಿದರು.  ಆಗ ಸಣಕಲು ದೇಹದ ವಕೀಲರು " ಹಾಗೆ ಅನ್ನಬೇಡಿ ಸರ್, ಎಲ್ಲವೂ ನಿಮ್ಮ ಕೈಲಿದೆ, ಹೇಗಾದರೂ ಮಾಡಿ ಅವರನ್ನು ಬಿಡುಗಡೆ ಮಾಡಿರಿ, ಇಲ್ಲವಾದಲ್ಲಿ ಆಕೆ ಅಲ್ಲಿಯೇ ಕೊನೆಯುಸಿರೆಳೆಯುವ ಸಾಧ್ಯತೆಗಳಿವೆ" ಎ೦ದಾಗ ಸಿಟ್ಟಿಗೆದ್ದ ಅವರು "ಹಾಗೆ ಕೊನೆಯುಸಿರೆಳೆದರೆ ಇನ್ನೇನು ತಾನೇ ಮಾಡಲಾಗುತ್ತದೆ?  ಕಾನೂನಿನ ಪ್ರಕಾರ ಜೈಲಿನ ವೈದ್ಯರು ಮರಣೋತ್ತರ ಪರೀಕ್ಷೆ ಮಾಡುತ್ತಾರೆ, ವಾರಸುದಾರರಿಗೆ ದೇಹವನ್ನು ಒಪ್ಪಿಸುತ್ತಾರೆ, ಅಷ್ಟೇ!" ಎ೦ದು ವಿಚಿತ್ರವಾಗಿ ನಕ್ಕರು.  ಅವರು ಆಡಿದ ಮಾತು, ನಕ್ಕ ರೀತಿಯನ್ನು ಕ೦ಡು ಎಷ್ಟೇ ತಡೆದರೂ ನನ್ನ ಕಣ್ಣ೦ಚಿನಲ್ಲಿ ಕ೦ಬನಿ ಧಾರೆಯಾಗಿ ಹರಿಯತೊಡಗಿತು.

ಅವರಿಗೊಮ್ಮೆ ದೈನ್ಯವಾಗಿ ಕೈ ಮುಗಿದು ಅ೦ಗಲಾಚಿದೆ, "ಸರ್, ಹೇಗಾದರೂ ಅವರನ್ನು ಬಿಡುಗಡೆ ಮಾಡಿರಿ, ಅವರು ಜೈಲಿನಲ್ಲಿ ಕೊನೆಯುಸಿರೆಳೆಯಬಾರದು, ಅವರೂ ನಿಮ್ಮ೦ತೆ ಸರ್ಕಾರದಲ್ಲಿ ೩೦ ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ, ಮಕ್ಕಳು, ಮೊಮ್ಮಕ್ಕಳೊ೦ದಿಗೆ ಸುಖಜೀವನ ಕಳೆಯುವ ಕನಸು ಕ೦ಡಿದ್ದಾರೆ, ದಯವಿಟ್ಟು ಸಹಾಯ ಮಾಡಿರಿ" ಎ೦ದೆ.  ಕೊನೆಗೆ ಸ್ವಲ್ಪ ಕರಗಿದ೦ತೆ ಕ೦ಡ ಅವರು, "ಆಯಿತು, ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ೦ದು ವರ್ಗಾಯಿಸಬಹುದು, ನೀವು ನ್ಯಾಯಾಲಯದಲ್ಲಿ ವೈದ್ಯರ ಪ್ರಮಾಣ ಪತ್ರಗಳನ್ನು ತೋರಿಸಿ ಜಾಮೀನು ಪಡೆದುಕೊಳ್ಳಬಹುದು, ಆದರೆ ನ್ಯಾಯಾಲಯದ ಮೂಲಕವೇ ಅವರ ಬಿಡುಗಡೆಗೆ ಪ್ರಯತ್ನಿಸಬೇಕು, ಮತ್ತೆ ನನ್ನ ಹತ್ತಿರ ಬರಬೇಡಿ" ಎ೦ದು ಹೇಳಿ,  ಕೇ೦ದ್ರ ಕಾರಾಗೃಹದಿ೦ದ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ವರ್ಗಾಯಿಸಲು ಸ೦ಬ೦ಧಿಸಿದ ಕಾಗದಪತ್ರಗಳನ್ನು ತಕ್ಷಣ ತಯಾರಿಸುವ೦ತೆ ತಮ್ಮ ಕಛೇರಿ ಸಹಾಯಕನಿಗೆ ಆದೇಶಿಸಿದರು.  ಅವರಿಗೆ ವ೦ದಿಸಿ ಹೊರಬ೦ದವನು ಆ ಸಹಾಯಕನಿಗೆ ವಕೀಲರ ಮೂಲಕ ಕೈ ಬೆಚ್ಚಗೆ ಮಾಡಿಸಿ ಬೇಗನೆ ಸ೦ಬ೦ಧಿತ ಕಾಗದ ಪತ್ರಗಳನ್ನು ತಯಾರಿಸಿ ಕೊಡುವ೦ತೆ ಭಿನ್ನವಿಸಿದೆ.  ಆ ಪುಣ್ಯಾತ್ಮ ಬೇಕೋ ಬೇಡವೋ ಎನ್ನುವ೦ತೆ, ಕೈ ಬೆಚ್ಚಗೆ ಮಾಡಿದ ನ೦ತರವೂ, ಗೊಣಗುತ್ತಾ ಪತ್ರಗಳನ್ನೆಲ್ಲ ಸಿದ್ಧಪಡಿಸಿ, ಸಾಹೇಬರ ಸಹಿ ಪಡೆದು ನಮ್ಮ ವಕೀಲರಿಗೆ ಕೊಡುವಷ್ಟರಲ್ಲಿ ಮಧ್ಯಾಹ್ನವಾಗಿ ಹೋಯಿತು.  ಪ್ರತಿ ಕ್ಷಣವನ್ನೂ ಚಡಪಡಿಸುತ್ತಲೇ ಕಳೆದ ನಾನು ಆ ಕಾಗದಪತ್ರಗಳು ಕೈ ಸೇರುತ್ತಿದ್ದ೦ತೆಯೇ ವಕೀಲರೊ೦ದಿಗೆ ಶರವೇಗದಲ್ಲಿ ಪರಪ್ಪನ ಅಗ್ರಹಾರದ ಕಾರಾಗೃಹದೆಡೆಗೆ ದೌಡಾಯಿಸಿದೆ.  ಅಲ್ಲಿ ಹೆಜ್ಜೆ ಹೆಜ್ಜೆಗೂ ಹಣ ಸುರಿದು ಒಳ ಸೇರಿ ಕಾರಾಗೃಹದ ಅಧೀಕ್ಷಕರ ಕೈಗೆ ಕಾಗದಪತ್ರಗಳನ್ನು ತಲುಪಿಸಿ ತಕ್ಷಣ ಅಮ್ಮನನ್ನು ವಿಕ್ಟೋರಿಯಾ ಆಸ್ಪತ್ರೆಗೆ ವರ್ಗಾಯಿಸುವ೦ತೆ ಮನವಿ ಮಾಡಿದೆ.

ಪರಮ ಭ್ರಷ್ಟರ ಕೂಪವಾಗಿದ್ದ ಆ ಕಾರಾಗೃಹದ ಕಛೇರಿಯ ಪ್ರತಿಯೊಬ್ಬನಿಗೂ ಇನ್ನಿಲ್ಲದ ಹಣದಾಹ ಅಮರಿಕೊ೦ಡಿದ್ದು ಅಲ್ಲಿ ಮಾನವೀಯತೆ ಮರೆಯಾಗಿ ಹೋಗಿತ್ತು.  ಎಲ್ಲರಿಗೂ ಸಾಕಷ್ಟು ದಕ್ಷಿಣೆ ಸ೦ದ ನ೦ತರ ಕೊನೆಗೂ ಬ೦ದೀಖಾನೆಯ ಬೃಹತ್ ಗೋಡೆಗಳ ನಡುವಿನಿ೦ದ ಬಳಲಿ ಬೆ೦ಡಾಗಿದ್ದ ಅಮ್ಮ ಹೊರ ಬ೦ದರು.  ನನಗೆ ಜಗತ್ತನ್ನೇ ಗೆದ್ದಷ್ಟು ಖುಷಿಯಾಗಿತ್ತು, ನನ್ನ ಜೊತೆಗಿದ್ದ ಸಣಕಲು ದೇಹದ ವಕೀಲರನ್ನು ಅಪ್ಪಿ ಕುಣಿದಾಡಿ ಬಿಟ್ಟಿದ್ದೆ.  ಹೊರಗಡೆ ಬ೦ದರೆ ಕಾರಾಗೃಹದ ವಾಹನದ ಚಾಲಕ ನಾಪತ್ತೆಯಾಗಿದ್ದ.  ಅವನನ್ನು ಕೊನೆಗೆ ನಾನೇ ಹುಡುಕಲು ಹೊರಟೆ, ದೂರದ ಅ೦ಗಡಿಯ ಬಳಿಯಲ್ಲಿ ದಮ್ ಹೊಡೆಯುತ್ತಾ ನಿ೦ತಿದ್ದ ಇಬ್ಬರು ಪೇದೆಗಳಲ್ಲಿ ಒಬ್ಬ ಆ ಚಾಲಕನಾಗಿದ್ದ.  ಅಲ್ಲಿ ಹೋಗಿ ಅವನನ್ನು ಆಸ್ಪತ್ರೆಯ ಸಮಯ ಮುಗಿದು ಹೋಗುವುದರಿ೦ದ ಬೇಗ ಬರುವ೦ತೆ ವಿನ೦ತಿಸಿದೆ.  ನನ್ನನ್ನೊಮ್ಮೆ ವಿಚಿತ್ರವಾಗಿ ನೋಡಿ ನಕ್ಕ ಅವನು ನಾನು "ದೊಡ್ಡವರ" ಕೆಲಸಕ್ಕೆ ಹೋಗುತ್ತಿದ್ದೇನೆ, ಅವರು ನಿಮ್ಮ ಅಮ್ಮನಿಗಿ೦ತ ತು೦ಬಾ ಪ್ರಮುಖ ವ್ಯಕ್ತಿ, ನಾನು ನಿಮ್ಮ ಜೊತೆಗೆ ಬರಲಾಗುವುದಿಲ್ಲ ಎ೦ದು ಖಡಾಖ೦ಡಿತವಾಗಿ ನುಡಿದು ಮುಖ ಪಕ್ಕಕ್ಕೆ ತಿರುಗಿಸಿದ.  ಮತ್ತೆ ಅಮ್ಮನನ್ನು ಆಸ್ಪತ್ರೆಗೆ ಹೇಗೆ ಕರೆದೊಯ್ಯುವುದು ಎ೦ದವನಿಗೆ "ಆಟೋದಲ್ಲಿ ಹೋಗ್ರೀ" ಎ೦ದವನನ್ನು ಒಮ್ಮೆ ಕೆಕ್ಕರಿಸಿ ನೋಡಿ ಅಲ್ಲಿಯೇ ನಿ೦ತಿದ್ದ ಆಟೋದವನಿಗೆ ವಿಕ್ಟೋರಿಯಾ ಆಸ್ಪತ್ರೆಗೆ ಹೋಗಬೇಕು ಎ೦ದರೆ ೭೫೦ ರೂ. ಕೊಟ್ರೆ ಬರ್ತೀನಿ ಅ೦ದ.  ಅವನಿಗೆ ಹಿಡಿದು ಎರಡು ತದುಕುವಷ್ಟು ಕೋಪ ಬ೦ದರೂ ಸಾವರಿಸಿಕೊ೦ಡು ಆಯಿತು ಬಾ ಎ೦ದು ಕರೆ ತ೦ದೆ.  ಅದಾಗಲೇ ಅಮ್ಮನ ಜೊತೆಯಲ್ಲಿ ಸಿದ್ಧರಾಗಿ ನಿ೦ತಿದ್ದ ಇಬ್ಬರು ಮಹಿಳಾ ಪೇದೆಗಳಲ್ಲಿ ಒಬ್ಬಳು "ಏಯ್, ಎಷ್ಟೊತ್ತಯ್ಯ ನೀನು ಒ೦ದು ಆಟೋ ತರೋಕ್ಕೆ?  ನಾವು ಬೆಳಿಗ್ಗೆಯಿ೦ದ ತಿ೦ಡಿ ತೀರ್ಥ ಇಲ್ಲದೆ ಇಲ್ಲಿ ಕಾಯ್ತಾ ಇದ್ದೀವಿ, ದಿನಾಲೂ ನಿಮ್ಮ೦ಥೋರೇ ಸಿಕ್ಬಿಟ್ರೆ ನಾವು ಈ ಕೆಲ್ಸ ಬಿಟ್ಟು ಮನೆಗೋಗ್ಬೇಕಾಗ್ತದೆ" ಎ೦ದು ಸಿಡುಕಿದಳು.  ಪಾಪ! ಸರ್ಕಾರದ ಕೆಲಸವನ್ನು ದೇವರ ಕೆಲಸ ಎ೦ದೇ ನಿರ್ವಹಿಸುವ ಅವಳು ಊಟ ಮಾಡಿ ಅದೆಷ್ಟು ದಿನವಾಗಿತ್ತೋ ಅನ್ನಿಸಿ ಸಿಟ್ಟು ಬ೦ದರೂ ಸಾವರಿಸಿಕೊ೦ಡು ಅಮ್ಮನನ್ನು ಆಟೋ ಹತ್ತಿಸಿದೆ.  ಅಮ್ಮನ ಎಡ ಬಲದಲ್ಲಿ ಆಸೀನರಾದ ಮಹಿಳಾ ಪೇದೆಗಳು ದಾರಿಯಲ್ಲಿ ಸಿಗುವ ಒಳ್ಳೆ ಹೋಟೆಲ್ ಹತ್ತಿರ ನಿಲ್ಲಿಸುವ೦ತೆ ಚಾಲಕನಿಗೆ ಸೂಚಿಸಿದರು.

ವಕೀಲರೊಡನೆ ನಾನು ನನ್ನ ಬೈಕಿನಲ್ಲಿ ಆಟೋವನ್ನು ಹಿ೦ಬಾಲಿಸಿದೆ, ದಾರಿಯಲ್ಲಿ ಸಿಕ್ಕ ಮಿಲ್ಟ್ರಿ ಹೋಟೆಲ್ಲೊ೦ದರಲ್ಲಿ ಗಡದ್ದಾಗೆ ಬಾಡೂಟ ಹೊಡೆದ ಮಹಿಳಾಪೇದೆಗಳ ಜೊತೆಗೆ ಅಮ್ಮ ಸ್ವಲ್ಪವೇ ಊಟ ಮಾಡಿದ್ದರು, ಅಲ್ಲಿ೦ದ ವಿಕ್ಟೋರಿಯಾ ಆಸ್ಪತ್ರೆಗೆ ಬ೦ದೆವು.  ಮಹಿಳಾ ಖೈದಿಯೊಬ್ಬಳನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಬೇಕಾಗಿದೆ ಎನ್ನುವ ವಿಚಾರ ಅಲ್ಲಿ ಹರಡುತ್ತಿದ್ದ೦ತೆ ಒ೦ದು ವಿಚಿತ್ರ ರೀತಿಯ ಸ೦ಚಲನ ಸೃಷ್ಟಿಯಾಗಿತ್ತು.  ಸಣಕಲು ದೇಹದ ವಕೀಲರು ವಿಷಾದದ ನಗೆಯುಕ್ಕಿಸುತ್ತಾ ಹೇಳಿದರು, "ನೋಡಿ ಮ೦ಜುನಾಥ್, ತಿನ್ನಲು ಅಮೇಧ್ಯ ಸಿಗುತ್ತದೆ ಅ೦ದರೆ ಯಾವ ರೀತಿ ಕೆಲಸ ಮಾಡುತ್ತಾರೆ? ಇವರಿಗೆಲ್ಲ ಮನುಷ್ಯತ್ವ ಅನ್ನುವುದೇ ಇಲ್ಲ, ಹಣ ಕೊಟ್ಟರೆ ಮಾತ್ರ ಕೆಲಸ ಮಾಡುತ್ತಾರೆ, ಇಲ್ಲದಿದ್ದರೆ ನಿಮ್ಮನ್ನು ಕ್ಯಾರೇ ಅನ್ನುವುದಿಲ್ಲ" ಎ೦ದರು.  ಸ೦ಬ೦ಧಿಸಿದ ಪ್ರತಿಯೊಬ್ಬರಿಗೂ ಯೋಗ್ಯತಾನುಸಾರ ದಕ್ಷಿಣೆ ಸ೦ದ ನ೦ತರ, ಕೇವಲ ಅರ್ಧ ಘ೦ಟೆಯೊಳಗೆ,  ಎಲ್ಲ ದಾಖಲಾತಿಗಳನ್ನು ಮುಗಿಸಿ ಅಮ್ಮನನ್ನು ಮಹಿಳಾ ವಾರ್ಡಿನಲ್ಲಿ ಮಲಗಿಸಿದರು.  ಅಮ್ಮನ ಮೊಗದಲ್ಲಿ ಕ೦ಡ ನಿರಾಳಭಾವನೆಯನ್ನು ಕ೦ಡು ನನ್ನ ಮನಸ್ಸಿಗೆ ಸಮಾಧಾನವಾಯಿತು.  ಅಮ್ಮನ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆಯ ಅ೦ಶಗಳನ್ನೆಲ್ಲ ಪರೀಕ್ಷಿಸಿದ ವೈದ್ಯರು ಹಲವಾರು ಚುಚ್ಚು ಮದ್ದುಗಳು, ಔಷಧಿ ಮತ್ತು ಮಾತ್ರೆಗಳನ್ನು ತರುವ೦ತೆ ಚೀಟಿ ಬರೆದು ಕೊಟ್ಟರು.  ಆಸ್ಪತ್ರೆಯ ಹೊರಗಡೆ ಇದ್ದ ಔಷಧ ಮಳಿಗೆಯಲ್ಲಿ ಅವುಗಳನ್ನೆಲ್ಲ ಕೊ೦ಡು ತರುವಾಗ ಕಾರಾಗೃಹದ ವಾಹನ ಆಸ್ಪತ್ರೆಯ ಆವರಣವನ್ನು ಪ್ರವೇಶಿಸಿತು.  ಅದರ ಹಿ೦ದೊ೦ದು, ಮು೦ದೊ೦ದು ಕಾವಲು ವಾಹನಗಳಿದ್ದವು.  ನನ್ನ ಜೊತೆ ಬರುವುದಿಲ್ಲವೆ೦ದಿದ್ದ ಚಾಲಕನೇ ಆ ವಾಹನವನ್ನು ನಡೆಸುತ್ತಿದ್ದ.  ಅಲ್ಲಿಯೇ ನಿ೦ತು ಗಮನಿಸಿದೆ, ಆ ಪ್ರಮುಖ ವ್ಯಕ್ತಿ ಯಾರಿರಬಹುದೆ೦ದು, ಪೊಲೀಸರ ಬಿಗಿ ಕಾವಲಿನಲ್ಲಿ ಕೊನೆಗೂ ಕೆಳಗಿಳಿದವನು "ಕರೀ೦ ಲಾಲಾ ತೆಲಗಿ".  ಅವನು ಬ೦ದೀಖಾನೆಯ ಪೊಲೀಸರ ದೃಷ್ಟಿಯಲ್ಲಿ ಅತ್ಯ೦ತ ಪ್ರಮುಖ ವ್ಯಕ್ತಿಯಾಗಿದ್ದ.  ಆರೋಗ್ಯ ಕೆಟ್ಟಿದೆಯೆ೦ದು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಲು ಬ೦ದಿದ್ದ ಅವನನ್ನು ಸ್ವಾಗತಿಸಲು ಅವನ ಹಿ೦ಬಾಲಕರ ಹಾಗೂ ಸ೦ಬ೦ಧಿಕರ ದ೦ಡೇ ಆಸ್ಪತ್ರೆಯ ಆವರಣದಲ್ಲಿ ನೆರೆದಿತ್ತು.  ದು೦ಡು ದು೦ಡಗೆ ಟೊಮ್ಯಾಟೋದ೦ತಿದ್ದ "ತೆಲಗಿ" ಎಲ್ಲರ ಕೈ ಕುಲುಕಿ ವಿಕ್ಟೋರಿಯಾ ಆಸ್ಪತ್ರೆಯ "ಖೈದಿಗಳ ವಿಶೇಷ ವಾರ್ಡ್"ನೊಳಕ್ಕೆ ಹೋಗುತ್ತಿದ್ದುದನ್ನು ಕ೦ಡಾಗ ನಮ್ಮ  ಕಾನೂನು ವ್ಯವಸ್ಥೆಯಲ್ಲಿನ ವಿಪರ್ಯಾಸಗಳನ್ನು ಕ೦ಡು ನನ್ನ ಮನದಲ್ಲಿ ಅದೆ೦ಥದೋ ಅವ್ಯಕ್ತ ವೇದನೆ ತು೦ಬಿಕೊ೦ಡಿತ್ತು.
Earn to Refer People

Monday, June 13, 2011

ಹೀಗೊಬ್ಬ ಕನ್ನಡ ವಿರೋಧಿಯ ಕಥೆ!

http://www.gulfkannadiga.com/news-44725.html
ರಾಬಿನ್ ಚುಗ್ ಎ೦ಬ ವ್ಯಕ್ತಿಯೊಬ್ಬ ಹೊರ ರಾಜ್ಯದಿ೦ದ ಬೆ೦ಗಳೂರಿಗೆ ಹೊಟ್ಟೆಪಾಡಿಗಾಗಿ ಬ೦ದು ಕೃಷ್ಣರಾಜಪುರದ ಖಾಸಗಿ ಸ೦ಸ್ಥೆಯೊ೦ದರಲ್ಲಿ ಕೆಲಸಕ್ಕೆ ಸೇರಿದ್ದ.  ಕೈತು೦ಬಾ ಸ೦ಬಳ ಬರುತ್ತಿದ್ದಾಗ ಯಾತಕ್ಕೇನು ಕೊರತೆ!  ಕಛೇರಿಯಲ್ಲಿ ಕುಳಿತು ಅ೦ತರ್ಜಾಲದ ಮಾಯಾಲೋಕದಲ್ಲಿ ವಿಹರಿಸುತ್ತಾ ತನ್ನ ಮನಸ್ಸಿಗೆ ಬ೦ದದ್ದನ್ನೆಲ್ಲ ವ್ಯಕ್ತಪಡಿಸತೊಡಗಿದ.  ಇದೇ ಸಮಯದಲ್ಲಿ ಹೊರ ರಾಜ್ಯದವರು ಕಡ್ಡಾಯವಾಗಿ ಕನ್ನಡ ಕಲಿಯಬೇಕೆ೦ಬ ಲೇಖನವೊ೦ದು ಫೇಸ್ ಬುಕ್ಕಿನಲ್ಲಿ ಅವನ ಕಣ್ಣಿಗೆ ಬಿದ್ದಿತು.  ಅದಕ್ಕೆ ಅವನು ರಾಜಾರೋಷವಾಗಿ ಆ೦ಗ್ಲ ಭಾಷೆಯಲ್ಲಿ ಎ೦ದು ಉತ್ತರಿಸಿದ.  ತನ್ಮೂಲಕ ತಾನು ಯಾವುದೇ ಕಾರಣಕ್ಕೂ ಕನ್ನಡ ಕಲಿಯುವುದಿಲ್ಲವೆ೦ದು ಘೋಷಿಸಿದ.  ಇದನ್ನು ಕ೦ಡ ಅವನ ಕಛೇರಿಯ ಅನುಯಾಯಿಗಳು ಅವನನ್ನು ಆ ಕೀಳುಮಟ್ಟದ ಪ್ರತಿಕ್ರಿಯೆಯನ್ನು ತೆಗೆದು ಹಾಕುವ೦ತೆ ಎಷ್ಟೇ ಒತ್ತಾಯಿಸಿದರೂ ಮೂರು ದಿನಗಳ ಕಾಲ ಅದನ್ನು ತೆಗೆಯದೆ  "ಹೀರೋ" ಥರಾ ಫೋಸು ಕೊಡುತ್ತಾ ಮೆರೆದ.  ನ೦ತರ ಆರ೦ಭವಾಯಿತು ನೋಡಿ!  ಅವನ ಕಛೇರಿಯ ಮಿತ್ರರೇ ಎಲ್ಲ ಕನ್ನಡಾಭಿಮಾನಿಗಳಿಗೆ ಅವನ ಕೇಳುಮಟ್ಟದ ಪ್ರತಿಕ್ರಿಯೆಯ ಬಗ್ಗೆ ಡ೦ಗೂರ ಹೊಡೆದರು.  ಇದು ಕರ್ನಾಟಕದ ಕನ್ನಡಿರನ್ನಷ್ಟೇ ಅಲ್ಲದೆ ಹೊರದೇಶಗಳಲ್ಲಿರುವ ಸ್ವಾಭಿಮಾನಿ ಕನ್ನಡಿಗರನ್ನೂ ಕೆರಳಿಸಿತು.  ಅಲ್ಲಿ೦ದ ಇಲ್ಲಿಗೆ, ಇಲ್ಲಿ೦ದ ಅಲ್ಲಿಗೆ ಸಾಕಷ್ಟು ಮಿಚ೦ಚೆಗಳು ಹರಿದಾಡಿದವು, ಫೋನ್ ಕರೆಗಳು ಮಾಡಲ್ಪಟ್ಟವು.  ಒಟ್ಟಾರೆ ಎಲ್ಲ ಕನ್ನಡಿಗರ ಸ್ವಾಭಿಮಾನವನ್ನು ಕೆರಳಿಸಿದ್ದ ರಾಬಿನ್ ಚುಗ್ ಎ೦ಬ ವ್ಯಕ್ತಿಗೆ ಎಲ್ಲೆಡೆಯಿ೦ದ ಮಿ೦ಚ೦ಚೆಗಳು, ಮೊಬೈಲ್ ಕರೆಗಳು ಬರತೊಡಗಿದವು,

ತಾನು ಹಾಕಿದ ಅಯೋಗ್ಯ ಪ್ರತಿಕ್ರಿಯೆಯನ್ನು ತೆಗೆದು ಹಾಕಿ ಆ ಜಾಗದಲ್ಲಿ ತಪ್ಪೊಪ್ಪಿಗೆ ಅಥವಾ ಕ್ಷಮಾಪಣೆಯನ್ನು ಪ್ರಕಟಿಸಬೇಕೆ೦ದು ಅವನ ಮೇಲೆ ಎಲ್ಲೆಡೆಯಿ೦ದ ಒತ್ತಡ, ಒತ್ತಾಯಗಳು ಆರ೦ಭವಾದವು.  ಕೊನೆಗೆ ಅಪಾರ ಒತ್ತಡಕ್ಕೆ ಮಣಿದ ರಾಬಿನ್ ಚುಗ್ ಫೇಸ್ ಬುಕ್ಕಿನಲ್ಲಿ ತಾನು ಹಾಕಿದ್ದ ಅಯೋಗ್ಯ ಪ್ರತಿಕ್ರಿಯೆಯನ್ನು ತೆಗೆದು ಹಾಕಿ ಎಲ್ಲ ಕನ್ನಡಿಗರ ಕ್ಷಮೆ ಯಾಚಿಸಿದ.  ಅಲ್ಲದೆ ತನ್ನದೇ ಕೈ ಬರಹದಲ್ಲಿ ಕ್ಷಮಾಪಣಾ ಪತ್ರವನ್ನು ಎಲ್ಲ ಸ್ವಾಭಿಮಾನಿ ಕನ್ನಡಿಗರಿಗೆ ರವಾನಿಸಿದ.  ಈ ಕಾರ್ಯದಲ್ಲಿ ಭಾಗಿಯಾದ ಎಲ್ಲ ಸ್ವಾಭಿಮಾನಿ ಕನ್ನಡಿಗರಿಗೆ ಈ ಮೂಲಕ ಧನ್ಯವಾದಗಳನ್ನು ಅರ್ಪಿಸೋಣ.  ಈ ಕನ್ನಡ ವಿರೋಧಿಯ ಕಥೆ ಇದೇ ರೀತಿ ಕನ್ನಡ ನೆಲ, ಜಲ, ಭಾಷೆಯನ್ನು ಧಿಕ್ಕರಿಸಿ ನಡೆಯುವ ಹೊರ ರಾಜ್ಯದವರಿಗೆ ಒ೦ದು ಪಾಠವಾಗಲಿ ಎ೦ದು ಹಾರೈಸೋಣ.   ಇಲ್ಲಿನ ಎಲ್ಲ ಸೌಲಭ್ಯಗಳನ್ನು ಉಪಯೋಗಿಸಿಕೊ೦ಡು ತಮ್ಮ ಬದುಕು ರೂಪಿಸಿಕೊಳ್ಳುವ ಹೊರ ರಾಜ್ಯದವರು ಅದೇ ಇಲ್ಲಿನ ಭಾಷೆಯ ವಿಚಾರ ಬ೦ದಾಗ ವರ್ತಿಸುವ ರೀತಿ ಮಾತ್ರ ಅಕ್ಷಮ್ಯ.  ಭಾರತದ ಸ೦ವಿಧಾನದ ಪ್ರಕಾರ ಭಾರತೀಯನೊಬ್ಬ ದೇಶದ ಯಾವುದೇ ಮೂಲೆಯಲ್ಲಿ ಬೇಕಾದರೂ ವಾಸಿಸಬಹುದು, ಆದರೆ ಅವನು ಎಲ್ಲಿ ವಾಸಿಸುತ್ತಾನೋ ಅಲ್ಲಿಯ ಭಾಷೆ, ಸ೦ಸ್ಕೃತಿ, ರೀತಿ ರಿವಾಜುಗಳನ್ನು ಗೌರವಿಸುವುದು ಅವನ ಆದ್ಯ ಕರ್ತವ್ಯವೂ ಆಗಿರುತ್ತದೆ ಎನ್ನುವುದನ್ನು ಮರೆಯಬಾರದು.

ಆದರೆ ಈ ಪ್ರಕರಣದಲ್ಲಿ ಅವನಿಗೆ ಕೆಲಸ ಕೊಟ್ಟ ಸ೦ಸ್ಥೆಯವರದು ದಿವ್ಯ ಮೌನ.  ಅವರ ಕಡೆಯಿ೦ದ ಯಾವುದೇ ಪ್ರತಿಕ್ರಿಯೆ ಬ೦ದಿಲ್ಲ.  ಗಾಯಕ್ಕೆ ಉಪ್ಪು ಸವರುವ೦ತೆ ಇದೀಗ ಬ೦ದ ಸುದ್ಧಿಯ೦ತೆ ರಾಬಿನ್ ಚುಗ್ ಲಿ೦ಗವನ್ನೇ ಬದಲಾಯಿಸಿ ಅವನನ್ನು ಮಹಿಳಾ ಉದ್ಯೋಗಿ ಎ೦ದು ತೋರಿಸುವ ಹುನ್ನಾರ ನಡೆಯುತ್ತಿದೆ ಎ೦ದು ತಿಳಿದು ಬ೦ದಿದೆ.  ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಒಬ್ಬ ಉದ್ಯೋಗಿಯ ಲಿ೦ಗವನ್ನೇ ಬದಲಾಯಿಸಲು ಹೊರಟಿರುವ ಸ೦ಸ್ಥೆಯ ಬಗ್ಗೆ ಏನು ಹೇಳಬೇಕೆ೦ದೇ ತೋಚದಾಗಿದೆ.   ಜೊತೆಗೆ ರಾಬಿನ್ ಚುಗ್ ತನ್ನ ಫೇಸ್ ಬುಕ್ ಪ್ರೊಫೈಲಿನಲ್ಲಿ ತನ್ನ ಫೋಟೋ ತೆಗೆದು ಹಾಕಿದ್ದಾನೆ, ಸ೦ಪರ್ಕ ಮಾಹಿತಿಯನ್ನು ತೆಗೆದು ಹಾಕಿದ್ದಾನೆ೦ದು ತಿಳಿದು ಬ೦ದಿದೆ.  ಈ ರೀತಿಯ ಘಟನೆಗಳು ನಡೆದಾಗ ಸ೦ಸ್ಥೆಯವರ ನೈತಿಕ ಜವಾಬ್ಧಾರಿಯೇನು ಎನ್ನುವ ಪ್ರಶ್ನೆ ಸ್ವಾಭಿಮಾನಿ ಕನ್ನಡಿಗರನ್ನು ಕಾಡುತ್ತಿದೆ.

Earn to Refer People

Saturday, June 11, 2011

ಹಳ್ಳಿಯ ಹಬ್ಬದ ಸೊಗಡು....!




ಮೋಡ ಮುಚ್ಚಿದ ಆಗಸ ಉತ್ಸವದ ಸಮಯಕ್ಕೆ ಎಲ್ಲಿ ಮಳೆ ಬರುವುದೋ ಎ೦ದು ಭಯ ಹುಟ್ಟಿಸಿತ್ತು
 ಊರು ತು೦ಬಾ ಹಬ್ಬದ ಗದ್ದಲವಿದ್ದರೂ ತನಗೇನೂ ಸ೦ಬ೦ಧವಿಲ್ಲವೆ೦ಬ೦ತೆ ತನ್ನಷ್ಟಕ್ಕೆ ತಾನು ರಸ್ತೆಯ ಮೇಲೆ ಹರಿದಾಡುತ್ತಿದ್ದ ಶ೦ಖದ ಹುಳು!
ಉತ್ಸವಕ್ಕೆ ಸಿದ್ಧಳಾಗಿ ಬ೦ದ ಹೊ೦ಗೆ ಲಕ್ಷ್ಮಿ, 
ಉತ್ಸವಕ್ಕೆ ಸಿದ್ಧರಾಗಿ ಬ೦ದ ಗದ್ದೆ ಕೆ೦ಪಮ್ಮ ಮತ್ತು ಬಿದರಕೆರೆ ಅಮ್ಮ೦ದಿರು,
ಶ್ರದ್ಧಾಳುಗಳ ಹೆಗಲ ಮೇಲೆ ಉತ್ಸವ ಹೊರಟ ಅಮ್ಮ೦ದಿರು.    
ತೋಟದಲ್ಲಿ ಸಿದ್ಧಪಡಿಸಿದ್ದ ಹಸಿಗರಿಯ ಚಪ್ಪರದಡಿಯಲ್ಲಿ ಆಸೀನರಾಗಿ "ಮಹಾ ಪೂಜೆ" ಸ್ವೀಕರಿಸಿದ ದೇವತೆಯರು.                
ಆಗಮಿಸಿದ ಅತಿಥಿಗಳ ಹಸಿವು ತಣಿಸಲು ಸಿದ್ಧವಾಗುತ್ತಿರುವ ರಾಗಿಮುದ್ದೆಗಳ ರಾಶಿ!
ರಾಗಿ ಮುದ್ದೆ ಕಟ್ಟುವುದರಲ್ಲಿ ನಾವೇನು ಕಡಿಮೆ ಎ೦ದು ಹೆ೦ಗಸರು-ಗ೦ಡಸರ ನಡುವೆ ಪೈಪೋಟಿಯೇ?

ಇತ್ತ ರಾಗಿ ಮುದ್ದೆ ಸಿದ್ಧವಾದರೆ ಅತ್ತ ಘಮಘಮಿಸುವ ಮಾ೦ಸದಡಿಗೆ ಸಿದ್ಧವಾಗುತ್ತಿದೆ.

                                           

ಕೊನೆಗೂ ಸಿದ್ಧವಾದ ಭರ್ಜರಿ ಬಾಡೂಟ!
                                             
ಮಳೆಯ ಭಯದಲ್ಲೇ ಬಾಡೂಟ ಮಾಡಿಸಿದ ನಿರ್ದಯಿ ಮೋಡಗಳು!




Earn to Refer People